ರಾಮನಗರ: ವನವಾಸಿ ಕಲ್ಯಾಣ ಕರ್ನಾಟಕದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಪಕ್ಕದಲ್ಲಿ ಜಿಲ್ಲಾ ಮಟ್ಟದ ವನವಾಸಿಗಳ ಕ್ರೀಡಾ ಸ್ಪರ್ಧೆಯನ್ನು ಭಾನುವಾರ ಆಯೋಜಿಸಲಾಗಿತ್ತು.
17 ವರ್ಷಕ್ಕಿಂತ ಕೆಳಗಿನ ಬಾಲಕರು ಸಬ್ ಜೂನಿಯರ್ ವಿಭಾಗದಲ್ಲಿ, 17 ವರ್ಷಕ್ಕಿಂತ ಮೇಲ್ಟಟ್ಟ 20 ವರ್ಷದ ಒಳಗಿನವರು ಜೂನಿಯರ್ ವಿಭಾಗದಲ್ಲಿ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಹಾಗೂ 16 ವರ್ಷಕ್ಕಿಂತ ಕೆಳಗಿನ ಬಾಲಕರು ಸಬ್ ಜೂನಿಯರ್ ವಿಭಾಗದಲ್ಲಿ, 16 ವರ್ಷಕ್ಕಿಂತ ಮೇಲ್ಪಟ್ಟ 18 ವರ್ಷದ ಒಳಗಿನ ಬಾಲಕರು, 18 ವರ್ಷಕ್ಕಿಂತ ಮೇಲ್ಪಟ್ಟವರು ಸೀನಿಯರ್ ವಿಭಾಗದಲ್ಲಿ ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಪ್ರತಿ ವರ್ಷ ವನವಾಸಿ ಕಲ್ಯಾಣ ಕರ್ನಾಟಕದ ವತಿಯಿಂದ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ವನವಾಸಿ ಕಲ್ಯಾಣ ಕರ್ನಾಟಕದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಸತ್ಯಕೀರ್ತಿ ತಿಳಿಸಿದರು.
ವನವಾಸಿ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ. ಇವರಲ್ಲಿನ ಕ್ರೀಡಾ ಮನೋಭಾವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರೆದುಕೊಂಡು ಹೋಗುವ ಸಂಕಲ್ಪ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವನವಾಸಿ ಕಲ್ಯಾಣ ಕರ್ನಾಟಕದ ಜಿಲ್ಲಾ ಘಟಕದ ಖಜಾಂಚಿ ಆರ್.ಕೆ. ಸತೀಶ್ ಮಾತನಾಡಿ, ಗುಡ್ಡಗಾಡು ಜನಾಂಗದಿಂದ ಬಂದ ಹಿಮಾದಾಸ್ ಅಥ್ಲೆಟಿಕ್ ಕ್ಷೇತ್ರದಲ್ಲಿ ಸಾಧನೆ ಮಾಡಿ, ದೇಶದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ವನವಾಸಿ ಮಕ್ಕಳೂ ಅವರ ಕ್ರೀಡಾ ಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ದಿವ್ಯಾ, ಮುನಿಯಮ್ಮ, ಕಬಡ್ಡಿ ಸ್ಪರ್ಧೆಯಲ್ಲಿ ಮಂಜುನಾಥ್, ಪಿ. ಮಹದೇವಯ್ಯ, ನಾಗರಾಜು, ಜಿ. ಮಹದೇವಯ್ಯ, ಶಂಕರ್, ಚಿಕ್ಕಮಹದೇವಯ್ಯ, ಈಶ್ವರ ವಿಜೇತರಾದರು. ಪದಾಧಿಕಾರಿಗಳಾದ ಎಸ್. ರಾಜು, ಮಂಜುನಾಥ್ ಮನಗೂಳಿ, ರಾಮಾಂಜಿನಿ, ವಕೀಲ ವಿನೋದ್ ಭಗತ್, ಹಿಂದೂ ಜಾಗರಣಾ ವೇದಿಕೆಯ ಪ್ರಾಂತನಿಧಿ ಪ್ರಮುಖ್ ಸ. ನಾಗರಾಜ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಯೋಜಕ ಎಂ.ಎಸ್. ಚನ್ನವೀರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.