ADVERTISEMENT

ಕನಕಪುರ: ನಿರಾಶ್ರಿತರಿಗೆ ತಿಂಡಿ, ಊಟ ಹಂಚಿಕೆ

ಸಿದ್ದಿವಿನಾಯಕ ಬಳಗದ ಸೇವೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 3:34 IST
Last Updated 14 ಜೂನ್ 2021, 3:34 IST
ಕನಕಪುರದ ಶ್ರೀಸಿದ್ದಿ ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು ನಿರಾಶ್ರಿತರಿಗೆ ಊಟ ವಿತರಿಸಿದರು
ಕನಕಪುರದ ಶ್ರೀಸಿದ್ದಿ ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು ನಿರಾಶ್ರಿತರಿಗೆ ಊಟ ವಿತರಿಸಿದರು   

ಕನಕಪುರ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ 200 ಮಂದಿ ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಇಲ್ಲಿನ ಬಸವೇಶ್ವರ ನಗರದ ಶ್ರೀಸಿದ್ದಿವಿನಾಯಕ ಗೆಳೆಯರ ಬಳಗದ ಸದಸ್ಯರು ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ವಿತರಿಸುತ್ತಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ದಿನದಿಂದಲೂ ಐವರು ಸದಸ್ಯರು ಮಾರುಕಟ್ಟೆಯಲ್ಲಿ ತರಕಾರಿ, ದಿನಸಿ ಸಾಮಗ್ರಿ ತಂದು ತಮ್ಮ ಮನೆ ಮೇಲೆ ಊಟ ತಯಾರಿಸಿ ಪೊಟ್ಟಣ ಸಿದ್ಧಪಡಿಸಿ ನಿರಾಶ್ರಿತರು, ನಿರ್ಗತಿಕರು ಇರುವ ಜಾಗಕ್ಕೆ ತೆಗೆದುಕೊಂಡು ಹೋಗಿ ಹಂಚಿಕೆ ಮಾಡುತ್ತಾರೆ.

ವಾರದ 7 ದಿನದಲ್ಲಿ ಮೂರು ದಿನ ನಾನ್‌ವೆಜ್‌, ಉಳಿದ 4 ದಿನ ಮೊಟ್ಟೆ ಜತೆಗೆ ಬಾಳೆಹಣ್ಣು, ಕುಡಿಯುವ ನೀರಿನ ಬಾಟಲಿ ಕೊಡುತ್ತಿದ್ದಾರೆ. ಎಲ್ಲವನ್ನು ಮನೆಯಲ್ಲೇ ಮಾಡಿಕೊಳ್ಳುತ್ತಿರುವುದರಿಂದ ಸೊಪ್ಪು, ತರಕಾರಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಮಾತ್ರ ಖರೀದಿ ಮಾಡುತ್ತಾರೆ.

ADVERTISEMENT

ಮಕ್ಕಳು ಮಾಡುವ ಸೇವಾ ಕೆಲಸದಿಂದ ಸಂತೋಷಗೊಂಡಿರುವ ಪೋಷಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದ ಯಾವುದೇ ಅಡ್ಡಿ ಇಲ್ಲದೆ ಊಟ ಹಂಚಿಕೆ ಕಾರ್ಯ ಯಶಸ್ವಿಯಾಗಿ ಮುಂದುವರಿದಿದೆ.

ಬಳಗದ ಅಧ್ಯಕ್ಷ ಚರಣ್‌ ಯಾದವ್‌ ಊಟ ತಯಾರಿಸುವ ನೇತೃತ್ವವಹಿಸಿದ್ದು ಅದಕ್ಕೆ ದರ್ಶನ್‌ ಎಸ್‌.ಜೆ., ಹೇಮಂತ್‌, ಅಭಿಷೇಕ್‌, ಪ್ರಶಾಂತ್‌ ಎಸ್‌.ಕೆ. ಬೆಂಬಲವಾಗಿನಿಂತಿದ್ದಾರೆ.

‘ನಾವು ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದೆವು. ನಮ್ಮ ಏರಿಯಾದಲ್ಲಿ ಗಣೇಶನ ಮೂರ್ತಿ ಕೂರಿಸಲು ಒಟ್ಟಾದೆವು. ಈ ವರ್ಷ ಕೊರೊನಾ ಬಂದಿದ್ದರಿಂದ ಕಷ್ಟದಲ್ಲಿರುವ ಮತ್ತು ಯಾರಿಗೆ ಊಟದ ಅವಶ್ಯಕತೆ ಇದೆಯೋ ಅವರಿಗೆ ಹಸಿವು ನೀಗಿಸಲು ಈ ಕೆಲಸ ಮಾಡುತ್ತಿದ್ದೇವೆ’ ಎಂದು ಚರಣ್‌ ಯಾದವ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.