ADVERTISEMENT

ಪೌರ ಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಿ : ನಗರಸಭೆ ಪೌರಾಯುಕ್ತ ಶಿವನಂಕರಿಗೌಡ

ಚನ್ನಪಟ್ಟಣದ ಪುರಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:25 IST
Last Updated 25 ಡಿಸೆಂಬರ್ 2019, 16:25 IST
ಚನ್ನಪಟ್ಟಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು
ಚನ್ನಪಟ್ಟಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು   

ಚನ್ನಪಟ್ಟಣ: ‘ಪೌರ ಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಮುಖ್ಯವಾಹಿನಿಗೆ ಬರಬೇಕು’ ಎಂದು ನಗರಸಭೆ ಪೌರಾಯುಕ್ತ ಶಿವನಂಕರಿಗೌಡ ಹೇಳಿದರು.

ಇಲ್ಲಿನ ಪುರಭವನದಲ್ಲಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ, ಚನ್ನಪಟ್ಟಣ ಶಾಖೆ ವತಿಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೌರಕಾರ್ಮಿಕರು ನಗರ ಮತ್ತು ಜನರ ಆರೋಗ್ಯ ರಕ್ಷಕರಾಗಿದ್ದಾರೆ. ಅವರ ಕಾರ್ಯ ಸ್ಮರಿಸುವುದು ಎಲ್ಲರ ಕರ್ತವ್ಯ. ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಒತ್ತು ಕೊಡಬೇಕು. ಅವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡಲು ನಗರಸಭೆ ಬದ್ಧವಾಗಿದೆ. ನಿವೇಶನ ಕೊಡಿಸಿಕೊಡಲು ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದರು.

ADVERTISEMENT

ಪೌರಸೇವಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ನಾಗರಾಜು ಮಾತನಾಡಿ, ‘ಪೌರಕಾರ್ಮಿಕರಿಗೆ ನಿವೇಶನ ಮತ್ತು ಮನೆ ಇಲ್ಲದೆ ಸಮಸ್ಯೆಯಾಗಿದೆ. ಚಿಕ್ಕ ಮನೆಯಲ್ಲಿ ನಾಲ್ಕು, ಐದು ಮಂದಿ ವಾಸ ಮಾಡುವ ಸ್ಥಿತಿ ಇದೆ. ನಗರಸಭೆಯಿಂದ ನಿವೇಶನ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ನಿವೇಶನ ದೊರಕಿಸಿಕೊಡಬೇಕು. ಹಾಗೆಯೆ ಪೌರ ಕಾರ್ಮಿಕರ ಕೆಲಸ ಕಾಯಂ ಆಗಬೇಕು’ ಎಂದರು.

‘ಮೃತಪಟ್ಟ ಪೌರ ಕಾರ್ಮಿಕರು ಮತ್ತು ನೌಕರರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಬೇಕು. ಪೌರಸೇವಾ ನೌಕರರ ಕಲ್ಯಾಣ ನಿಧಿಗೆ ಕನಿಷ್ಠ ₹ 3 ಲಕ್ಷ ಠೇವಣಿ ಇಡಬೇಕು. ಎಲ್ಲ ಸೌಲಭ್ಯಗಳನ್ನು ಯಾವುದೇ ತಾರತಮ್ಯವಿಲ್ಲದೆ ಅವರಿಗೆ ದೊರಕಿಸಿ ಕೊಡಬೇಕು’ ಎಂದು ಮನವಿ ಮಾಡಿದರು.

ಮಹಿಳಾ ಪೌರಕಾರ್ಮಿಕರಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪೌರ ಕಾರ್ಮಿಕರಾದ ಪದ್ಮ, ಶ್ರೀನಿವಾಸ್, ಆರ್.ವೆಂಕಟೇಶ್, ವಿ.ಲಕ್ಷ್ಮಿ, ಇನಾಯತ್, ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಹಮೀದ್ ಮುನಾವರ್, ಲಿಯಾಕತ್ ಆಲಿಖಾನ್, ಅಕ್ಬರ್, ಪೈಲ್ವನ್ ಅಕ್ರಂ, ಫಯಾಜ್, ಶೋಯಬ್, ಡಿ.ಎಸ್.ಎಸ್. ಸಂಚಾಲಕ ವೆಂಕಟೇಶ್, ಪೌರಸೇವಾ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ, ಪದಾಧಿಕಾರಿಗಳಾದ ವೆಂಕಟೇಶ್, ಎಂ.ಟಿ.ವೆಂಕಟೇಶ್, ಮಂಜುನಾಥ್, ಕೆ.ಮಂಜು, ಲೋಕೇಶ್, ವೆಂಕಟನಾರಾಯಣ, ಮೀರ್ ಅಮ್ಜದ್, ಎನ್.ಮಹೇಂದ್ರ, ವೆಂಕಟೇಶ್, ಗಜೇಂದ್ರ ಇದ್ದರು. ಧರ್ಮಪಾಲ ಸ್ವಾಗತಿಸಿದರು. ಶಿಕ್ಷಕ ರಾಮಣ್ಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.