
ಹಾರೋಹಳ್ಳಿ: ಬಿಡದಿ, ಕಂಚುಗಾರನಹಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸರ್ಕಾರ ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಪ್ರಾಣ ಹೋದರೂ ಭೂಮಿ ಬಿಡುವುದಿಲ್ಲ ಎಂದು ಜಿಬಿಎ ಮಹಿಳಾ ಹೋರಾಟಗಾರರು ಘೋಷಿಸಿದರು.
ಸರ್ಕಾರ ನಮ್ಮ ಜೀವನ ಕಿತ್ತುಕೊಳ್ಳಲು ಹೊರಟಿದೆ. ಯಾವುದೇ ಕಾರಣಕ್ಕೂ ಒಂದಿಂಚೂ ಭೂಮಿ ಬಿಡುವುದಿಲ್ಲ. ನಮ್ಮ ಹಕ್ಕನ್ನು ಹೋರಾಟದ ಮೂಲಕವೇ ಪಡೆದುಕೊಳ್ಳುತ್ತೇವೆ. ಭೂಮಿಯನ್ನು ಉಳಿಸಿಕೊಂಡೇ ತೀರುತ್ತೇವೆ ಎಂದು ಶಪಥ ಮಾಡಿದರು.
ಹಾರೋಹಳ್ಳಿಯ ಚೆನ್ನಮ್ಮ ಮಾದಯ್ಯ ಕನ್ವೆನ್ಷನ್ ಹಾಲ್ನಲ್ಲಿ ನಡೆದ ರೈತ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಹಿಳಾ ಹೋರಾಟಗಾರರು ಮಾತನಾಡಿದರು.
‘ನಮ್ಮ ಹೋರಾಟವನ್ನು ರಾಜಕೀಯ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡರೆ ಹೊರತು ನಮ್ಮ ಕಷ್ಟ ಕೇಳಲಿಲ್ಲ. ನಮ್ಮ ಕಷ್ಟವನ್ನು ದೂರ ಮಾಡುವ ಕೆಲಸ ಯಾರೂ ಮಾಡಲಿಲ್ಲ’ ಎಂದು ಮಹಿಳೆಯರು ದೂರಿದರು.
‘ಎಲ್ಲಾ ಪ್ರಗತಿಪರ ಸಂಘಟನೆಗಳು ಒಟ್ಟುಗೂಡಿ ನಮಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ದೇವನಹಳ್ಳಿಯಲ್ಲಿ ನಡೆದ ಹೋರಾಟದ ರೀತಿಯಲ್ಲಿ ಈ ಹೋರಾಟವು ತೀವ್ರವಾಗಬೇಕು. ರಾಜಕೀಯ ಬಿಟ್ಟು ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಈ ಸಂಕೋಲೆಯಿಂದ ನಮ್ಮನ್ನು ಬಿಡಿಸಬೇಕು’ ಎಂದು ಮಹಿಳೆಯರು ರೈತ ಸಂಘದ ಎದುರು ಅಲವತ್ತುಕೊಂಡರು.
‘ದೊಡ್ಡ ನಾಯಕರುಗಳೆಲ್ಲ ನಮ್ಮ ಹೋರಾಟಕ್ಕೆ ಬಂದರೂ ಏನು ಪ್ರಯೋಜನವಾಗಲಿಲ್ಲ. ನಾಯಕರು ಕೇವಲ ಭಾಷಣಕ್ಕೆ ಮಾತ್ರ ಸೀಮಿತರಾದರು. ನಮ್ಮ ಹೋರಾಟ ಯಾವುದೇ ರೀತಿಯಲ್ಲಿ ಫಲಪ್ರದವಾಗಿಲ್ಲ. ಅಧಿವೇಶನದಲ್ಲಿ ರಾಜಕಾರಣಿಗಳು ಅವರವರ ಸಮಸ್ಯೆಗಳನ್ನು ಮಾತ್ರ ಹೇಳಿಕೊಳ್ಳುತ್ತಿದ್ದಾರೆ. ಅಲ್ಲಿ ರೈತರ ಸಮಸ್ಯೆಗಳು ಚರ್ಚೆಯೇ ಆಗುತ್ತಿಲ್ಲ’ ಎಂದು ಮಹಿಳಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಭೂಮಿ ಕಳೆದುಕೊಂಡು ರೈತರ ಎಲ್ಲಿಗೆ ಹೋಗಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಒಂದು ರೀತಿಯಲ್ಲಿ ರೈತರನ್ನು ಹಿಂಸಿಸುತ್ತಿದ್ದರೆ. ರಾಜ್ಯ ಸರ್ಕಾರ ರೈತರ ಜಮೀನುಗಳನ್ನು ಕಿತ್ತುಕೊಳ್ಳುವ ಮೂಲಕ ಬದುಕನ್ನೇ ಕಸಿದುಕೊಳ್ಳಲು ಹೊರಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಬಿಎ ಹೋರಾಟ ಯಾವುದೇ ಕಾರಣಕ್ಕೂ ಸಡಿಲಾಗಬಾರದು. ಭೂಮಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರು ಬೀದಿಗಿಳಿದಿರುವುದು ಖುಷಿಯ ವಿಚಾರ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಯ್ಯ ಹೇಳಿದರು.
28 ಹಳ್ಳಿಯ ಜನರು ಸರ್ಕಾರಕ್ಕೆ ಭೂಮಿ ನೀಡಿ ಎಲ್ಲಿಗೆ ಹೋಗಬೇಕು? ಸರ್ಕಾರದ ದುಡ್ಡು ಯಾರಿಗೆ ಬೇಕು? ನಮಗೆ ಭೂಮಿ ನೀಡಿದರೆ ಸಾಕು. ಬೇಕಾದರೆ ನಾವೇ ಸರ್ಕಾರಕ್ಕೆ ಹಣ ನೀಡುತ್ತೇವೆ. ಸರ್ಕಾರ ನೀಚ ಬುದ್ಧಿಯನ್ನು ಮೊದಲು ಬಿಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಯ್ಯ, ಸಂಚಾಲಕ ಮುನಿರಾಜು,ವಿಜಿಕುಮಾರ್, ಜಯಕರ್ನಾಟಕ ಎಂ.ಗಿರೀಶ್, ರೈತ ಸಂಘದ ಹಾರೋಹಳ್ಳಿ ತಾಲ್ಲೂಕಿನ ನೂತನ ಅಧ್ಯಕ್ಷ ಶಿವರಾಜು ಹಾಗೂ ಜಿಬಿಎ ಹೋರಾಟಗಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.