
ರಾಮನಗರ: ನಗರದ ಛತ್ರದ ಬೀದಿಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗದಲ್ಲಿ ₹19 ಲಕ್ಷ ವೆಚ್ಚದಲ್ಲಿ 180 ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ರಥ ಸಾಗುವ ಛತ್ರದ ಬೀದಿ ದಾರಿಯ ಅಭಿವೃದ್ಧಿ ಅಪೂರ್ಣವಾಗಿತ್ತು. ಈ ಭಾಗದಲ್ಲಿ ಶ್ರೀರಾಮ, ಆಂಜನೇಯ ಸ್ವಾಮಿ ಹಾಗೂ ರಾಘವೇಂದ್ರ ಸ್ವಾಮಿ ಸೇರಿ ಮೂರು ಪ್ರಮುಖ ದೇವಾಲಯಗಳಿವೆ. ಇಲ್ಲಿಗೆ ಬರುವ ಭಕ್ತರು ಹಾಗೂ ಸಾರ್ವಜನಿಕರ ಸಂಚಾರ, ವಾಹನ ಸಂಚಾರಕ್ಕೂ ಬಹಳ ತೊಂದರೆಯಾಗಿತ್ತು’ ಎಂದರು.
‘ಈ ಭಾಗದ ಜನರು ರಸ್ತೆ ಅಭಿವೃದ್ದಿ ಕಾಮಗಾರಿಗೆ ಹಿಂದಿನಿಂದಲೂ ಒತ್ತಾಯ ಮಾಡುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ನಿಧಿ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.
‘ನಗರದ ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಸ ಎಸೆಯುತ್ತಿದ್ದಾರೆ. ವಿದ್ಯಾವಂತರೇ ವಾಹನದಲ್ಲಿ ಕಸ ತಂದು ಹಾಕುತ್ತಿದ್ದಾರೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ನಗರಸಭೆಯು ರಾಯಭಾರಿಯನ್ನು ನೇಮಕ ಮಾಡಿದೆ. ಶಾಲಾ-ಕಾಲೇಜುಗಳು ಮತ್ತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಬಿಬಿಎಂಪಿಯಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ವಹಿಸುವಂತೆ ನಮ್ಮ ನಗರಸಭೆ ವ್ಯಾಪ್ತಿಯಲ್ಲಿಯೂ ಸಹ ಕ್ರಮ ವಹಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಮಹಾಲಕ್ಷ್ಮಿ ಗೂಳಿಗೌಡ, ಸೋಮಶೇಖರ್ (ಮಣಿ), ಅಜ್ಮತ್, ಮುಖಂಡರಾದ ನಾರಾಯಣಪ್ಪ, ಹಾಲಿನ ಚಂದ್ರು, ಗಿರಿಜಮ್ಮ, ರಾಜು, ನಗರಸಭೆ ಎಇಇ ವಿಶ್ವನಾಥ್, ಎಂಜಿನಿಯರ್ ಪವಿತ್ರ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.