ADVERTISEMENT

ವಿದ್ಯಾರ್ಥಿಗಳಿಗೆ ಸ್ವಾಬ್ ಸಂಗ್ರಹಣೆ ತರಬೇತಿ ನೀಡಿ: ಸಚಿವ ಅಶ್ವತ್ಥನಾರಾಯಣ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 13:31 IST
Last Updated 3 ಆಗಸ್ಟ್ 2020, 13:31 IST
ಸಭೆಯಲ್ಲಿ ಪಾಲ್ಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳು
ಸಭೆಯಲ್ಲಿ ಪಾಲ್ಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳು   

ರಾಮನಗರ: ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದ್ದು, ಗಂಟಲ ದ್ರವ ಸಂಗ್ರಹಣೆಗೆ ವಿಜ್ಞಾನ ಹಿನ್ನೆಲೆಯುಳ್ಳ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ ನಿಯೋಜಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸೂಚಿಸಿದರು.

ಅವರು ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿರುವ 69 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಪರೀಕ್ಷೆಯ ಮಾದರಿ ಸಂಗ್ರಹಣೆ ಕೇಂದ್ರಗಳನ್ನು ತೆರೆದು ತರಬೇತಿ ನೀಡಲಾಗುವ ವಿದ್ಯಾರ್ಥಿಗಳನ್ನು ನಿಯೋಜಿಸಿಕೊಳ್ಳಿ. ಜಿಲ್ಲೆಯಲ್ಲಿ ಕೋವಿಡ್-19 ಲಕ್ಷಣವುಳ್ಳ ರೋಗಿ ಪರೀಕ್ಷೆಗೆ ಒಳಪಡಬೇಕು. ಯಾವುದೇ ಕಾರಣಕ್ಕೂ ಅವರು ಅದರಿಂದ ವಂಚಿತರಾಗಬಾರದು ಎಂದರು.

24 ಗಂಟೆಯೊಳಗೆ ವರದಿ

ADVERTISEMENT

ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟವರಿಗೆ 24 ಗಂಟೆಯೊಳಗೆ ಪರೀಕ್ಷೆಯ ವರದಿ ನೀಡಬೇಕು. ಪರೀಕ್ಷೆಯ ವರದಿ ಬ್ಯಾಕ್‌ಲಾಗ್ ಆಗದಂತೆ ನೋಡಿಕೊಳ್ಳಿ. ಕೋವಿಡ್-19 ಪರೀಕ್ಷೆ ರೋಗಿಗಳನ್ನು ಒಳಪಡಿಸುವಾಗ ಸರಿಯಾದ ವಿಳಾಸ ಪಡೆದುಕೊಳ್ಳಿ. ಇಲ್ಲಾವಾದಲ್ಲಿ ಪಾಸಿಟಿವ್ ಬಂದ ಸಂದರ್ಭದಲ್ಲಿ ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ ಹಾಗೂ ರೋಗ ಕೂಡ ಹರಡುತ್ತದೆ. ಐ.ಎಲ್.ಐ ಮತ್ತು ಎಸ್.ಎ.ಆರ್.ಐ ಪ್ರಕರಣಗಳಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ನಡೆಸಿ ಎಂದರು.

ಹೆಚ್ಚುವರಿ ಕಟ್ಟಡಕ್ಕೆ ಪ್ರಸ್ತಾವ

ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೆಚ್ಚುವರಿ ಕಟ್ಟಡದ ಅವಶ್ಯಕತೆಯಿದ್ದಲ್ಲಿ ಸೂಕ್ತ ಪ್ರಸ್ತಾವ ಸಲ್ಲಿಸಿ. ಮಂಡ್ಯ ಜಿಲ್ಲೆಯ ನಂತರ ಬೆಂಗಳೂರಿಗೆ ತಲುಪವವರೆಗೂ ಮೈಸೂರು -ಬೆಂಗಳೂರು ಹೆದ್ದಾರಿಯಲ್ಲಿ ಯಾವುದೇ ಟ್ರಾಮಾ ಸೆಂಟರ್ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸೇರಿದಂತೆ ಆಸ್ಪತ್ರೆಗೆ ಬೇಕಿರುವ ಸಿಬ್ಬಂದಿ, ಸಲಕರಣೆಗಳ ವಿವರದ ಮಾಹಿತಿಯನ್ನು ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕೆರೆ ಒತ್ತುವರಿ ತೆರವುಗೊಳಿಸಿ

ಜಿಲ್ಲೆಯಲ್ಲಿರುವ ಕೆರೆಗಳ ಸರ್ವೆ ನಡೆಸಿ ಒತ್ತುವರಿಯನ್ನು ಶೀಘ್ರವಾಗಿ ತೆರವುಗೊಳಿಸಬೇಕು. ಗ್ರಾಮಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳ ಬಗ್ಗೆ ನಿಗಾವಹಿಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಒತ್ತುವರಿ ಪ್ರಕರಣಗಳಿದ್ದಲ್ಲಿ ನೋಟಿಸ್ ನೀಡಿ ತೆರವುಗೊಳಿಸಿ ಎಂದು ಅವರು ತಿಳಿಸಿದರು.

ಸಿಎಸ್‌ಆರ್ ಅನುದಾನ

ರಾಮನಗರ ಜಿಲ್ಲೆಯಲ್ಲಿ ಬಹಳಷ್ಟು ಕೈಗಾರಿಕೆಗಳು ತಮ್ಮ ಸಿ.ಎಸ್.ಆರ್. ಅನುದಾನವನ್ನು ಬೇರೆ ಜಿಲ್ಲೆಗಳಿಗೆ ನೀಡಿ ಅಭಿವೃದ್ಧಿ ಕೆಲಸ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ಕೈಗಾರಿಕೆಗಳ ಸಿ.ಎಸ್.ಆರ್. ಅನುದಾನವನ್ನು ಪಡೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮಾತನಾಡಿ, ಜಿಲ್ಲೆಯಲ್ಲಿ 1273 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, 566 ಮಂದಿ ಗುಣಮುಖರಾಗಿರುತ್ತಾರೆ. 690 ಸಕ್ರಿಯ ಪ್ರಕರಣಗಳಿದ್ದು, 17 ಜನ ಮೃಪಟ್ಟಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.