ADVERTISEMENT

ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ

ಮತದಾನ ಜಾಗೃತಿ ಬೈಕ್ ರ‍್ಯಾಲಿಯಲ್ಲಿ ಜಿ.ಪಂ. ಸಿಇಒ ದಿಗ್ವಿಜಯ್ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 7:36 IST
Last Updated 17 ಏಪ್ರಿಲ್ 2024, 7:36 IST
ರಾಮನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಮತದಾರರ ಜಾಗೃತಿಗಾಗಿ  ಅಂಗವಿಕಲರಿಂದ ಹಮ್ಮಿಕೊಂಡಿದ ಬೈಕ್ ರ‍್ಯಾಲಿಗೂ ಮುಂಚೆ, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು
ರಾಮನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಮತದಾರರ ಜಾಗೃತಿಗಾಗಿ  ಅಂಗವಿಕಲರಿಂದ ಹಮ್ಮಿಕೊಂಡಿದ ಬೈಕ್ ರ‍್ಯಾಲಿಗೂ ಮುಂಚೆ, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು   

ರಾಮನಗರ: ‘ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ನೀಡಿರುವ ಮತದಾನ ಹಕ್ಕನ್ನು ನೀಡಿದೆ. ಮತದಾರರು ಈ ಹಕ್ಕನ್ನು ಯಾವುದೇ ಆಮಿಷಕ್ಕೆ ಒಳಗಾಗದೆ ಚಲಾಯಿಸುವ ಮೂಲಕ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಪ್ರಯುಕ್ತ, ನಗರದಲ್ಲಿ ಮತದಾರರ ಜಾಗೃತಿಗಾಗಿ ಅಂಗವಿಕಲರಿಂದ ಹಮ್ಮಿಕೊಂಡಿದ ಬೈಕ್ ರ‍್ಯಾಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಜೆಗಳ ಮತದ ಮೇಲೆ ದೇಶದ ಭವಿಷ್ಯವು ನಿಂತಿದೆ. ನಾವು ಯಾರನ್ನು ಆಯ್ಕೆ ಮಾಡುತ್ತೇವೊ ಅವರು ನಮ್ಮ ಪ್ರತಿನಿಧಿಗಳಾಗಿ ಈ ದೇಶವನ್ನು ಆಳುತ್ತಾರೆ. ನಮ್ಮ ಬೇಕು–ಬೇಡಗಳನ್ನು ನಿರ್ಧರಿಸುವ ನೀತಿಗಳನ್ನು ರೂಪಿಸುತ್ತಾರೆ. ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ. ಹಾಗಾಗಿ, ಈ ಪ್ರಕ್ರಿಯೆಯಲ್ಲಿ ಯಾರೂ ತಪ್ಪಿಸಿಕೊಳ್ಳಬಾರದು. 18 ವರ್ಷ ಮೇಲ್ಪಟ್ಟವರೆಲ್ಲರೂ ತಪ್ಪದೆ ಮತ ಚಲಾಯಿಸಬೇಕು’ ಎಂದರು.

ADVERTISEMENT

‘ಹಿಂದೆ ಕೆಲವರಿಗೆ ಮಾತ್ರ ಮತದಾನ ಮಾಡಲು ಅವಕಾಶವಿತ್ತು. ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ ಸಂವಿಧಾನವು ಜಾತಿ–ಧರ್ಮ ಹಾಗೂ ಬಡವ–ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನವಾದ ಮತದಾನ ಹಕ್ಕನ್ನು ನೀಡಿತು. ಇಲ್ಲಿ ಕೋಟ್ಯಧೀಶನ ಮತಕ್ಕಿರುವ ಮೌಲ್ಯವೇ ಬಡವನ ಮತಕ್ಕೂ ಇದೆ. ಹಾಗಾಗಿ, ನಮ್ಮ ಮತವನ್ನು ಯಾವುದೇ ಆಮಿಷಕ್ಕೆ ಮಾರಾಟ ಮಾಡಿಕೊಳ್ಳಬಾರದು’ ಎಂದು ಹೇಳಿದರು9.

ರ‍್ಯಾಲಿಯಲ್ಲಿ ಭಾಗವಹಿಸಿದ್ದವರಿಗೆ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಪಂಚಾಯಿತಿ ಆವರಣದಿಂದ ಹೊರಟ ರ‍್ಯಾಲಿಯು ಬೆಂಗಳೂರು–ಮೈಸೂರು ರಸ್ತೆಯ ಮೂಲಕ ತಾಲ್ಲೂಕು ಆಡಳಿತ ಸೌಧವನ್ನು ತಲುಪಿತು. ರ‍್ಯಾಲಿಯಲ್ಲಿ ಪಾಲ್ಗೊಂಡವರು ಮಾರ್ಗದುದ್ದಕ್ಕೂ ‘ಮತದಾನ ಪ್ರಜಾಪ್ರಭುತ್ವದ ಪರಮ ಗುರಿ’, ‘ಮತದಾನ ಪವಿತ್ರ ದಾನ’, ‘ನಿಮ್ಮ ಮತ ನಾಡಿಗೆ ಹಿತ’ ಎಂಬ ಘೋಷಣೆಗಳನ್ನೂ ಕೂಗಿದರು. ಮತದಾನ ಜಾಗೃತಿ ಕುರಿತು ಫಲಕಗಳನ್ನು ಪ್ರದರ್ಶಿಸಿದರು.

ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿ ಪ್ರಕಾಶ್ ಜಯರಾಮಯ್ಯ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಜನಿ, ಯೋಜನಾ ಸಹಾಯಕಿ ಶ್ರುತಿ ಆರ್. ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಇದ್ದರು. ಅಂಗವಿಕಲರು ಬೈಕ್‌ ರ‍್ಯಾಲಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.