ರಾಮನಗರ: ನಗರದ ಐಜೂರಿನ ನೇತಾಜಿ ಪಾಪ್ಯುಲರ್ ಶಾಲೆ ಎದುರು ಶುಕ್ರವಾರ ಬೆಳಿಗ್ಗೆ ನಿರ್ಮಾಣ ಹಂತದಲ್ಲಿದ್ದ ಮ್ಯಾನ್ ಹೋಲ್ ಗೆ ಇಳಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಕಮಲಾನಗರದ ನಿವಾಸಿಗಳಾದಮಂಜುನಾಥ್ (29), ಮಂಜುನಾಥ್ (32) ಹಾಗೂರಾಜೇಶ್ (40) ಮೃತರು.
ನಗರದ 30 ನೇ ವಾರ್ಡ್ ನಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಹೊಸ ಚರಂಡಿಗೆ ಹಾಕಲಾಗಿದ್ದ ಬ್ಲಾಕ್ ಅನ್ನು ತೆಗೆಯಲು ಈ ಕಾರ್ಮಿಕರು ಮ್ಯಾನ್ ಹೋಲ್ ಮೂಲಕ 15 ಅಡಿ ಆಳಕ್ಕೆ ಇಳಿದಿದ್ದರು. ಮೊದಲಿಗೆ ರಾಜೇಶ ಕೆಳಗೆ ಇಳಿದಿದ್ದು, ಆಯಾ ತಪ್ಪಿ ಬಿದ್ದಿದ್ದಾರೆ. ಈ ಸಂದರ್ಭ ತಲೆಗೆ ಪೆಟ್ಟಾಗಿದೆ. ಇವರನ್ನು ರಕ್ಷಿಸಲು ಉಳಿದ ಇಬ್ಬರೂ ಕೆಳಗೆ ಇಳಿದಿದ್ದು, ಉಸಿರುಗಟ್ಟಿ ಅಲ್ಲಿಯೇ ಸಾವನ್ನಪ್ಪಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಆಮ್ಲಜನಕ ಮಾಸ್ಕ್ ತೊಟ್ಟು ಕೆಳಗೆ ಇಳಿದು ಶವಗಳನ್ನು ಹೊರ ತೆಗೆದರು.
' ಪ್ರಕರಣದಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಯಾವುದೇ ಸುರಕ್ಷತಾ ನಿಯಮಗಳನ್ನು ಅನುಸರಿಸದೇ ಕಾಮಗಾರಿ ನಡೆಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು' ಎಂದು ರಾಮನಗರ ಎಸ್ಪಿ ಗಿರೀಶ್ ತಿಳಿಸಿದರು.
ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ನರಸಿಂಹಮೂರ್ತಿ , ರಾಮನಗರ ನಗರಸಭೆ ಆಯುಕ್ತ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.