ಚನ್ನಪಟ್ಟಣ: ಸಂವಿಧಾನದ ಸಾರ್ಥಕತೆ ಮತ್ತು ಪ್ರಜಾಪ್ರಭುತ್ವದ ಯಶಸ್ಸು ದೇಶದಲ್ಲಿ ಕಾನೂನು ಅನುಷ್ಠಾನ ಮಾಡುವುದು ಹಾಗೂ ಜನ ಸಾಮಾನ್ಯರ ಭಾಗವಹಿಸುವಿಕೆಯನ್ನು ಅವಲಂಬಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಅಭಿಪ್ರಾಯಪಟ್ಟರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂವಿಧಾನ ಭಾರತ ಜನರಿಗೆ ಶಿಕ್ಷಣ, ಸಮಾನತೆ, ಆರೋಗ್ಯ, ಉದ್ಯೋಗ, ಭಾಷಾವಾರು ಪ್ರಾಂತಿಯ ರಚನೆ, ಧರ್ಮ ನಿರಪೇಕ್ಷತೆ, ಜಾತ್ಯತೀತ ತತ್ವಗಳನ್ನು ನೀಡಿದೆ. ಅದರಂತೆ ವ್ಯವಸ್ಥೆ ನಡೆಯಬೇಕು ಎಂದರು.
ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ, ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತರಲು ಶ್ರಮಿಸಿದ ಎಲ್ಲರಿಗೂ ನಮಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ಐತಿಹಾಸಿಕ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸಂವಿಧಾನ ಜಾರಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಿ ದೇಶದ ಐಕ್ಯತೆ ಮತ್ತು ಭದ್ರತೆಗೆ ಶ್ರಮಿಸೋಣ ಎಂದರು.
ಬಿಇಒ ಕಚೇರಿ ದೈಹಿಕ ಶಿಕ್ಷಣ ಪರಿವೀಕ್ಷಕಿ ಭಾರತಿ ಬಬಲೇಶ್ವರ, ಅಧೀಕ್ಷಕ ಪ್ರಶಾಂತ್ ಶರ್ಮ, ಶಿಕ್ಷಣ ಸಂಯೋಜಕ ಜಿನ್ನಾ, ರಾಜಲಕ್ಷ್ಮಿ, ಗಂಗಾಧರಮೂರ್ತಿ, ಶಿಕ್ಷಕರಾದ ಪಂಚಲಿಂಗಯ್ಯ, ಮಂಜುಳಾ, ಜಬೀಉಲ್ಲಾ, ಕಾರ್ತಿಕ್, ಚೈತ್ರ, ದುರ್ಗಾ ಪ್ರಸಾದ್ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.