
ರಾಮನಗರ: ನಗರದ ರಂಗರಾಯರದೊಡ್ಡಿ ಕೆರೆ ಏರಿ ಮತ್ತು ರಸ್ತೆಯ ಅಕ್ಕಪಕ್ಕದ ಸ್ಥಳದಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇತ್ತೀಚೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ನಗರಸಭೆ ಆಡಳಿತ ಮಂಡಳಿ ಜೊತೆಗೆ ಸ್ಥಳೀಯ ವಾಯುವಿಹಾರಿಗಳು ಹಾಗೂ ಸಾರ್ವಜನಿಕರು ಸಹ ಕೈ ಜೋಡಿಸಿದರು.
ಬಳಿಕ ಮಾತನಾಡಿದ ಶೇಷಾದ್ರಿ, ‘ನಗರಸಭೆಯಿಂದ ಸ್ವಚ್ಛತಾ ಆಂದೋಲನ ನಡೆಸಲಾಗುತ್ತಿದೆ. ಎಲ್ಲಾ ಪೌರ ಕಾರ್ಮಿಕರನ್ನು ಒಂದೆಡೆ ಬಳಸಿಕೊಂಡು ಪ್ರತಿ ವಾರ್ಡ್ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಪ್ರತಿ ಬುಧವಾರ ಹಾಗೂ ಭಾನುವಾರ ಪೌರ ಕಾರ್ಮಿಕರಿಗೆ ರಜೆ ನೀಡಲಾಗುತ್ತಿದೆ. ಹಾಗಾಗಿ, ಪ್ರತಿ ದಿನ ಹೆಚ್ಚುವರಿಯಾಗಿ ಒಂದು ಗಂಟೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ’ ಎಂದರು.
‘ಗಣೇಶ ಚತುರ್ಥಿ ಹಬ್ಬದಂದು ರಂಗರಾಯರದೊಡ್ಡಿ ಕೆರೆ ಆವರಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಿರ್ಮಿಸಿರುವ ಸಿರಿಗೌರಿ ಕಲ್ಯಾಣಿಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ವಿಸರ್ಜನೆಗೆ ಅನುಕೂಲವಾಗುವಂತೆ ಕ್ರೇನ್, ಟ್ರ್ಯಾಕ್ಟರ್, ಈಜುಗಾರರ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾ, ಫೋಕಸ್ ಲೈಟ್ ಅಳವಡಿಕೆ ಜೊತೆಗೆ ಕಲ್ಯಾಣಿಗೆ ಬಣ್ಣ ಬಳಿಯಲಾಗುವುದು. ಈ ಎಲ್ಲಾ ಕೆಲಸಗಳನ್ನು ₹16 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದ್ದು, ಮೂರ್ತಿಗಳ ವಿಸರ್ಜನೆಗೆ 21 ದಿನ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಪಾರ್ವತಮ್ಮ, ಮಂಜುನಾಥ್, ನರಸಿಂಹ, ನಿಜಾಮುದ್ದೀನ್, ಗಿರಿಜಮ್ಮ ಗುರುವೇಗೌಡ, ವಿಜಯಕುಮಾರಿ, ಭೈರೇಗೌಡ, ನಾಗಮ್ಮ, ಸಮದ್, ನಗರಸಭೆ ಅಧಿಕಾರಿಗಳಾದ ಸುಬ್ರಹ್ಮಣ್ಯ, ವಿಶ್ವನಾಥ್, ವಿಜಯ್ಕುಮಾರ್, ದಿಲೀಪ್, ನಿರ್ಮಲ, ಪವಿತ್ರ, ಕಿರಣ್, ನಾಗರಾಜು , ಮೇಸ್ತ್ರಿಗಳಾದ ದೇವೇಂದ್ರ, ಕೊಲ್ಲಾಪುರಿ, ಶ್ರೀನಿವಾಸ್, ವೆಂಕಟರಾಮು, ಮೋಹನ, ನರಸಿಂಹ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.