ಬಿಡದಿ: ಸಮೀಪದ ಹನುಮಂತನಗರದ ಬಿ.ಎಂ ರಸ್ತೆಯ ಕೋತಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ. 9ರಂದು ಹನುಮಜಯಂತಿ ಅಂಗವಾಗಿ ವಿಶೇಷ ಪೂಜೆ ಹಾಗೂ ಉತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವೀರಾಂಜನೇಯ ಸ್ವಾಮಿ ಟ್ರಸ್ಟ್ ನ ಅಧ್ಯಕ್ಷ ಡಾ. ಎಂ ತಿಮ್ಮೇಗೌಡ ತಿಳಿಸಿದ್ದಾರೆ.
ದೇಗುಲದಲ್ಲಿ ಹನುಮ ಜಯಂತಿ ಪ್ರಯುಕ್ತ ಅಂದು ಪ್ರಾತಃಕಾಲ ಪುಣ್ಯಾಹ, ಹನುಮ ಮೂರ್ತಿಗೆ ನವಗ್ರಹ ಆರಾಧನೆ, ನವ ಕಳಸ ಸ್ಥಾಪನೆ, ಪಂಚಾಮೃತ ಅಭಿಷೇಕ ಹಾಗೂ 108 ಎಳನೀರಿನ ಅಭಿಷೇಕ ನಡೆಯಲಿವೆ. ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಅಂದು ಬೆಳಿಗ್ಗೆ 10.30 ಕ್ಕೆ ಮಹಾ ಮಂಗಳಾರತಿ ನೆರವೇರಲಿದೆ. ನಂತರ ಉತ್ಸವದ ಮೆರವಣಿಗೆ ಹೊರಡಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನದಾನ ಪ್ರಸಾದ ವಿನಿಯೋಗ ನಡೆಯಲಿದ್ದು ನಂತರ ಸಾಂಸ್ಕೃತಿಕ ಕಲಾಮೇಳ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಡಿ. 26 ರಿಂದ ಜನವರಿ 1 ರವರೆಗೆ ದೇವಾಲಯದ ಬಳಿ ‘ದನಗಳ ಜಾತ್ರೆ’ಯನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಜರ್ಸಿ, ಹಳ್ಳಿಕಾರ್, ನಾಟಿ ಸೇರಿದಂತೆ ಎಲ್ಲ ತಳಿಯ ರಾಸುಗಳು ಪಾಲ್ಗೊಳ್ಳಲಿವೆ. ಕಳೆದ ಸಾಲಿನಲ್ಲಿ ನಿರೀಕ್ಷೆಯಂತೆ ಜಾನುವಾರುಗಳು ಜಾತ್ರೆಗೆ ಬಂದಿರಲಿಲ್ಲ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಬರಬಹುದೆಂದು ನಿರೀಕ್ಷಿಸಲಾಗಿದೆ. ಜಾತ್ರೆಗೆ ಮೂಲಸೌಕರ್ಯ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ಎಲ್ಲ ದಿನಗಳಲ್ಲಿ ದೇವಾಲಯದ ಹನುಮ ಮೂರ್ತಿ, ಸೀತರಾಮ ಲಕ್ಷ್ಮಣರಿಗೆ ಹಾಗೂ ಲಕ್ಷ್ಮಿದೇವಿಗೆ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ವ್ಯವಸ್ಥೆ ಇರುತ್ತದೆ. ಜ. 6ರಂದು ಕೋತಿ ಆಂಜನೇಯ ಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 7 ಗಂಟೆಗೆ ವೈಕುಂಠ ದ್ವಾರ ಪೂಜೆ ಮತ್ತು ಪ್ರವೇಶ, ದೇಗುಲಕ್ಕೆ ಹೂವಿನ ಅಲಂಕಾರ, ಪ್ರಸಾದ ವಿನಯೋಗ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.