ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ರಾಮನಗರ ನಗರಸಭೆಯ ವ್ಯಾಪ್ತಿಯು ಹಿಗ್ಗಲಿದೆ. ಸದ್ಯ ಗ್ರೇಡ್–2 ಆಗಿರುವ ನಗರಸಭೆಯನ್ನು ಇದೀಗ ಗ್ರೇಡ್–1 ಆಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಇದಕ್ಕೆ ಪೂರಕವಾಗಿ ನಗರದ ಹೊರವಲಯದ 8 ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರಲಿವೆ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವು ಹೊರವಲಯದ ಹಳ್ಳಿಗಳಿಗೂ ಚಾಚಿಕೊಂಡಿದೆ. ಈ ಹಳ್ಳಿಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ, ನಗರಕ್ಕೆ ಹೊಂದಿಕೊಂಡಂತೆ ಬೆಳೆದಿವೆ. ನಗರದ ಹೊರವಲಯಕ್ಕೆ ಅಭಿವೃದ್ದಿ ವಿಸ್ತರಣೆಯಾಗುತ್ತಿದ್ದರೂ, ನಗರದ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ನಗರಸಭೆಯ ವ್ಯಾಪ್ತಿ ಮಾತ್ರ ಹಿಗ್ಗಿಲ್ಲ.
ನಗರಸಭೆಯನ್ನು ಗ್ರೇಡ್–1 ಆಗಿ ಮೇಲ್ದರ್ಜೆಗೇರಿಸಿ, ಗಡಿ ಭಾಗದ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ನಗರದಂಚಿನ 8 ಗ್ರಾಮಗಳನ್ನು ನಗರಸಭೆಗೆ ಸೇರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರಿಗೆ ಜೂನ್ ತಿಂಗಳಲ್ಲೇ ಪತ್ರ ಬರೆದಿದ್ದಾರೆ.
ಶಾಸಕರ ಪತ್ರ ಉಲ್ಲೇಖಿಸಿ, ಜಿಲ್ಲಾಧಿಕಾರಿ ಅವರು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರಿಗೆ ಪತ್ರ ಬರೆದಿದ್ದಾರೆ. ನಗರಕ್ಕೆ ಹೊಂದಿಕೊಂಡಂತಿರುವ ಹರಿಸಂದ್ರ, ಬಿಳಗುಂಬ, ವಿಭೂತಿಕೆರೆ ಹಾಗೂ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳ ಸಮಗ್ರ ಅಭಿವೃದ್ಧಿ ಹಾಗೂ ನಗರಸಭೆ ವ್ಯಾಪ್ತಿ ವಿಸ್ತರಣೆ ದೃಷ್ಟಿಯಿಂದ ಆ ಗ್ರಾಮಗಳನ್ನು ನಗರಸಭೆಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಪತ್ರ ಆಧರಿಸಿ ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಅವರಿಗೆ ಸಿಇಒ ಆಗಸ್ಟ್ನಲ್ಲಿ ಪತ್ರ ಬರೆದಿದ್ದಾರೆ. ನಗರಸಭೆ ವ್ಯಾಪ್ತಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಪೌರಸಭೆಗಳ ಅಧಿನಿಮಯ –1964ರ ನಿಯಮ–3 ಮತ್ತು 9ರ ಪ್ರಕಾರ ಅನುಸರಿಸಬೇಕಾದ ಮಾನದಂಡಗಳಿಗೆ ಅನುಗುಣವಾಗಿ ಆರು ಅಂಶಗಳ ಕುರಿತು ವರದಿ ಕೇಳಿದ್ದಾರೆ.
‘ಜಿ.ಪಂ. ಸಿಇಒ ಅವರ ಪತ್ರದ ಮೇರೆಗೆ, ನಗರಸಭೆ ವ್ಯಾಪ್ತಿಗೆ ಸೇರಲಿರುವ ಪ್ರದೇಶದ ಜನಸಂಖ್ಯೆ, ಜನಸಾಂದ್ರತೆ, ಆ ಪ್ರದೇಶದ ಸ್ಥಳೀಯ ಆಡಳಿತಕ್ಕೆ ಬರುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಶೇಕಡವಾರು ಉದ್ಯೋಗ, ಆರ್ಥಿಕ ಪ್ರಾಮುಖ್ಯತೆ ಸೇರಿದಂತೆ ಇತರ ಅಂಶಗಳ ಜೊತೆಗೆ, ಸರಹದ್ದು ವಿಸ್ತರಣೆ ನಂತರದ ಗಡಿ ಮಾಹಿತಿ, ನಕ್ಷೆ, ಪೂರಕ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಪೌರಾಯುಕ್ತ ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಪುರಸಭೆಯಾಗಿದ್ದ ರಾಮನಗರವು 1995ರಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೇರಿತು. ಇದೀಗ ಮೂವತ್ತು ವರ್ಷಗಳನ್ನು ಪೂರೈಸಿದೆ. 2007ರಲ್ಲಿ ರಾಮನಗರವು ಬೆಂಗಳೂರು ಗ್ರಾಮಾಂತರದಿಂದ ಬೇರ್ಪಟ್ಟು ಜಿಲ್ಲೆಯಾಗಿ ರೂಪುಗೊಂಡಿತು.
ಇತ್ತೀಚೆಗೆ ಸರ್ಕಾರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ಬಳಿಕ, ರಾಮನಗರವು ಜಿಲ್ಲಾಕೇಂದ್ರವಾಗಿ ಉಳಿದಿದೆ. ನಗರವು ದಿನದಿಂದ ದಿನಕ್ಕೆ ನಾಲ್ಕೂ ದಿಕ್ಕುಗಳಲ್ಲಿ ಬೆಳೆಯುತ್ತಿದ್ದು, ಮೂರು ದಶಕದ ಬಳಿಕ ನಗರಸಭೆಯ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ.
ನಗರವು ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ಕನಕಪುರ ರಸ್ತೆ, ಹುಣಸನಹಳ್ಳಿ ರಸ್ತೆ, ಹಳೆ ಬೆಂಗಳೂರು–ಮೈಸೂರು ಹೆದ್ದಾರಿಯ ಕುಂಬಾಪುರ ಗೇಟ್ ದಾಟಿ ಜಾನಪದ ಲೋಕದವರೆಗೆ ವಸತಿ ಪ್ರದೇಶಗಳು ವಿಸ್ತರಣೆಗೊಂಡಿವೆ. ಹೀಗಾಗಿ, ಇಲ್ಲಿನ ನಗರಸಭೆಗೆ ಗ್ರೇಡ್–1 ಆಗಿ ಮೇಲ್ದರ್ಜೆಗೇರುವ ಎಲ್ಲಾ ಅರ್ಹತೆಗಳಿವೆ.
ನಗರಸಭೆ ಜನಸಂಖ್ಯೆ ಹೆಚ್ಚಿದಂತೆ ವ್ಯಾಪ್ತಿಯೂ ಹಿಗ್ಗಬೇಕಿದೆ. ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಬೇಕಾದರೆ ಗ್ರೇಡ್–1ಗೆ ಏರಬೇಕಿದೆ. ಅದಕ್ಕಾಗಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇನೆ. ಅವರೂ ಸ್ಪಂದಿಸಿದ್ದು ಅಗತ್ಯ ಪ್ರಕ್ರಿಯೆ ನಡೆಯುತ್ತಿದೆ– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.