ರಾಮನಗರ: ‘ಯಾತಕ್ಕೆ ಮಳೆ ಹೋದವೋ ಶಿವ ಶಿವ... ಲೋಕಾ ತಲ್ಲಣಿಸುತಾವೋ... ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು, ಉರಿಸಿ ಕೊಲ್ಲಲುಬಾರದೆ ಶಿವ ಶಿವ...’– ಮಳೆಗಾಗಿ ಆಗಸವನ್ನು ದಿಟ್ಟಿಸುತ್ತಾ ಬರದಂಚಿಗೆ ಸರಿಯುವ ತಮ್ಮ ಬದುಕಿನ ಸ್ಥಿತಿಯನ್ನು ಶಿವನೊಂದಿಗೆ ತೋಡಿಕೊಳ್ಳುವ ಜನಪದರ ಈ ಸಾಲುಗಳು ಅಂದಿಗೂ, ಇಂದಿಗೂ ಪ್ರಸ್ತುತ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಳೆ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಜೂನ್ ತಿಂಗಳಾರಂಭದಲ್ಲಿ ಮುಂಗಾರು ಶುರುವಾಗಿ ಇದೀಗ ಎರಡು ತಿಂಗಳು ಕಳೆದು ಹೋಗಿದೆ. ಇದೀಗ ಆಗಸ್ಟ್ ತಿಂಗಳಿಗೆ ಕಾಲಿಟ್ಟರೂ ಜಿಲ್ಲೆಯಲ್ಲಿ ವಾಡಿಕೆ ಮಳೆ ನಿರೀಕ್ಷೆ ತಲುಪಿಲ್ಲ. ಈ ವರ್ಷವೂ ಜಿಲ್ಲೆ ಮೇಲೆ ವರುಣ ಮುನಿಸಿಕೊಂಡಿದ್ದಾನೆ.
ಮಳೆಗಾಲದಲ್ಲಿ ಮೈದುಂಬುತ್ತಿದ್ದ ಜಿಲ್ಲೆಯ ನದಿಗಳಾದ ಅರ್ಕಾವತಿ, ವೃಷಭಾವತಿ, ಕಣ್ವ ನದಿಗಳು ಒಮ್ಮೆಯೂ ಉಕ್ಕಿ ಹರಿಯಲಿಲ್ಲ. ನದಿಯಂಚಿನ ಪಾತ್ರವನ್ನು ಸ್ಪರ್ಶಿಸದೆ ಎಂದಿನಂತೆ ಹಳ್ಳಗಳಂತೆ ಹರಿಯುತ್ತಿವೆ. ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಆಸರೆಯಾಗಿರುತ್ತಿದ್ದ ಕೆರೆಗಳು ಸಹ ಮಳೆಗಾಳದಲ್ಲಿ ಜೀವಕಳೆ ಕಳೆದುಕೊಂಡಿವೆ. ಜಿಲ್ಲೆಯ ಯಾವ ಕೆರೆಯೂ ತುಂಬಿ ಕೋಡಿ ಹರಿದಿದ್ದು ವರದಿಯಾಗಿಲ್ಲ.
ಮಾಗಡಿಯಲ್ಲೇ ಹೆಚ್ಚು: ಜಿಲ್ಲೆಯಲ್ಲಿ ಜೂನ್ ತಿಂಗಳ ವಾಡಿಕೆ ಮಳೆ 69.7 ಮಿ.ಮೀ. ಪೈಕಿ 56.3 ಮಿ.ಮೀ. ಮಳೆ ಮಾತ್ರ ಬಂದಿದ್ದು 19 ಮಿ.ಮೀ. ಕೊರತೆಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ತಾಲ್ಲೂಕಾದ ಮಾಗಡಿಯಲ್ಲೇ ಈ ವರ್ಷ ವಾಡಿಕೆ ಮಳೆ 85.4 ಮಿ.ಮೀ. ಪೈಕಿ 77 ಮಿ.ಮೀ. ಮಳೆ ಕೊರೆಯಾಗಿದೆ.
ಜೂನ್ನಲ್ಲಿ ಕನಕಪುರ ತಾಲ್ಲೂಕಿನಲ್ಲಿ ಮಾತ್ರ ವಾಡಿಕೆ ಮಳೆ ಬಿದ್ದಿದೆ. ಇಲ್ಲಿ ನಿರೀಕ್ಷಿತ ಮಳೆ 67.1 ಮಿ.ಮೀ. ಪೈಕಿ 67.4 ಮಿ.ಮೀ. ಮಳೆಯಾಗಿದೆ. ಉಳಿದಂತೆ ಮಾಗಡಿ, ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ ಸೇರಿ ನಾಲ್ಕೂ ತಾಲ್ಲೂಕುಗಳಲ್ಲಿ ಮಳೆ ಕೊರೆಯಾಗಿದೆ ಎನ್ನುತ್ತವೆ ಕೃಷಿ ಇಲಾಖೆಯ ಅಂಕಿಅಂಶಗಳು.
ಜುಲೈನಲ್ಲಿ ಜಿಲ್ಲೆಯ ವಾಡಿಕೆ ಮಳೆ 83 ಮಿ.ಮೀ. ಪೈಕಿ 71 ಮಿ.ಮೀ. ಬಂದಿದ್ದು 14 ಮಿ.ಮೀ. ಮಾತ್ರ ಸುರಿದಿದೆ. ಐದೂ ತಾಲ್ಲೂಕುಗಳಲ್ಲಿ ನಿರೀಕ್ಷಿತ ವಾಡಿಕೆ ಮಳೆ ಬಂದಿಲ್ಲ. ಅದರಲ್ಲೂ ರಾಮನಗರ ಮತ್ತು ಹಾರೋಹಳ್ಳಿಯಲ್ಲಿ ತೀವ್ರ ಮಳೆ ಕೊರೆಯಾಗಿದೆ. ರಾಮನಗರದಲ್ಲಿ ವಾಡಿಕೆ ಮಳೆ 102.2 ಮಿ.ಮೀ. ಪೈಕಿ 66.5 ಮಿ.ಮೀ. ಮಳೆಯಾಗಿದೆ. ಹಾರೋಹಳ್ಳಿಯಲ್ಲಿ ವಾಡಿಕೆ ಮಳೆ 87.7 ಮಿ.ಮೀ. ಪೈಕಿ 36 ಮಿ.ಮೀ. ಕೊರತೆಯಾಗಿದೆ.
ಲೆಕ್ಕದಲ್ಲಷ್ಟೇ ಮಳೆ: ‘ಕೃಷಿ ಇಲಾಖೆಯು ನೀಡುವ ಮಳೆಯ ಅಂಕಿಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಮಳೆ ಕೊರತೆ ಇಲ್ಲವೆನಿಸುತ್ತದೆ. ಆದರೆ, ವಾಸ್ತವ ಸ್ಥಿತಿ ಅದಕ್ಕೆ ಭಿನ್ನವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ದಿನ ಸಾಕು ಎನಿಸುವಷ್ಟು ಮಳೆ ಸುರಿದಿಲ್ಲ. ಜನ ಛತ್ರಿ ಇಲ್ಲದೆ ಹೊರಕ್ಕೆ ಹೋಗಲಾಗದ ಒಂದೇ ಒಂದು ದಿನಕ್ಕೂ ಜನ ಸಾಕ್ಷಿಯಾಗಿಲ್ಲ’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕಾಂಕ್ರೀಟ್ ಕಾಡೆನಿಸಿರುವ ರಾಜಧಾನಿ ಬೆಂಗಳೂರಿಗೆ ಸುರಿಯುವಷ್ಟು ಮಳೆಯೂ ನಮ್ಮ ಜಿಲ್ಲೆಗೆ ಬಂದಿಲ್ಲ. ಹೀಗಾದರೆ, ಕೃಷಿ ಮತ್ತು ತೋಟಗಾರಿಕೆಯನ್ನೇ ನೆಚ್ಚಿಕೊಂಡಿರುವ ರೈತಾಪಿ ಜನರ ಬದುಕಿನ ಗತಿ ಏನು? ಮಾವು, ರೇಷ್ಮೆ, ರಾಗಿ, ಹೈನುಗಾರಿಕೆಗೆ ಮಳೆಯು ಪೂರಕವಾಗಿಲ್ಲ. ಮಳೆಯಾಶ್ರಿತ ಕೃಷಿ ಮತ್ತು ತೋಟಗಾರಿಕೆ ಮಾಡುವವರು ಈ ಸಲವು ನಷ್ಟದ ಕೂಪಕ್ಕೆ ಬೀಳಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಳೆ ಕೊರತೆಯಾಗಿಲ್ಲ. ಮಳೆ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ ಅಷ್ಟೆ. ಈ ತಿಂಗಳು ಸಹ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಜುಲೈನಲ್ಲಿ ಶುರುವಾಗಲಿರುವ ಬಿತ್ತನೆ ಚಟುವಟಿಕೆ ಆಗಸ್ಟ್ನಲ್ಲಿ ಬಿರುಸಾಗಲಿದೆ
ಎನ್. ಅಂಬಿಕಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಬೆಂಗಳೂರು ದಕ್ಷಿಣ
‘ಈ ಸಲವೂ ಕಾಡುತ್ತಿದೆ ಬರದ ಆತಂಕ’
‘ಜಿಲ್ಲೆಯಲ್ಲಿ ಈ ವರ್ಷವೂ ಮಳೆಯದ್ದು ಕಣ್ಣಾಮುಚ್ಚಾಲೆ ಆಟ. ಹೆಸರಿಗಷ್ಟೇ ಮಳೆಗಾಲ ಎಂಬಂತೆ ಆಗೊಮ್ಮೆ ಹೀಗೊಮ್ಮೆ ಬರುತ್ತಿದೆ. ಐದು ಕಿ.ಮೀ. ವ್ಯಾಪ್ತಿಯಲ್ಲಿ ಒಂದೊಂದು ರೀತಿ ಮಳೆ ಸುರಿದಿದೆ. ಪಟ್ಟಣದಲ್ಲಿ ಮಳೆ ಸುರಿದರೆ ಹೊರವಲಯದಲ್ಲಿ ಬಂದಿರುವುದಿಲ್ಲ. ಅಬ್ಬರದ ಮಳೆ ಒಂದೇ ಒಂದು ದಿನ ಸರಿಯಾಗಿ ಬಂದಿಲ್ಲ. ಕೆರೆ–ಕಟ್ಟೆಗಳು ತುಂಬಿ ಹರಿಯಲಿಲ್ಲ. ನದಿಗಳು ಉಕ್ಕಲಿಲ್ಲ. ನೆಲ ಹದವಾಗುವಂತಹ ತುಂತುರು ಮಳೆಯೂ ಬೀಳಲಿಲ್ಲ. ಮಳೆಗಾಲದಲ್ಲಿ ಕೆರೆಗಳಿಗೆ ನೀರು ಹರಿಸಬೇಕಾದ ಸ್ಥಿತಿ ಎದುರಾದರೆ ಇನ್ನು ಬೇಸಿಗೆಯ ಸ್ಥಿತಿ ಹೇಗಿರುತ್ತದೊ. ಇದೆಲ್ಲವನ್ನೂ ನೋಡಿದರೆ ಜಿಲ್ಲೆಯಲ್ಲಿ ಈ ವರ್ಷವೂ ಬರದ ಆತಂಕ ಕಾಡುತ್ತಿದೆ’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಶೇ 22ರಷ್ಟು ಪ್ರದೇಶದಲ್ಲಷ್ಟೇ ಬಿತ್ತನೆ
ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಚಟುವಟಿಕೆಯಲ್ಲೂ ಹೇಳಿಕೊಳ್ಳುವಷ್ಟು ಪ್ರಗತಿ ಸಾಧಿಸಿಲ್ಲ. ರಾಗಿ ಭತ್ತ ಮುಸುಕಿನ ಜೋಳ ಜೋಳ ತೊಗರಿ ಹುರಳಿ ಅಲಸಂದೆ ಅವರೆ ಸೇರಿದಂತೆ 15 ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಕೃಷಿ ಇಲಾಖೆಯು ಈ ವರ್ಷ 81493 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಅಂದಾಜಿಸಿದೆ. ಆ ಪೈಕಿ ಇದುವೆರೆಗೆ 18187 ಹೆಕ್ಟೇರ್ನಲ್ಲಿ ಅಂದರೆ ಶೇ 22ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಈ ಪೈಕಿ ಪ್ರಮುಖವಾದ ರಾಗಿ ಬಿತ್ತನೆ ಪ್ರದೇಶವೇ 68 ಸಾವಿರ ಹೆಕ್ಟೇರ್ ಪೈಕಿ 15995 ಹೆಕ್ಟೇರ್ನಲ್ಲಿ ಮಾತ್ರ ಅಂದರೆ ಶೇ 25ರಷ್ಟು ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ಈ ಪೈಕಿ ಅತಿ ಹೆಚ್ಚು ರಾಗಿ ಬೆಳೆಯುವ ಮಾಗಡಿ ತಾಲ್ಲೂಕಿನಲ್ಲಿ 30600 ಹೆ. ಪೈಕಿ 14376 ಹೆ. ಕನಕಪುರದಲ್ಲಿ 18 ಸಾವಿರ ಹೆ. ಪೈಕಿ 900 ಹೆ. ಹಾರೋಹಳ್ಳಿಯಲ್ಲಿ 7700 ಹೆ. ಪೈಕಿ 200 ಹೆ. ರಾಮನಗರದಲ್ಲಿ 6700 ಹೆ. ಪೈಕಿ 300 ಹೆ. ಹಾಗೂ ಚನ್ನಪಟ್ಟಣದಲ್ಲಿ 5 ಸಾವಿರ ಹೆ. ಪೈಕಿ 219 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ ಎನ್ನುತ್ತದೆ ಕೃಷಿ ಇಲಾಖೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.