ADVERTISEMENT

ಒಳ ಮೀಸಲಾತಿ ಸಮೀಕ್ಷೆ | ನಗರವಾಸಿ ಎಸ್‌.ಸಿ: ‘ಬೆಂಗಳೂರು ದಕ್ಷಿಣ’ ಮುಂದೆ

ಜಿಲ್ಲೆಯಲ್ಲಿರುವ 1.98 ಲಕ್ಷ ಎಸ್‌ಸಿ ಪೈಕಿ 1.45 ಲಕ್ಷ ಮಂದಿ ನಗರ ಪ್ರದೇಶದವರು

ಓದೇಶ ಸಕಲೇಶಪುರ
Published 9 ಆಗಸ್ಟ್ 2025, 5:15 IST
Last Updated 9 ಆಗಸ್ಟ್ 2025, 5:15 IST
‘ಪರಿಶಿಷ್ಟ ಜಾತಿ– ಒಳ ಮೀಸಲಾತಿ ವರ್ಗೀಕರಣ’ಕ್ಕೆ ಸಂಬಂಧಿಸಿದಂತೆ ನ್ಯಾ. ಎಚ್.ಎಚ್. ನಾಗಮೋಹನ ದಾಸ್ ಆಯೋಗ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿಗಳ ಸಮೀಕ್ಷೆ ಅಂಗವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶಿಕ್ಷಕರು ಪರಿಶಿಷ್ಟ ಜಾತಿಯವರ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು (ಸಂಗ್ರಹ ಚಿತ್ರ)
‘ಪರಿಶಿಷ್ಟ ಜಾತಿ– ಒಳ ಮೀಸಲಾತಿ ವರ್ಗೀಕರಣ’ಕ್ಕೆ ಸಂಬಂಧಿಸಿದಂತೆ ನ್ಯಾ. ಎಚ್.ಎಚ್. ನಾಗಮೋಹನ ದಾಸ್ ಆಯೋಗ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿಗಳ ಸಮೀಕ್ಷೆ ಅಂಗವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶಿಕ್ಷಕರು ಪರಿಶಿಷ್ಟ ಜಾತಿಯವರ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು (ಸಂಗ್ರಹ ಚಿತ್ರ)   

ರಾಮನಗರ: ಪರಿಶಿಷ್ಟ ಜಾತಿಗೆ ಸೇರಿದವರು ನಗರ ಪ್ರದೇಶದಲ್ಲಿ ಅತಿ ಹೆಚ್ಚು ವಾಸಿಸುತ್ತಿರುವ ರಾಜ್ಯದ ಜಿಲ್ಲೆಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಟ್ಟು 1,98,324 ಜನರಿದ್ದಾರೆ. ಈ ಪೈಕಿ ಶೇ 73.13ರಷ್ಟು ಮಂದಿ ನಗರ ಪ್ರದೇಶದಲ್ಲೇ ವಾಸವಾಗಿದ್ದಾರೆ!

‘ಪರಿಶಿಷ್ಟ ಜಾತಿ– ಒಳ ಮೀಸಲಾತಿ ವರ್ಗೀಕರಣ’ದ ಸಲುವಾಗಿ ನ್ಯಾ. ಎಚ್.ಎಚ್. ನಾಗಮೋಹನ ದಾಸ್ ಆಯೋಗ ನಡೆಸಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿವೆ. ಆಯೋಗವು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಸಮುದಾಯದ ನಗರ–ಗ್ರಾಮೀಣ ಜನಸಂಖ್ಯೆಯಲ್ಲಿರುವ ಹೆಚ್ಚು ವ್ಯತ್ಯಾಸವಿರುವ 12 ಜಿಲ್ಲೆಗಳ ಅನುಪಾತವನ್ನು ಗುರುತಿಸಿದೆ.

ಅಜಗಜಾಂತರ ವ್ಯತ್ಯಾಸ: ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾಮೀಣ ಮತ್ತು ನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಜನರ ಜನಸಂಖ್ಯೆ ನಡುವೆ ಅಜಗಜಾಂತರ ವ್ಯತ್ಯಾಸವಿರುವುದು ಸಮೀಕ್ಷೆಯ ವರದಿಯಲ್ಲಿ ಗೊತ್ತಾಗಿದೆ.

ADVERTISEMENT

ನಗರ ಪ್ರದೇಶದಲ್ಲಿ 1,45,039 ವಾಸವಾಗಿದ್ದಾರೆ. ಈ ಪೈಕಿ 71,065 ಪುರುಷರು ಹಾಗೂ 73,954 ಮಹಿಳೆಯರಿದ್ದಾರೆ. ಜೊತೆಗೆ 20 ತೃತೀಯ ಲಿಂಗಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿ 53,285 ಮಂದಿ ವಾಸವಾಗಿದ್ದಾರೆ. ಈ ಪೈಕಿ 26,224 ಪುರುಷರು ಹಾಗೂ 27,048 ಮಹಿಳೆಯರಿದ್ದಾರೆ. ಅಲ್ಲದೆ 13 ತೃತೀಯ ಲಿಂಗಿಗಳು ಸಹ ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ.

ಶೇ 92ರಷ್ಟು ಮಂದಿ ಭಾಗಿ: ಆಯೋಗವು ಮೇ 5ರಿಂದ ಜೂನ್ 30ರವರೆಗೆ ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರವಾರು ನಡೆಸಿದ್ದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಶೇ 95ರಷ್ಟು ಮಂದಿ ಪಾಲ್ಗೊಂಡಿದ್ದರು. ಸಮೀಕ್ಷೆ ಪ್ರಕಾರ ಕನಕಪುರ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕನಕಪುರದಲ್ಲಿ 14,276 ಪರಿಶಿಷ್ಟರ ಕುಟುಂಬಗಳಿದ್ದು ಒಟ್ಟು 52,043 ಸದಸ್ಯರಿದ್ದಾರೆ. 2ನೇ ಸ್ಥಾನದಲ್ಲಿರುವ ಮಾಗಡಿಯಲ್ಲಿ 13,836 ಕುಟುಂಬಗಳಿದ್ದು 50,419 ಜನರಿದ್ದಾರೆ. 3ನೇ ಸ್ಥಾನದಲ್ಲಿರುವ ರಾಮನಗರದಲ್ಲಿ 13,624 ಕುಟುಂಬಗಳಿದ್ದು 49,114 ಜನರಿದ್ದಾರೆ. ಕಡೆಯ 4ನೇ ಸ್ಥಾನದಲ್ಲಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ12,739 ಪರಿಶಿಷ್ಟರ ಕುಟುಂಬಗಳಿದ್ದು ಒಟ್ಟು 47,326 ಸದಸ್ಯರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧಾರವಾಡಕ್ಕೆ 2ನೇ ತುಮಕೂರಿಗೆ 3ನೇ ಸ್ಥಾನ:

ವರದಿ ಪ್ರಕಾರ 204701 ಪರಿಶಿಷ್ಟ ಜಾತಿ ಜನಸಂಖ್ಯೆ ಹೊಂದಿರುವ ಧಾರವಾಡ ಜಿಲ್ಲೆಯು ನಗರವಾಸಿಗಳು ಹೆಚ್ಚಾಗಿರುವ ಜಿಲ್ಲೆಗಳ ಪೈಕಿ 2ನೇ ಸ್ಥಾನದಲ್ಲಿದೆ. ಇಲ್ಲಿರುವ ಜನಸಂಖ್ಯೆ ಪೈಕಿ ಶೇ 48.23ರಷ್ಟು ಜನ ನಗರದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಶೇ 48.34ರಷ್ಟು ಕುಟುಂಬಗಳು ನಗರದಲ್ಲಿ ನೆಲೆಸಿವೆ. ಮೂರನೇ ಸ್ಥಾನದಲ್ಲಿ ತುಮಕೂರು ಜಿಲ್ಲೆ ಇದೆ. ಇಲ್ಲಿರುವ 503778 ಪರಿಶಿಷ್ಟ ಜಾತಿ ಜನಸಂಖ್ಯೆಯ ಪೈಕಿ ಶೇ 45.88ರಷ್ಟು ಜನ ನಗರವಾಸಿಗಳು. ಅಂದರೆ ಶೇ 46.02 ಕುಟುಂಬಗಳು ನಗರದಲ್ಲಿವೆ. ಉಳಿದಂತೆ 4ನೇ ಸ್ಥಾನದಲ್ಲಿ ಚಿಕ್ಕಬಳ್ಳಾಪುರ 5ರಲ್ಲಿ ಕೋಲಾರ 6ರಲ್ಲಿ ಬೀದರ್ 7ರಲ್ಲಿ ಮೈಸೂರು 8ರಲ್ಲಿ ಚಿತ್ರದುರ್ಗ 9ರಲ್ಲಿ ಚಾಮರಾಜನಗರ 10ರಲ್ಲಿ ದಕ್ಷಿಣ ಕನ್ನಡ 11ರಲ್ಲಿ ಚಿಕ್ಕಮಗಳೂರು ಹಾಗೂ 12ನೇ ಸ್ಥಾನದಲ್ಲಿ ಹಾಸನ ಜಿಲ್ಲೆ ಇರುವುದು ವರದಿಯಿಂದ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.