ADVERTISEMENT

ಟ್ರ್ಯಾಕ್ಟರ್ ಪಲ್ಟಿ: ಐವರು ಮಹಿಳೆಯರು ಸಾವು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 20:32 IST
Last Updated 21 ಡಿಸೆಂಬರ್ 2020, 20:32 IST
ಅಪಘಾತ ನಡೆದ ಸ್ಥಳ
ಅಪಘಾತ ನಡೆದ ಸ್ಥಳ   

ಕನಕಪುರ (ರಾಮನಗರ): ತಾಲ್ಲೂಕಿನ ದಬ್ಬಗುಳಿ ಗ್ರಾಮದ ಬಳಿ ಸೋಮವಾರ ಟ್ರ್ಯಾಕ್ಟರ್‌ ಮಗುಚಿ ಬಿದ್ದು ದೇವರ ದರ್ಶನಕ್ಕೆಂದು ತೆರಳುತ್ತಿದ್ದ ಐವರು ಮಹಿಳೆಯರು ಮೃತಪಟ್ಟಿದ್ದಾರೆ.

ಕನಕಪುರ ತಾಲ್ಲೂಕಿನ ಕೆರಳಾಳುಸಂದ್ರದವರಾದ ಮಂಗಳಾ (25), ಗೌರಮ್ಮ (60), ಪುಟ್ಟನಿಂಗಮ್ಮ (60), ಈರಮ್ಮ (85) ಹಾಗೂ ಹೊಸಬಮ್ಮ (75) ಮೃತರು. ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆರಳಾಳುಸಂದ್ರ ಗ್ರಾಮದ ಸುಮಾರು 25 ಮಂದಿ ಟ್ರ್ಯಾಕ್ಟರ್‌ನಲ್ಲಿ ತಮಿಳುನಾಡು ಗಡಿಯಲ್ಲಿರುವ ದಬ್ಬಗುಳೇಶ್ವರ ದೇವಸ್ಥಾನಕ್ಕೆ ಹೊರಟಿದ್ದರು. ಕಡಿದಾದ ತಿರುವುಗಳುಳ್ಳ ಕಚ್ಚಾ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅಲುಗಾಟ ಹೆಚ್ಚಾಗಿದ್ದು, ಟ್ರ್ಯಾಕ್ಟರ್‌ ಎಂಜಿನ್‌ ಮತ್ತು ಹಿಂಬದಿ ಟ್ರಾಲಿ ನಡುವಿನ ಸಂಪರ್ಕ ತುಂಡಾಗಿದೆ. ಇದರಿಂದ ಟ್ರಾಲಿ ಹಿಂದಕ್ಕೆ ಮಗುಚಿದೆ. ಕೆಳಗೆ ಬಿದ್ದ ರಭಸಕ್ಕೆ ಐವರು ಸ್ಥಳದಲ್ಲೇ ಅಸುನೀಗಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.

ADVERTISEMENT

ತಮಿಳುನಾಡಿನ ಅಂಚೆಟ್ಟಿ ಆಸ್ಪತ್ರೆಯಲ್ಲಿ ಏಳು ಜನ, ಕನಕಪುರ ತಾಲ್ಲೂಕಿನ ಹುಣಸನಹಳ್ಳಿ ಪ್ರಾಥಮಿಕ ಕೇಂದ್ರದಲ್ಲಿ ಮೂವರು ಹಾಗೂ ಕನಕಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಆರು ಮಂದಿ ಚಿಕಿತ್ಸೆ ಪಡೆದರು. ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಕೆರಳಾಳುಸಂದ್ರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಮೃತರ ಕುಟುಂಬಸ್ಥರು, ಸಂಬಂಧಿಕರ ರೋಧನೆ ಹೇಳತೀರದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.