ಕನಕಪುರ: ಕನಕಪುರದ ಶಕ್ತಿ ದೇವತೆ ಕೆಂಕೇರಮ್ಮ ದೇಗುಲದ ಬಾಗಿಲು ಒಡೆದು ಕಳ್ಳರು ಚಿನ್ನಾಭರಣ ಹಾಗೂ ಹುಂಡಿ ಹಣ ದೋಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕೆಂಕೇರಮ್ಮ ದೇವಾಲಯವು ಜನವಸತಿ ಬಡಾವಣೆಯಲ್ಲಿದ್ದರೂ ಕಳ್ಳರು ಕಾಂಪೌಂಡ್ ಹಾರಿ, ದೇವಾಲಯದ ಹೆಬ್ಬಾಗಿಲನ್ನು ಒಡೆದು ದೇವಿ ಮೈ ಮೇಲಿದ್ದ ಚಿನ್ನದ ತಾಳಿ ಮತ್ತು ಬೆಳ್ಳಿ ಒಡವೆ ಹಾಗೂ ಎರಡು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಜೊತೆಗೆ ಹುಂಡಿಯನ್ನು ದೇವಾಲಯ ಆವರಣದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಬೆಳಿಗ್ಗೆ ಅರ್ಚಕರು ದೇವಾಲಯದ ಬಳಿ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಟ್ರಸ್ಟ್ ಅಧ್ಯಕ್ಷ ಚಿಕ್ಕಲಿಂಗಯ್ಯ ಕನಕಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎರಡು ಹುಂಡಿಗಳ ತುಂಬ ಹಣವಿತ್ತು. ಜೊತೆಗೆ ದೇವಿ ಮೈಮೇಲಿದ್ದ 12 ಗ್ರಾಂ ಚಿನ್ನ ಹಾಗೂ 200 ಗ್ರಾಂ ಬೆಳ್ಳಿ ಆಭರಣಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಗರ ವಿಭಾಗದ ಸರ್ಕಲ್ ಇನ್ಸ್ಪೆಕ್ಟರ್ ಅನಂತರಾಮ್, ಎಎಸ್ಐ ಪದ್ಮನಾಭ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸ್ಥಳೀಯರು ಹಾಗೂ ದೇವಾಲಯ ಸಮಿತಿ ಅವರಿಂದ ಮಾಹಿತಿ ಪಡೆದಿದ್ದಾರೆ. ಬೆರಳಚ್ಚು ತಂಡವು ದೇವಾಲಯದಲ್ಲಿ ಪರಿಶೋಧನೆ ನಡೆಸಿ ಸಿಸಿಟಿವಿ ಕ್ಯಾಮೆರಾಗಳ ಫೋಟೋಗಳನ್ನು ಕಲೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.