ADVERTISEMENT

ಮಂದಿರ, ಭಕ್ತರಿಗೂ ರಕ್ಷಣೆ ಉದ್ದೇಶದ ಹೇಳಿಕೆ: ಹರಿಪ್ರಸಾದ್ ಸಮರ್ಥಿಸಿದ ಸುರೇಶ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 11:38 IST
Last Updated 4 ಜನವರಿ 2024, 11:38 IST
<div class="paragraphs"><p>ಸುರೇಶ್</p></div>

ಸುರೇಶ್

   

ಚನ್ನಪಟ್ಟಣ (ರಾಮನಗರ): ‘ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಹಾಗಾಗಿ, ಮಂದಿರಕ್ಕೂ ಮತ್ತು ಭಕ್ತರಿಗೂ ರಕ್ಷಣೆ ಕೊಡಬೇಕಿರುವುದು ಸರ್ಕಾರದ ಜವಾಬ್ದಾರಿ. ಅದೇ ದೃಷ್ಟಿಯಿಂದ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಅವರು ಹೇಳಿಕೆ ನೀಡಿದ್ದಾರೆ’ ಎಂದು ಸಂಸದ ಡಿ.ಕೆ. ಸುರೇಶ್ ಅವರು ಹರಿಪ್ರಸಾದ್ ಅವರ ಹೇಳಿಕೆಯನ್ನು ಸಮರ್ಥಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೊಲೀಸರು ಯಾರನ್ನೂ ಉದ್ದೇಶಪೂರ್ವಕವಾಗಿ ಬಂಧಿಸಿಲ್ಲ. ಕೆಲ ದುರ್ಘಟನೆ ನಡೆಯಬಹುದು ಎಂಬ ಗುಮಾನಿ ಮೇಲೆಯೇ ಬಂಧಿಸಲಾಗಿದೆ. ಸರ್ಕಾರ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಹ ಸ್ಪಷ್ಟಪಡಿಸಿದ್ದಾರೆ. ಇದು ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಮಾಡಿರುವ ಕ್ರಮ’ ಎಂದು ಹೇಳಿದರು.

ADVERTISEMENT

‘ರಾಮಮಂದಿರ ನಿರ್ಮಾಣ ಭಾರತೀಯರ ಆಸೆ. ಒಬ್ಬರು ಒಂದು ಕಡೆ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುತ್ತಾರೆ, ಮತ್ತೊಬ್ಬರು ದೇಶದಲ್ಲೆಲ್ಲಾ ರಾಮಮಂದಿರ ನಿರ್ಮಾಣ ಮಾಡಬೇಕು ಅಂತಾರೆ. ಹಳ್ಳಿ ಹಳ್ಳಿಗಳಲ್ಲೂ ಮಂದಿರ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ, ಕೆಲವರು ಪ್ರಚಾರಕ್ಕೆ ಒಂದನ್ನು ಬಳಸಿಕೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ರಾಮಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿಲ್ಲ. ಬಂದರೆ ನೋಡೋಣ’ ಎಂದರು.

‘ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಲು ಹೋರಾಟ ಮಾಡಬೇಕು’ ಎಂದು ಅವರ ಪುತ್ರ ಯತೀಂದ್ರ ಅವರು ಹೇಳಿಕೆಗೆ ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಊರಿನಲ್ಲಿ ಇರಲಿಲ್ಲ. ಹೇಳಿಕೆ ಕುರಿತು ಮಾಹಿತಿ ತಿಳಿದುಕೊಳ್ಳುವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.