
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಜನಮುಖಿ ಟ್ರಸ್ಟ್ ಹಮ್ಮಿಕೊಂಡಿರುವ ನಾಟಕೋತ್ಸವವನ್ನು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಉದ್ಘಾಟಿಸಿದರು.
ರಾಮನಗರ: ‘ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಧಾರಣೆ ಮಾಡುವ ಶಕ್ತಿ ರಂಗಭೂಮಿಗಿದೆ. ಸಾಮಾಜಿಕ ಪಿಡುಗುಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಹಾಗೂ ಮಹನೀಯರ ಜೀವನ ಸಾಧನೆಯನ್ನು ಜನರಿಗೆ ತಲುಪಿಸಲು ಇಂದಿಗೂ ರಂಗಭೂಮಿ ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುಂಬಾಪುರದ ಜನಮುಖಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ನಾಟಕೋತ್ಸವವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ರಂಗಭೂಮಿಯು ಅದ್ಭುತ ಕಲಾವಿದರನ್ನು ನಾಡಿಗೆ ಕೊಟ್ಟಿದೆ. ಹಿಂದೆ ಚಲನಚಿತ್ರ ರಂಗದಲ್ಲಿ ಹಿಂದೆ ಜನಪ್ರಿಯರಾಗಿರುವ ಬಹುತೇಕ ನಟ-ನಟಿಯರು ರಂಗಭೂಮಿಯ ಹಿನ್ನೆಲೆಯವರು’ ಎಂದರು.
‘ನಟನಾ ರಂಗಭೂಮಿಯ ಅಡಿಪಾಯ ಇದ್ದವರು ಮಾತ್ರ ಈ ಮನರಂಜನೆ ಕ್ಷೇತ್ರದಲ್ಲಿ ದೀರ್ಘಾವಧಿವರೆಗೆ ಉಳಿಯುತ್ತಾರೆ. ಅದು ರಂಗಭೂಮಿಗೆ ಇರುವ ಶಕ್ತಿ. ಶಿವಮೊಗ್ಗದ ನೀನಾಸಂ ರಂಗಭೂಮಿಗೆ ನೀಡಿರುವ ಕೊಡುಗೆ ದೊಡ್ಡದು. ಇಲ್ಲಿನ ತಂಡ ಪ್ರದರ್ಶಿಸುವ ನಾಟಕಗಳು ಸಮಾಜಮುಖಿ ಜೊತೆಗೆ ಪ್ರಯೋಗಶೀಲವಾಗಿರುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಆಧುನಿಕ ಮನರಂಜನಾ ಮಾಧ್ಯಮಗಳು ಬಂದ ಬಳಿಕ, ರಂಗಭೂಮಿಯ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗಿದೆ. ನಾಟಕಗಳನ್ನು ಕಿಕ್ಕಿರಿದು ನೋಡುತ್ತಿದ್ದ ಕಾಲ ಹೋಗಿದೆ. ಆದರೆ, ರಂಗಭೂಮಿಯಷ್ಟು ಪರಿಣಾಮಕಾರಿ ಮಾಧ್ಯಮ ಮತ್ತೊಂದಿಲ್ಲ. ಕಲೆಯ ನೈಜ ಅಭಿವ್ಯಕ್ತಿಯಾದ ರಂಗಭೂಮಿ ಉಳಿಯಬೇಕಾದರೆ ಜನರು, ನಾಟಕಗಳನ್ನು ನೋಡಿ ಪ್ರೋತ್ಸಾಹಿಸಬೇಕು’ ಎಂದರು.
ಶಾಂತಲಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ, ‘ಈ ಕಾಲದಲ್ಲಿ ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸವಾಲಿನ ಕೆಲಸ. ಎಲ್ಲವನ್ನೂ ಹೊಂದಿಸಿ ಕಾರ್ಯಕ್ರಮ ಮಾಡಿದರೂ, ಜನರನ್ನು ಬರುವಂತೆ ಮಾಡುವುದು ಕಷ್ಟವಾಗಿದೆ. ಈ ನಾಟಕೋತ್ಸವಕ್ಕೆ ಇಷ್ಟು ಜನ ಸೇರಿರುವುದು ಆಶಾದಾಯಕ ಬೆಳವಣಿಗೆ’ ಎಂದು ಹೇಳಿದರು.
ಪಟೇಲ್ ಗ್ರೂಪ್ಸ್ ಸಂಸ್ಥಾಪಕ ಅಧ್ಯಕ್ಷ ಎ.ಜೆ. ಸುರೇಶ್, ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಅಲ್ತಾಫ್ ಅಹಮದ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್, ನಿವೃತ್ತ ಔಷಧ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಇದ್ದರು. ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ವಿ. ಬಾಬು ಗಣ್ಯರನ್ನು ಸ್ವಾಗತಿಸಿದರು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು ನಿರೂಪಣೆ ಮಾಡಿದರು. ಕೆಂಗಲ್ ವಿನಯಕುಮಾರ್ ಗಾಯನ ಪ್ರಸ್ತುತಪಡಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ, ‘ಬೂಕರ್’ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ರಚನೆ ಮತ್ತು ಡಾ. ಎಂ. ಗಣೇಶ್ ನಿರ್ದೇಶನದ ‘ಹೃದಯದ ತೀರ್ಪು’ ನಾಟಕ ಪ್ರದರ್ಶನ ಜರುಗಿತು.

ಅಂಬೇಡ್ಕರ್ ಭವನವನ್ನು ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಮೇಲ್ದರ್ಜೆಗೇರಿಸಲಾಗುವುದು. ಆ ಮೂಲಕ ನಾಟಕ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತಮ ವೇದಿಕೆ ಒದಗಿಸಲಾಗುವುದುಕೆ. ಶೇಷಾದ್ರಿ ಶಶಿ ಅಧ್ಯಕ್ಷ ರಾಮನಗರ ನಗರಸಭೆ
ಇಂದು ಸಮಾರೋಪ ಸಮಾರಂಭ
ನಾಟಕೋತ್ಸವದ ಸಮಾರೋಪ ಸಮಾರಂಭ ಶುಕ್ರವಾರ ಸಂಜೆ 6ಕ್ಕೆ ನಡೆಯಲಿದೆ. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಸಮಾರೋಪ ನುಡಿಗಳನ್ನಾಡಲಿದ್ದರೆ. ಮುಖ್ಯ ಅತಿಥಿಗಳಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಪಟೇಲ್ ಆಂಗ್ಲಶಾಲೆ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ರಾಜು ಭಾಗವಹಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದ ಬಳಿಕ ಜಿ.ನಾ. ದಾಮೋದರ ಶೆಟ್ಟಿ ರಚನೆ ಮತ್ತು ಶಂಕರ ವೆಂಕಟೇಶ್ವರನ್ ನಿರ್ದೇಶನದ ‘ಅವತರಣಂ ಭ್ರಾಂತಾಲಯ’ ನಾಟಕ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.