ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಹಸಿವಿನಿಂದ ಬಳಲಿದ್ದ ಮಕ್ಕಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2021, 3:47 IST
Last Updated 2 ಮೇ 2021, 3:47 IST
ಬಾಲಮಂದಿರದಲ್ಲಿ ಆಶ್ರಯ ಪಡೆದ ಮಕ್ಕಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ
ಬಾಲಮಂದಿರದಲ್ಲಿ ಆಶ್ರಯ ಪಡೆದ ಮಕ್ಕಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ   

ರಾಮನಗರ: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಒಂದೇ ಕುಟುಂಬದ ಏಳು ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳು ಹಸಿವಿನಿಂದ ಎಳನೀರು ಕಾಯಿ ತಿನ್ನುತ್ತಿದ್ದ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಈ ಮಕ್ಕಳನ್ನು ರಕ್ಷಿಸಿದ್ದು, ಅವರಿಗೆ ರಾಮನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ನೀಡಿದ್ದಾರೆ.

ಈ ಕುಟುಂಬದವರು ಎರಡು ತಿಂಗಳ ಹಿಂದೆ ತಮಿಳುನಾಡಿನ ಕೃಷ್ಣಗಿರಿಯಿಂದ ಇಲ್ಲಿಗೆ ಮಾವಿನಕಾಯಿ ಲೋಡ್ ಮಾಡುವ ಕೆಲಸಕ್ಕೆ ಬಂದಿದ್ದರು. ಆದರೆ, ಲಾಕ್‌ಡೌನ್ ಕಾರಣಕ್ಕೆ ಊರಿಗೆ ಹಿಂತಿರುಗಲು ಆಗಲಿಲ್ಲ ಎನ್ನಲಾಗಿದೆ.

ADVERTISEMENT

‘ರಕ್ಷಣೆಗೆ ಒಳಗಾದ ಮಕ್ಕಳೆಲ್ಲ 14 ವರ್ಷದ ಒಳಗಿನವರಾಗಿದ್ದಾರೆ. ಇವರ ಪೋಷಕರು ಸದ್ಯ ಚಿಂದಿ ಆಯಲು ಹೋಗುತ್ತಿದ್ದು, ಮಕ್ಕಳು ಮೈದಾನದಲ್ಲೇ ಇರುತ್ತಿದ್ದವು. ಅವರಿಗೆ ಸಾರ್ವಜನಿಕರು ಎಳನೀರು, ಬಿಸ್ಕತ್‌ ಹಾಗೂ ಆಹಾರ ನೀಡುತ್ತಿದ್ದರು. ಸದ್ಯ ಅವರಿಗೆ ಆಶ್ರಯ ಕಲ್ಪಿಸಿದ್ದು, ಮಂಗಳವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪೋಷಕರಿಗೆ ಮಾಹಿತಿ ನೀಡಿದ್ದೇವೆ’ ಎಂದು ರಕ್ಷಣಾ ಘಟಕದ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.