ADVERTISEMENT

ಬಸ್‌ನಲ್ಲಿ ದೊಡ್ಡಪ್ಪನ ಮೇಲೆ ಮಚ್ಚಿನಿಂದ ಹಲ್ಲೆ

ಆಸ್ತಿ ವಿವಾದಕ್ಕೆ ತಮ್ಮನನ್ನು ಕೊಂದಿದ್ದಕ್ಕೆ ಪ್ರತೀಕಾರ: ಠಾಣೆಗೆ ಶರಣಾದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 18:33 IST
Last Updated 29 ಜುಲೈ 2025, 18:33 IST
ಕನಕಪುರದ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿದ್ದ ತನ್ನ ದೊಡ್ಡಪ್ಪನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಠಾಣೆಯತ್ತ ಹೊರಟ ಆರೋಪಿ ಆದಿತ್ಯ ಮತ್ತು ಆತನ ಸ್ನೇಹಿತ ಸಲ್ಮಾನ್
ಕನಕಪುರದ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿದ್ದ ತನ್ನ ದೊಡ್ಡಪ್ಪನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಠಾಣೆಯತ್ತ ಹೊರಟ ಆರೋಪಿ ಆದಿತ್ಯ ಮತ್ತು ಆತನ ಸ್ನೇಹಿತ ಸಲ್ಮಾನ್   

ಕನಕಪುರ: ಆಸ್ತಿ ವಿವಾದದಲ್ಲಿ ತನ್ನ ಸಹೋದರನನ್ನು ಕೊಂದಿದ್ದ ತನ್ನ ದೊಡ್ಡಪ್ಪನ ಮೇಲೆ ಯುವಕನೊಬ್ಬ ಸ್ನೇಹಿತನೊಂದಿಗೆ ಸೇರಿ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.

ಕೋರ್ಟ್‌ಗೆ ಹಾಜರಾಗಿ ಊರಿಗೆ ಹೋಗಲು ಮಂಗಳವಾರ ಮಧ್ಯಾಹ್ನ ನಗರದ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಕುಳಿತಿದ್ದ ತಾಲ್ಲೂಕಿನ ಇರಲ್‌ಪೋಡ್ ಪಕ್ಕದ ದಿಂಬದಳ್ಳಿ ಗ್ರಾಮದ ಮಾರೇಗೌಡ (52) ಮೇಲೆ ಮಾರೇಗೌಡ ಸಹೋದರ ಮಲ್ಲಯ್ಯನ ಮಗ ಆದಿತ್ಯ (30) ಹಾಗೂ ಆತನ ಸ್ನೇಹಿತ ಬೆಂಗಳೂರಿನ ಬನಶಂಕರಿಯ ಸಲ್ಮಾನ್ (19) ಕೊಲೆಗೆ ಯತ್ನಿಸಿದ್ದಾರೆ.

ನಂತರ ಆರೋಪಿಗಳು ಮಚ್ಚಿನ ಸಮೇತ ಕನಕಪುರ ಟೌನ್ ಪೊಲೀಸ್ ಠಾಣೆಗೆ  ತೆರಳಿ ಶರಣಾಗಿದ್ದಾರೆ. ಜಮೀನು ವಿವಾದ, ಸಹೋದರನ ಕೊಲೆ ಮತ್ತು ಹಳೆ ದ್ವೇಷದ ಹಿನ್ನೆಲೆಯಲ್ಲಿ ದೊಡ್ಡಪ್ಪನನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿ ಯುವಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. 

ADVERTISEMENT

ಗಂಭೀರವಾಗಿ ಗಾಯಗೊಂಡಿರುವ ಮಾರೇಗೌಡಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಆಸ್ತಿ ವಿವಾದ: ಹಲ್ಲೆಗೊಳಗಾಗಿರುವ ಮಾರೇಗೌಡ ಮತ್ತು ಆತನ ಸಹೋದರ ಮಲ್ಲಯ್ಯ ನಡುವೆ ಜಮೀನು ವಿವಾದವಿತ್ತು. ಇದೇ ಕಾರಣಕ್ಕೆ ಮಾರೇಗೌಡ ತನ್ನ ಸಹೋದರ ಮಲ್ಲಯ್ಯನ ಮಗ ಅಜಯ್‌ನನ್ನು ಕೊಲೆ ಮಾಡಿ ಜೈಲು ಸೇರಿದ್ದ.

ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರದ ಕೋರ್ಟ್‌ಗೆ ವಿಚಾರಣೆಗಾಗಿ ಮಂಗಳವಾರ ಬಂದಿದ್ದ ಎಂದು ಪೊಲೀಸರು ತಿಳಿಸಿದರು.

ತನ್ನ ತಮ್ಮನನ್ನು ಕೊಲೆ ಮಾಡಿದ್ದ ದೊಡ್ಡಪ್ಪನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದ ಆದಿತ್ಯ, ಇಂದು ಕೋರ್ಟ್‌ ವಿಚಾರಣೆಗೆ ಬರುವ ದೊಡ್ಡಪ್ಪನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಅದಕ್ಕಾಗಿ, ಎರಡು ಮಚ್ಚುಗಳನ್ನು ಖರೀದಿಸಿ ತನ್ನ ಗೆಳೆಯ ಸಲ್ಮಾನ್‌ನನ್ನು ಬೆಂಗಳೂರಿನಿಂದ ಕರೆಯಿಸಿಕೊಂಡಿದ್ದ.

ಬೆಳಗ್ಗೆಯಿಂದ ಮಾರೇಗೌಡನ ಚಲನವಲನಗಳ ಮೇಲೆ ಆದಿತ್ಯ ನಿಗಾ ಇಟ್ಟಿದ್ದ. ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದ ಮಾರೇಗೌಡ, ಮಧ್ಯಾಹ್ನ ಊರಿಗೆ ಹೋಗುವುದಕ್ಕಾಗಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿ ಕುಳಿತಿದ್ದ.

ಆಗ ಬಸ್‌ ಒಳಗೆ ನುಗ್ಗಿದ ಆರೋಪಿಗಳು, ಪ್ರಯಾಣಿಕರ ನಡುವೆ ಕುಳಿತಿದ್ದ ಮಾರೇಗೌಡನ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಇದರಿಂದಾಗಿ ಬೆದರಿದ ಪ್ರಯಾಣಿಕರು ಕೆಳಕ್ಕಿಳಿದು ದಿಕ್ಕಾಪಾಲಾಗಿ ಓಡಿದರು ಎಂದು ಪೊಲೀಸರು ಹೇಳಿದರು.

ಆಂಬುಲೆನ್ಸ್‌ನಲ್ಲಿ ಮಾರೇಗೌಡನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಠಾಣೆಗೆ ಬಂದು ಶರಣಾದ ಆರೋಪಿಗಳನ್ನು ಬಂಧಿಸಿ, ಮಚ್ಚುಗಳನ್ನು ವಶಕ್ಕೆ ಪಡೆದಿದ್ದಾರೆ.

‘ಆಸ್ತಿ ವಿಚಾರಕ್ಕಾಗಿ ದೊಡ್ಡಪ್ಪ ತನ್ನ ತಮ್ಮನನ್ನು ಕೊಲೆ ಮಾಡಿದ್ದ. ಅದಕ್ಕೆ ಪ್ರತೀಕಾರವಾಗಿ ಕೃತ್ಯ ಎಸಗಿದ್ದೇನೆ’ ಎಂದು ಆರೋಪಿ ಆದಿತ್ಯ ಹೇಳಿಕೆ ನೀಡಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಸ್‌ನೊಳಗೆ ಹಲ್ಲೆಗೊಳಗಾದ ಮಾರೇಗೌಡ ರಕ್ತದ ಮಡುವಿನಲ್ಲಿ ಬಿದ್ದಿರುವ ಹಾಗೂ ಆರೋಪಿಗಳು ಬಸ್ಸಿನಿಂದಿಳಿದು ಮಚ್ಚಿನೊಂದಿಗೆ ಹೋಗುವ ವಿಡಿಯೊಗಳು ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿವೆ.

ಸತ್ತಿದ್ದಾನೆಂದು ಬಿಟ್ಟು ಹೋದರು

ತಲೆ ಕೈ ಕುತ್ತಿಗೆ ಭುಜಕ್ಕೆ ಬಿದ್ದ ಮಚ್ಚಿನ ಏಟಿನಿಂದಾಗಿ ಮಾರೇಗೌಡ ರಕ್ತದ ಮಡುವಿನಲ್ಲಿ ಬಸ್‌ನೊಳಗೆ ಪ್ರಜ್ಞೆ ತಪ್ಪಿ ಬಿದ್ದರು. ಕೈ–ಕಾಲು ಆಡಿಸದ ಬಿದ್ದಿದ್ದ ಮಾರೇಗೌಡ ಸತ್ತಿದ್ದಾರೆ ಎಂದುಕೊಂಡು ಆರೋಪಿಗಳಿಬ್ಬರು ಬಸ್ಸಿನಿಂದ ಕೆಳಕ್ಕಿಳಿದರು. ಅರೆ ಕ್ಷಣದಲ್ಲಿ ನಡೆದ ಕೃತ್ಯದಿಂದ ಬೆಚ್ಚಿಬಿದ್ದ ಜನರು ನಿಲ್ದಾಣದಲ್ಲಿ ಏನಾಯಿತು ಎಂದು ನೋಡಲು ಬಸ್‌ನತ್ತ ಬಂದರು. ಆಗ ಆರೋಪಿಗಳು ‘ಏನಿಲ್ಲ ಅವನನ್ನು ಮುಗಿಸಿದ್ದೇನೆ. ನೀವ್ಯಾರೂ ಬರಬೇಕಿಲ್ಲ. ನಾವೇ ಪೊಲೀಸ್ ಠಾಣೆಗೆ ಹೋಗಿ ಶರಣಾಗುತ್ತೇವೆ’ ಎಂದು ಜನರಿಗೆ ಹೇಳುತ್ತಾ ಮಚ್ಚಿಗೆ ಅಂಟಿದ್ದ ರಕ್ತವನ್ನು ನೆಲಕ್ಕೆ ಒರೆಸಿ ಠಾಣೆಯತ್ತ ಹೋದರು. ಕೆಲ ಹೊತ್ತಿನ ನಂತರ ಮಾರೇಗೌಡ ಪ್ರಜ್ಞೆ ಬಂದು ಕೈ ಕಾಲು ಆಡಿಸುತ್ತಾ ನೆರವಿಗೆ ಅಂಗಲಾಚುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.