ಚನ್ನಪಟ್ಟಣ: ತಾಲ್ಲೂಕಿನ ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ಆಗಮಿಕರಿಗೆ 2020-21ನೇ ಸಾಲಿನ ತಸ್ತಿಕ್ ಹಣ ಒಂದು ವಾರದೊಳಗೆ ತಾಲ್ಲೂಕು ಕಚೇರಿಯಿಂದ ಬಿಡುಗಡೆಯಾಗಲಿದೆ ಎಂದು ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ಬೇವೂರು ವೆಂಕಟೇಶ್ ತಿಳಿಸಿದ್ದಾರೆ.
ತಹಶೀಲ್ದಾರ್ ನಾಗೇಶ್ ಅವರನ್ನು ಈ ಬಗ್ಗೆ ಭೇಟಿ ಮಾಡಿ ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮುಜರಾಯಿ ಸಿ ದರ್ಜೆ ದೇವಾಲಯಗಳ ಅರ್ಚಕರಿಗೆ ತಸ್ತಿಕ್ ಹಣ ಬಿಡುಗಡೆ ಮಾಡಿ ನೆರವು ನೀಡಬೇಕು ಎಂದು ಮನವಿ ಮಾಡಲಾಗಿದೆ. ತಹಶೀಲ್ದಾರ್ ತಕ್ಷಣ ಬಿಡುಗಡೆ ಮಾಡುವುದಾಗಿ ತಿಳಿಸಿ, ಈ ಬಗ್ಗೆ ತಮ್ಮ ಇಲಾಖಾ ಸಿಬ್ಬಂದಿಗೆ ಆದೇಶ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಜರಾಯಿ ಅರ್ಚಕರ ಖಾತೆಗೆ ತಸ್ತಿಕ್ ಹಣ ನೇರವಾಗಿ ಜಮಾವಣೆಯಾಗಲಿದ್ದು, ಯಾವುದೇ ಅರ್ಚಕರು ವಿನಾಕಾರಣ ಅಲೆದಾಡುವುದು ಬೇಕಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಸುರಕ್ಷಿತವಾಗಿರಬೇಕು. ಮುಜರಾಯಿ ಇಲಾಖೆಯಿಂದ ಸಿ ದರ್ಜೆ ದೇವಾಲಯಗಳ ಅರ್ಚಕರಿಗೆ ನೀಡುವ ದಿನಸಿ ಕಿಟ್ ಸಹ ಇನ್ನೊಂದು ವಾರದೊಳಗೆ ಅರ್ಚಕರ ಮನೆಗಳಿಗೆ ತಲುಪಿಸಲು ತಹಶೀಲ್ದಾರ್ ಕಾರ್ಯಾಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಮುಜರಾಯಿ ದೇವಾಲಯಗಳ ಅರ್ಚಕರ ಸಮಸ್ಯೆಗೆ ಸ್ಪಂದಿಸಿ ತಸ್ತಿಕ್ ಹಣ ಹಾಗೂ ದಿನಸಿ ಕಿಟ್ ವಿತರಣೆ ಮಾಡಲು ಮುಂದಾಗಿರುವ ತಹಶೀಲ್ದಾರ್ ನಾಗೇಶ್ಗೆ ಸಂಘದ ಪರವಾಗಿ ವೆಂಕಟೇಶ್ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.