ADVERTISEMENT

ಜ. 1 ರಿಂದ ಹೈನುಗಾರರಿಗೆ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 14:28 IST
Last Updated 21 ಡಿಸೆಂಬರ್ 2019, 14:28 IST
ಮರಳವಾಡಿ ಎಂಇಎಸ್‌ ಶಾಲೆಯಲ್ಲಿ ನಡೆಸ ಬೃಹತ್‌ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಎಚ್‌.ಎಸ್‌.ಹರೀಶ್‌ ಕುಮಾರ್‌ ಮಾತನಾಡಿದರು
ಮರಳವಾಡಿ ಎಂಇಎಸ್‌ ಶಾಲೆಯಲ್ಲಿ ನಡೆಸ ಬೃಹತ್‌ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಎಚ್‌.ಎಸ್‌.ಹರೀಶ್‌ ಕುಮಾರ್‌ ಮಾತನಾಡಿದರು   

ಮರಳವಾಡಿ (ಕನಕಪುರ): ಹೈನು ಉದ್ಯಮವು ಹೆಚ್ಚು ಲಾಭದಾಯಕವಾಗುತ್ತಿದ್ದು ಮುಂದಿನ ಹೊಸ ವರ್ಷದಿಂದ ಹೈನುಗಾರಿಕೆ ರೈತರಿಗೆ ವಿಶೇಷ ಕೊಡುಗೆ ಸಿಗಲಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಇಲ್ಲಿನ ಮರಳವಾಡಿ ಎಂಇಎಸ್ ಶಾಲಾ ಆವರಣದಲ್ಲಿ ಬೆಂಗಳೂರು ಹಾಲು ಒಕ್ಕೂಟ, ಡಾ.ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾರೋಹಳ್ಳಿ, ಬಮುಲ್ ಕಲ್ಯಾಣ ಟ್ರಸ್ಟ್ , ಮರಳವಾಡಿ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ರೈತರನ್ನು ಇಂದು ಹೈನುಗಾರಿಕೆ ಕ್ಷೇತ್ರ ಕೈ ಹಿಡಿದಿದೆ. ಈ ಕ್ಷೇತ್ರದಲ್ಲಿ ರೈತರಿಗೆ ನಿರ್ದಿಷ್ಟ ಆಧಾಯ ಬರುತ್ತಿದೆ, ಶ್ರಮಪಟ್ಟು ಕೆಲಸ ಮಾಡುವ ರೈತರನ್ನು ಉತ್ತೇಜಿಸಲು ಒಕ್ಕೂಟವು ತೀರ್ಮಾನಿಸಿ ಜನವರಿ 1 ರಿಂದ ಆ ಲಾಭ ರೈತರಿಗೆ ಸಿಗಲಿದೆ ಎಂದು ತಿಳಿಸಿದರು.

ADVERTISEMENT

ಬಮೂಲ್‌ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್ ಮಾತನಾಡಿ, ಹೈನು ಉದ್ಯಮದಲ್ಲಿ ಬೆಂಗಳೂರು ಹಾಲು ಒಕ್ಕೂಟವು ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಅದೇ ರೀತಿ ನಾವು ನಾಟಿ ಹಸುಗಳ ಹಾಲು ಸಂಗ್ರಹಣೆಯಲ್ಲಿ ಯಶಸ್ಸು ಕಾಣಬೇಕಿದೆ. ನಾಟಿ ಹಸು ಸಾಕುವ ರೈತರಿಗೆ ಒಕ್ಕೂಟವು ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬರುವ 174 ಡೇರಿಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ₹12.50 ಲಕ್ಷ ಮೀಸಲಿಟ್ಟಿದೆ. ರೈತರು ಮಕ್ಕಳ ದಾಖಲಾತಿಗಳನ್ನು ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎನ್.ನಾಗರಾಜು ಮಾತನಾಡಿ, ಹೈನುಗಾರಿಕೆ ಕಠಿಣವಾದ ಕೆಲಸ. ಪ್ರತಿ ದಿನ ಇದರ ಕೆಲಸ ಇದ್ದೇ ಇರುತ್ತದೆ. ಮೊದಲು ಆರೋಗ್ಯದ ಕಡೆ ಒತ್ತುಕೊಡಿ ಇಂದಿನ ಶಿಬಿರದ ಲಾಭ ಪಡೆದುಕೊಳ್ಳಿ ಎಂದು ತಿಳಿಸಿದರು.

750 ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ಹೃದಯರೋಗ, ಮಧುಮೇಹ, ನರರೋಗ, ದಂತ ಸಮಸ್ಯೆ, ಕೀಲು ಮೂಳೆ, ಕಣ್ಣಿನ ಕಾಯಿಲೆಗಳು, ಮಕ್ಕಳ ಖಾಯಿಲೆಗಳು ಕಿವಿ ಮೂಗು ಗಂಟಲು, ಹಾಗೂ ಸಾಮಾನ್ಯ ಕಾಯಿಲೆಗಳನ್ನು ದಯಾನಂದ ಸಾಗರ್‌ ಆಸ್ಪತ್ರೆಯ ವೈದ್ಯರು ತಂಡವು ಪರೀಕ್ಷೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡಿತು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್, ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ಜಗದೀಶ್, ಬಮುಲ್ ಕಲ್ಯಾಣ ಟ್ರಸ್ಟ್ ಉಪ ವ್ಯವಸ್ಥಾಪಕ ಡಾ.ಆರ್.ಪ್ರಸನ್ನಕುಮಾರ್, ಒಕ್ಕೂಟದ ವರದರಾಜು, ಎಲ್‌.ರವೀಂದ್ರ, ಗೋಪಾಲ್‌, ಪ್ರವೀಣ್‌, ಅಲ್ಲಾಸಾಬ್‌ ಮಡ್ಡಿಮನಿ, ಎಂ.ಬಿ.ಕೃಷ್ಣ, ಆನಂದ ಕುಮಾರ್‌ ಎಚ್‌.ಡಿ, ಮುಖಂಡರಾದ ಮಹಮದ್ ಅಬ್ದುಲ್ಲಾ, ರಾಜಣ್ಣ, ರಾಯಲ್ ರಾಮಣ್ಣ, ಚಂದ್ರು, ಶಿವರಾಜು, ಅಯೂಬ್ ಪಾಷ, ನಾಗರಾಜು, ಸಬ್ದರ್ ಹುಸೇನ್, ವಡ್ಡರುಕುಪ್ಪೆ ದೇವರಾಜು, ಕುಲುಮೇದೊಡ್ಡಿ ಮಂಜುನಾಥ, ಕೃಷ್ಣಪ್ಪ, ದಿನೇಶ್‌ ಚಿಕ್ಕಮರಳವಾಡಿ, ಮೈಕ್‌ ಶಿವಣ್ಣ, ವೈದ್ಯರು, ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹಾಲಿನ ಡೇರಿಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.