ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಸ್ಯುಸಿಐ (ಕಮ್ಯುನಿಷ್ಟ್) ಪಕ್ಷದ ಅಭ್ಯರ್ಥಿ ಹೇಮಾತಿ ಕೆ. ಅವರು ಪಟ್ಟಣದ ಕೋಟೆ ಬಾಗಿಲಿನ ಸಂತೆ, ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಯಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದರು.
‘ದೇಶದ ಬಡವರು, ಕಾರ್ಮಿಕರು, ಮಹಿಳೆಯರ ಪರವಾಗಿ ಹಾಗೂ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡಲು ಮತದಾರರು ಎಸ್ಯುಸಿಐ ಪಕ್ಷಕ್ಕೆ ಮತ ಹಾಕಬೇಕು. ಆ ಮೂಲಕ, ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಅಭ್ಯರ್ಥಿಯ ಕೈ ಬಲಪಡಿಸಬೇಕು. ಸಂಸತ್ತಿನಲ್ಲಿ ಸಹ ಹೋರಾಟದ ದನಿ ಮೊಳಗಿಸಲು ಅವಕಾಶ ನೀಡಬೇಕು’ ಎಂದು ಹೇಮಾವತಿ ಮನವಿ ಮಾಡಿದರು.
ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ. ಶಶಿಧರ್ ಮಾತನಾಡಿ, ‘ನಮ್ಮ ಪಕ್ಷವು ದುಡಿಯುವ ಜನರ ಹೋರಾಟದ ಧ್ವನಿಯಾಗಿದೆ. ನಾಗರಿಕ ಹಕ್ಕುಗಳ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳ ಹರಣಗಳ ವಿರುದ್ಧ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಹಾಗೂ ಮಹಿಳೆಯರ ಸಮಸ್ಯೆಗಳ ವಿರುದ್ಧ ಪಕ್ಷ ಅವಿರತವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಜನರು ಚುನಾವಣೆಯಲ್ಲಿ ಬೆಂಬಲಿಸಿ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು’ ಎಂದರು.
ಹೋದ ಕಡೆಯಲೆಲ್ಲಾ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ಮತಯಾಚನೆ ಮಾಡಲಾಯಿತು. ಪಕ್ಷದ ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯರಾದ ಶೋಭಾ ಎಸ್., ಎನ್. ರವಿ, ಎ. ಶಾಂತ ಹಾಗೂ ವಿನಯ್ ಸಾರಥಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.