ಪ್ರಾತಿನಿಧಿಕ ಚಿತ್ರ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಷರತ್ತುಗಳನ್ನು ವಿಧಿಸಲಾಗಿದೆ.
ಶೈಕ್ಷಣಿಕ ಸಂಸ್ಥೆ, ಶಾಲಾ ವಾಹನಗಳಲ್ಲಿ ಶಾಲಾ ಮಕ್ಕಳು ಹಾಗೂ ವಿದ್ಯಾರ್ಥಿಗಳನ್ನು ಕರೆದೊಯ್ಯವಾಗ ವಾಹನದ ಜೊತೆಯಲ್ಲಿ ಒಬ್ಬ ಅಟೆಂಡರ್ (ಸಹಾಯಕ)ನನ್ನು ಹೊಂದಿರಬೇಕು. ಸಾರಿಗೆ ಪ್ರಾಧಿಕಾರ ರಹದಾರಿ ಪರವಾನಗಿ ಪತ್ರದಲ್ಲಿ ನಿಗದಿಪಡಿಸಿರುವ ನಿಬಂಧನೆ, ಷರತ್ತುಗಳನ್ನು ಚಾಲಕರು, ಮಾಲೀಕರು ಹೊಂದಿರಬೇಕು. ಉಲ್ಲಂಘನೆ ಮಾಡಿದ್ದಲ್ಲಿ ಸಂಬಂಧಪಟ್ಟ ವಾಹನದ ರಹದಾರಿ ಬಗ್ಗೆ ಇಲಾಖಾ ಶಾಸನ ಕ್ರಮಗಳನ್ನು ಜರುಗಿಸಲಾಗುವುದು ಹಾಗೂ ಇದಕ್ಕೆ ಸಂಬಂಧಪಟ್ಟ ಶಾಲಾ,ಕಾಲೇಜುಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಜವಾಬ್ದಾರರಾಗಿರುತ್ತಾರೆ.
ವಾಹನದ ಚಾಲಕರು ಅಸುರಕ್ಷತೆ ರೀತಿಯಲ್ಲಿ ಚಾಲನೆ ಮಾಡಿದ್ದಲ್ಲಿ ಚಾಲನಾ ಅನುಜ್ಞಾ ಪತ್ರ ವಶಪಡಿಸಿಕೊಂಡು ಕಾನೂನು ರೀತಿಯಲ್ಲಿ ಅಮಾನತು ಮಾಡಲಾಗುವುದು. ವಾಹನಗಳಿಗೆ ಸಂಬಂಧಿಸಿದ ದಾಖಲೆಗಳಾದ ನೋಂದಣಿ ಪ್ರಮಾಣ ಪತ್ರ, ಅರ್ಹತಾ ಪತ್ರ, ತೆರಿಗೆ ಪಾವತಿ ಹಾಗೂ ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು. ವಾಹನದ ಚಾಲಕನ ಜತೆಯಲ್ಲಿ ಒಂದು ಜೆರಾಕ್ಸ್ ಪ್ರತಿ ಹೊಂದಿರಬೇಕು.
ತಪ್ಪಿದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರು ಸಂಬಂಧಪಟ್ಟಂತೆ ತನಿಖಾ ವರದಿ ಪ್ರಕರಣ ದಾಖಲಿಸಲಾಗುವುದು. ಈ ಎಲ್ಲ ದಾಖಲೆ ಹೊಂದಿಲ್ಲದ ಪಕ್ಷದಲ್ಲಿ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೃಷ್ಣೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.