ADVERTISEMENT

ಮೀಸಲಾತಿ ಅರ್ಥ ಕಳೆದುಕೊಳ್ಳುತ್ತಿದೆ: ಕೇಂದ್ರ ಸಚಿವ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 10:14 IST
Last Updated 23 ಡಿಸೆಂಬರ್ 2022, 10:14 IST
   

ರಾಮನಗರ: ಸದ್ಯ ದೇಶದ ಶೇ 90ರಷ್ಟು ಜನರಿಗೆ ಈಗಾಗಲೇ ಮೀಸಲಾತಿ ಸಿಕ್ಕಿದ್ದು, ಅದು ಕಾಲಕ್ರಮೇಣ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ರಾಮನಗರದಲ್ಲಿ ಶನಿವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ‘ ಇತ್ತೀಚಿನ ದಿನಗಳಲ್ಲಿ ಅನೇಕ ಸ್ವಾಮೀಜಿಗಳನ್ನೂ ಒಳಗೊಂಡು ಕೆಲವರು ಮೀಸಲಾತಿ ಎಂಬ ಪದದ ಅರ್ಥಕ್ಕೆ ಮಸಿ ಬಳಿಯುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ ಅಂದು ಸಂವಿಧಾನವನ್ನು ಬರೆದಂತಹ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಚನಾ ಸಮಿತಿಗೆ ಒಂದು ದೃಷ್ಟಿಕೋನ ಇತ್ತು. ಭೌಗೋಳಿಕವಾಗಿ ಯಾವ ವರ್ಗಗಳು ಮುಖ್ಯವಾಹಿನಿಗೆ ಬಂದಿರಲಿಲ್ಲವೋ, ಎಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇತ್ತೋ ಆ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದರು. ಅದನ್ನು ಧಿಕ್ಕರಿಸಿ ಇಂದು ಎಲ್ಲ ವರ್ಗದವರೂ ಮೀಸಲಾತಿ ಬೇಕು ಎನ್ನುತ್ತಿದ್ದಾರೆ. ಈಗಾಗಲೇ ದೇಶದ ಶೇ 90ರಷ್ಟು ವರ್ಗಗಳು ಮೀಸಲಾತಿ ಅಡಿ ಬಂದಿವೆ’ ಎಂದರು.

ADVERTISEMENT

‘ ಯಾವುದೇ ರಾಜ್ಯದ ಸರ್ಕಾರ ಅಥವಾ ಮುಖ್ಯಮಂತ್ರಿಗಳಿಗೆ ಗೆರೆ ಹಾಕಿ ಮೀಸಲಾತಿ ನೀಡಬೇಕು ಎನ್ನುವುದು ಶೋಭೆ ತರುವುದಿಲ್ಲ. ಮೀಸಲಾತಿ ಯಾವುದಕ್ಕಾಗಿ ನೀಡಲಾಗಿತ್ತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು’ ಎಂದರು.

ಚೀನಾದಲ್ಲಿ ಕೋವಿಡ್ ಸೋಂಕು ಹೆಚ್ಚಳದಿಂದ ಭಾರತದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ ‘ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸುವಂತೆ ಎಲ್ಲ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಕೊರೊನಾ ಬಗ್ಗೆ ಯಾವ ರಾಜಕೀಯ ನಾಯಕರೂ ಉಡಾಫೆಯ ಮಾತುಗಳನ್ನು ಆಡಬಾರದು. ಭಾರತ್‌ ಜೋಡೊ, ಪಂಚರತ್ನ ಯಾತ್ರೆಗಳಿಂದ ಬಿಜೆಪಿಗೆ ಯಾವುದೇ ಹಿನ್ನಡೆ ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.