ADVERTISEMENT

ಗ್ರೇಡ್–1 ಮೇಲ್ದರ್ಜೆಗೇರಿಸಲು ಪ್ರಸ್ತಾವ: ಹಿಗ್ಗಲಿದೆ ರಾಮನಗರ ನಗರಸಭೆ ವ್ಯಾಪ್ತಿ

ಓದೇಶ ಸಕಲೇಶಪುರ
Published 6 ಸೆಪ್ಟೆಂಬರ್ 2025, 2:27 IST
Last Updated 6 ಸೆಪ್ಟೆಂಬರ್ 2025, 2:27 IST
ರಾಮನಗರ ನಗರಸಭೆ ಕಚೇರಿ
ರಾಮನಗರ ನಗರಸಭೆ ಕಚೇರಿ   

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ರಾಮನಗರ ನಗರಸಭೆಯ ವ್ಯಾಪ್ತಿಯು ಹಿಗ್ಗಲಿದೆ. ಸದ್ಯ ಗ್ರೇಡ್–2 ಆಗಿರುವ ನಗರಸಭೆಯನ್ನು ಇದೀಗ ಗ್ರೇಡ್‌–1 ಆಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಇದಕ್ಕೆ ಪೂರಕವಾಗಿ ನಗರದ ಹೊರವಲಯದ 8 ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರಲಿವೆ.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವು ಹೊರವಲಯದ ಹಳ್ಳಿಗಳಿಗೂ ಚಾಚಿಕೊಂಡಿದೆ. ಈ ಹಳ್ಳಿಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ, ನಗರಕ್ಕೆ ಹೊಂದಿಕೊಂಡಂತೆ ಬೆಳೆದಿವೆ. ನಗರದ ಹೊರವಲಯಕ್ಕೆ ಅಭಿವೃದ್ದಿ ವಿಸ್ತರಣೆಯಾಗುತ್ತಿದ್ದರೂ, ನಗರದ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ನಗರಸಭೆಯ ವ್ಯಾಪ್ತಿ ಮಾತ್ರ ಹಿಗ್ಗಿಲ್ಲ.

ಶಾಸಕ ಹುಸೇನ್ ಪತ್ರ:

ನಗರಸಭೆಯನ್ನು ಗ್ರೇಡ್–1 ಆಗಿ ಮೇಲ್ದರ್ಜೆಗೇರಿಸಿ, ಗಡಿ ಭಾಗದ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ನಗರದಂಚಿನ 8 ಗ್ರಾಮಗಳನ್ನು ನಗರಸಭೆಗೆ ಸೇರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರಿಗೆ ಜೂನ್‌ ತಿಂಗಳಲ್ಲೇ ಪತ್ರ ಬರೆದಿದ್ದಾರೆ.

ಶಾಸಕರ ಪತ್ರ ಉಲ್ಲೇಖಿಸಿ, ಜಿಲ್ಲಾಧಿಕಾರಿ ಅವರು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರಿಗೆ ಪತ್ರ ಬರೆದಿದ್ದಾರೆ. ನಗರಕ್ಕೆ ಹೊಂದಿಕೊಂಡಂತಿರುವ ಹರಿಸಂದ್ರ, ಬಿಳಗುಂಬ, ವಿಭೂತಿಕೆರೆ ಹಾಗೂ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳ ಸಮಗ್ರ ಅಭಿವೃದ್ಧಿ ಹಾಗೂ ನಗರಸಭೆ ವ್ಯಾಪ್ತಿ ವಿಸ್ತರಣೆ ದೃಷ್ಟಿಯಿಂದ ಆ ಗ್ರಾಮಗಳನ್ನು ನಗರಸಭೆಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಪೌರಾಯುಕ್ತರಿಗೆ ಸೂಚನೆ:

ಜಿಲ್ಲಾಧಿಕಾರಿ ಪತ್ರ ಆಧರಿಸಿ ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಅವರಿಗೆ ಸಿಇಒ ಆಗಸ್ಟ್‌ನಲ್ಲಿ ಪತ್ರ ಬರೆದಿದ್ದಾರೆ. ನಗರಸಭೆ ವ್ಯಾಪ್ತಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಪೌರಸಭೆಗಳ ಅಧಿನಿಮಯ –1964ರ ನಿಯಮ–3 ಮತ್ತು 9ರ ಪ್ರಕಾರ ಅನುಸರಿಸಬೇಕಾದ ಮಾನದಂಡಗಳಿಗೆ ಅನುಗುಣವಾಗಿ ಆರು ಅಂಶಗಳ ಕುರಿತು ವರದಿ ಕೇಳಿದ್ದಾರೆ.

‘ಜಿ.ಪಂ. ಸಿಇಒ ಅವರ ಪತ್ರದ ಮೇರೆಗೆ, ನಗರಸಭೆ ವ್ಯಾಪ್ತಿಗೆ ಸೇರಲಿರುವ ಪ್ರದೇಶದ ಜನಸಂಖ್ಯೆ, ಜನಸಾಂದ್ರತೆ, ಆ ಪ್ರದೇಶದ ಸ್ಥಳೀಯ ಆಡಳಿತಕ್ಕೆ ಬರುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಶೇಕಡವಾರು ಉದ್ಯೋಗ, ಆರ್ಥಿಕ ಪ್ರಾಮುಖ್ಯತೆ ಸೇರಿದಂತೆ ಇತರ ಅಂಶಗಳ ಜೊತೆಗೆ, ಸರಹದ್ದು ವಿಸ್ತರಣೆ ನಂತರದ ಗಡಿ ಮಾಹಿತಿ, ನಕ್ಷೆ, ಪೂರಕ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಪೌರಾಯುಕ್ತ ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

3 ದಶಕದ ಬಳಿಕ ವಿಸ್ತರಣೆ: 

ಪುರಸಭೆಯಾಗಿದ್ದ ರಾಮನಗರವು 1995ರಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೇರಿತು. ಇದೀಗ ಮೂವತ್ತು ವರ್ಷಗಳನ್ನು ಪೂರೈಸಿದೆ. 2007ರಲ್ಲಿ ರಾಮನಗರವು ಬೆಂಗಳೂರು ಗ್ರಾಮಾಂತರದಿಂದ ಬೇರ್ಪಟ್ಟು ಜಿಲ್ಲೆಯಾಗಿ ರೂಪುಗೊಂಡಿತು.

ಇತ್ತೀಚೆಗೆ ಸರ್ಕಾರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ಬಳಿಕ, ರಾಮನಗರವು ಜಿಲ್ಲಾಕೇಂದ್ರವಾಗಿ ಉಳಿದಿದೆ. ನಗರವು ದಿನದಿಂದ ದಿನಕ್ಕೆ ನಾಲ್ಕೂ ದಿಕ್ಕುಗಳಲ್ಲಿ ಬೆಳೆಯುತ್ತಿದ್ದು, ಮೂರು ದಶಕದ ಬಳಿಕ ನಗರಸಭೆಯ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ.

ನಗರವು ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ಕನಕಪುರ ರಸ್ತೆ, ಹುಣಸನಹಳ್ಳಿ ರಸ್ತೆ, ಹಳೆ ಬೆಂಗಳೂರು–ಮೈಸೂರು ಹೆದ್ದಾರಿಯ ಕುಂಬಾಪುರ ಗೇಟ್‌ ದಾಟಿ ಜಾನಪದ ಲೋಕದವರೆಗೆ ವಸತಿ ಪ್ರದೇಶಗಳು ವಿಸ್ತರಣೆಗೊಂಡಿವೆ. ಹೀಗಾಗಿ, ಇಲ್ಲಿನ ನಗರಸಭೆಗೆ ಗ್ರೇಡ್‌–1 ಆಗಿ ಮೇಲ್ದರ್ಜೆಗೇರುವ ಎಲ್ಲಾ ಅರ್ಹತೆಗಳಿವೆ.

ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ
ನಗರಸಭೆ ಜನಸಂಖ್ಯೆ ಹೆಚ್ಚಿದಂತೆ ವ್ಯಾಪ್ತಿಯೂ ಹಿಗ್ಗಬೇಕಿದೆ. ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಬೇಕಾದರೆ ಗ್ರೇಡ್‌–1ಗೆ ಏರಬೇಕಿದೆ. ಅದಕ್ಕಾಗಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇನೆ. ಅವರೂ ಸ್ಪಂದಿಸಿದ್ದು ಅಗತ್ಯ ಪ್ರಕ್ರಿಯೆ ನಡೆಯುತ್ತಿದೆ
– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಕೆ. ಶೇಷಾದ್ರಿ ಶಶಿ ಅಧ್ಯಕ್ಷ ರಾಮನಗರ ನಗರಸಭೆ
‘ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ’
‘ಜಿಲ್ಲಾ ಕೇಂದ್ರವಾಗಿರುವ ರಾಮನಗರದ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯ ವಿಸ್ತರಣೆ ಮತ್ತು ಗ್ರೇಡ್‌–1 ಆಗಿ ಮೇಲ್ದರ್ಜೆಗೇರಿಸಲು ಶಾಸಕ ಇಕ್ಬಾಲ್ ಹುಸೇನ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆ ಮೇರೆಗೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ. ನಗರದ ಅಭಿವೃದ್ದಿಗೆ ಹೆಚ್ಚುವರಿ ಅನುದಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಮಾಡಲಾಗಿದೆ. ಗ್ರೇಡ್‌–1 ನಗರಸಭೆಯಾಗಿ ನಗರ ವಿಸ್ತರಣೆಯಾಗುವುದರಿಂದ ವ್ಯಾಪ್ತಿಯೂ ಹಿಗ್ಗಲಿದೆ. ವಾರ್ಡ್‌ಗಳ ಸಂಖ್ಯೆ ಜೊತೆಗೆ ಸಿಬ್ಬಂದಿ ಸಂಖ್ಯೆಯೂ ಹೆಚ್ಚಾಗಲಿದೆ. ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಆಗಿರುವುದರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.
ಡಾ. ಜಯಣ್ಣ ಪೌರಾಯುಕ್ತ ರಾಮನಗರ ನಗರಸಭೆ
‘ಒಂದೂವರೆ ಲಕ್ಷ ಜನಸಂಖ್ಯೆ ಅಗತ್ಯ’
‘ಗ್ರೇಡ್–1 ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಮತ್ತು ನಗರದ ಗಡಿಯ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಜಿ.ಪಂ. ಕೇಳಿರುವ ವರದಿಗಳನ್ನು ಸಿದ್ದಪಡಿಸಲಾಗುತ್ತಿದೆ. ಗ್ರೇಡ್‌–1 ಆಗಬೇಕಾದರೆ ನಗರದ ಜನಸಂಖ್ಯೆ 1.50 ಲಕ್ಷ ಇರಬೇಕು. ಸದ್ಯದ ಜನಸಂಖ್ಯೆ ಅಂದಾಜು 1.35 ಲಕ್ಷ ಇದೆ. ಜನಸಂಖ್ಯೆ ಮಾನದಂಡ ತಲುಪಲು ಹೊರವಲಯದ ಗ್ರಾಮಗಳನ್ನು ಸೇರಿಸಿಕೊಳ್ಳಲು ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ವರದಿ ಜಿ.ಪಂ. ಮತ್ತು ತಾ.ಪಂ.ಗೆ ಹೋಗಲಿದೆ. ನಗರಸಭೆ ವ್ಯಾಪ್ತಿಗೆ ಗ್ರಾಮಗಳನ್ನು ಬಿಟ್ಟು ಕೊಡಲು ಸಂಬಂಧಪಟ್ಟ ಗ್ರಾ.ಪಂ.ನಲ್ಲಿ ಪ್ರಸ್ತಾವಕ್ಕೆ ಒಪ್ಪಿಗೆ ಸಿಗಬೇಕು. ಬಳಿಕ ಅಂತಿಮ ವರದಿಯು ಪೌರಾಡಳಿತ ನಿರ್ದೇಶನಾಲಯ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ ಪರಿಶೀಲನೆಗೆ ಒಳಪಡಲಿದೆ. ಅಂತಿಮವಾಗಿ ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ನಗರಸಭೆಯು ಗ್ರೇಡ್‌–1 ಆಗಿ ಮೇಲ್ದರ್ಜೆಗೇರಲಿದೆ’ ಎಂದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಹೇಳಿದರು.
ಯಾವ್ಯಾವ ಗ್ರಾಮ ಸೇರಲಿವೆ?
ಹರಿಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗೇನಹಳ್ಳಿ ಕೆಂಪೇಗೌಡನದೊಡ್ಡಿ ವಡೇರಹಳ್ಳಿ ವಿಭೂತಿಕೆರೆ ಪಂಚಾಯಿತಿ ವ್ಯಾಪ್ತಿಯ ಅರ್ಚಕರಹಳ್ಳಿ ಚನ್ನಮಾನಹಳ್ಳಿಹುಣಸನಹಳ್ಳಿ ಪಂಚಾಯಿತಿಯ ಕೊತ್ತಿಪುರ ಶಿಡ್ಲುಕಲ್ಲು ಹಾಗೂ ಬಿಳುಗುಂಬ ಪಂಚಾಯಿತಿ ವ್ಯಾಪ್ತಿಯ ಬೋಳಪ್ಪನಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.