ADVERTISEMENT

ರಾಮನಗರ: ನ್ಯುಮೊನಿಯಾ ತಡೆಗೆ ಲಸಿಕೆ ಮದ್ದು

ಚುಚ್ಚುಮದ್ದು ಅಭಿಯಾನ: ಆರೋಗ್ಯ ಇಲಾಖೆಯಿಂದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 3:45 IST
Last Updated 9 ಆಗಸ್ಟ್ 2021, 3:45 IST
ಕಾರ್ಯಾಗಾರವನ್ನು ಆರೋಗ್ಯ ಇಲಾಖೆಯ ಲಸಿಕಾ ಅಭಿಯಾನದ ಉಪ ನಿರ್ದೇಶಕಿ ಡಾ.ರಜಿನಿ ಉದ್ಘಾಟಿಸಿದರು. ಡಾ.ನಿರಂಜನ್, ಡಾ.ಪದ್ಮಾ,ಡಾ.ನಾಗರಾಜು, ಡಾ.ವರಪ್ರಸಾದ್‌ ಇದ್ದರು
ಕಾರ್ಯಾಗಾರವನ್ನು ಆರೋಗ್ಯ ಇಲಾಖೆಯ ಲಸಿಕಾ ಅಭಿಯಾನದ ಉಪ ನಿರ್ದೇಶಕಿ ಡಾ.ರಜಿನಿ ಉದ್ಘಾಟಿಸಿದರು. ಡಾ.ನಿರಂಜನ್, ಡಾ.ಪದ್ಮಾ,ಡಾ.ನಾಗರಾಜು, ಡಾ.ವರಪ್ರಸಾದ್‌ ಇದ್ದರು   

ರಾಮನಗರ: ಮಕ್ಕಳಲ್ಲಿ ನ್ಯುಮೊನಿಯಾ ತಡೆಗಟ್ಟಲು ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ಹಾಕಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಸಿಕಾ ಅಭಿಯಾನದ ಉಪ ನಿರ್ದೇಶಕಿ ಡಾ.ರಜಿನಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಲಸಿಕೆ ಕುರಿತುಜಿ.ಪಂ. ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ 3 ಡೋಸ್‌ನಲ್ಲಿ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ನೀಡಬೇಕು. 6ನೇ ವಾರದಲ್ಲಿ ಮೊದಲ ಡೋಸ್, 14ನೇ ವಾರದಲ್ಲಿ ಎರಡನೇ ಡೋಸ್ ಹಾಗೂ 9ನೇ ತಿಂಗಳಿಗೆ ಬೂಸ್ಟರ್‌ನಲ್ಲಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪದ್ಮಾ ಮಾತನಾಡಿ, ದೇಶದಲ್ಲಿ ನ್ಯುಮೋನಿಯಾಯಿಂದ ಮಕ್ಕಳ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮೊದಲು ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ನೀಡುತ್ತಿದ್ದರು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲೂ ಈ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ನ್ಯುಮೋನಿಯಾ ತಡೆಗಟ್ಟಲು ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ನೀಡಲಾಗುವುದು. ಇದರಿಂದ ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹ ಲಸಿಕೆಯನ್ನು ಉಚಿತವಾಗಿ ನೀಡುವ ಉದ್ದೇಶವನ್ನು ಹೊಂದಿದೆ ಎಂದರು.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅನಾರೋಗ್ಯ ಮತ್ತು ಸಾವಿಗೆ ನ್ಯುಮೋನಿಯಾ ಒಂದು ಸಾಮಾನ್ಯ ಕಾರಣವಾಗಿದೆ. 2015ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಜಾಗತಿಕ ನ್ಯುಮೋನಿಯಾ ಸಾವಿನ ಶೇಕಡಾ 20ರಷ್ಟು ಭಾರತಕ್ಕೆ ಸೇರಿದೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದರು.

ಭಾರತದಲ್ಲಿ 2010ರ ವೇಳೆಗೆ 1-59 ತಿಂಗಳ ವಯಸ್ಸಿನ ಮಕ್ಕಳಲ್ಲಿ ಸುಮಾರು ಶೇಕಡಾ 30ರಷ್ಟು ನ್ಯುಮೋನಿಯಾ ಸಾವುಗಳು ನ್ಯೂಮೋಕಾಕಲ್ ನ್ಯುಮೋನಿಯಾಕ್ಕೆ ಕಾರಣವಾಗಿದೆ. ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ಮೆನಿಂಜೈಟಿಸ್, ನ್ಯುಮೋನಿಯಾ ಮತ್ತು ನ್ಯೂಮೋಕಾಕಸ್‌ನಿಂದ ಉಂಟಾಗುವ ಬ್ಯಾಕ್ಟೀರಿಯಾದ ತೀವ್ರ ಸ್ವರೂಪದ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ತಿಳಿಸಿದರು.

ಲಸಿಕೆಯಲ್ಲಿ ಒಳಗೊಂಡಿರುವ ಸೆರೋಟೈಪ್‌ಗಳಿಂದ ಉಂಟಾಗುವ ಆಕ್ರಮಣಕಾರಿ ನ್ಯೂಮೋಕಾಕಲ್ ರೋಗವನ್ನು ತಡೆಗಟ್ಟುವಲ್ಲಿ ಪಿ.ಸಿ.ವಿ ಶೇಕಡಾ 80ರಷ್ಟು ಪರಿಣಾಮಕಾರಿ ಎಂದು ಪುರಾವೆಗಳು ಇವೆ. 146 ದೇಶಗಳು ತಮ್ಮ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ಈ ಲಸಿಕೆಯನ್ನು ಪರಿಚಯಿಸಿವೆ ಎಂದು ಮಾಹಿತಿ ನೀಡಿದರು. ಸೆಪ್ಟೆಂಬರ್ 1 ರಿಂದ ಈ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ರಾಜ್ಯಮಟ್ಟದ ಎಸ್.ಎಂ.ಓ ಡಾ.ನಾಗರಾಜ್, ಜೆ.ಎಸ್.ಐ ಸಂಯೋಜಕ ಡಾ.ವರಪ್ರಸಾದ್, ಡಿ.ಎಂ.ಓ ಡಾ.ಪ್ರಸನ್ನ ಕುಮಾರ್, ಡಿ.ಎಲ್.ಓ ಡಾ.ಮಂಜುನಾಥ್, ಡಿ.ಎಸ್.ಓ ಡಾ.ಕಿರಣ್ ಶಂಕರ್, ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.