ರಾಮನಗರ: ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಕಾರಣಕ್ಕೆ ಕೈ ಕೊಟ್ಟಿರುವ ಬೆಳೆಗಳಿಗೆ ವಿಮೆ ಪರಿಹಾರ ನೀಡಲು ಮುಂದಾಗಿರುವ ಕೃಷಿ ಇಲಾಖೆಯು, ಹತ್ತು ಬಗೆಯ ಬೆಳೆಗಳ ವಿಮೆ ನೋಂದಣಿ ಆರಂಭಿಸಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಮುಂಗಾರು ಹಂಗಾಮಿನ ಬೆಳೆಗಳಿಗೆ ಪ್ರಕೃತಿ ವಿಕೋಪ ಹಾಗೂ ರೋಗಬಾಧೆಯಿಂದ ರೈತರು ಬೆಳೆನಷ್ಟಕ್ಕೆ ಪರಿಹಾರ ಪಡೆಯಲು ವಿಮೆ ಆಸರೆಯಾಗಿದೆ.
ಕೃಷಿಯು ಇತ್ತೀಚೆಗೆ ಹವಾಮಾನದ ಜೊತೆಗಿನ ಜೂಜಾಟದಂತಾಗಿದೆ. ಮಳೆ, ಗಾಳಿ, ಬಿಸಿಲಿನಲ್ಲಾಗುತ್ತಿರುವ ಏರುಪೇರು ಇತ್ತೀಚೆಗೆ ಸಾಮಾನ್ಯವಾಗಿದೆ. ರೈತರು ಬೆಳೆ ನಷ್ಟದ ಕೂಪಕ್ಕೆ ಬೀಳುತ್ತಲೇ ಇದ್ದು, ಹಾಕಿದ ಬಂಡವಾಳವೂ ಕೈ ಸೇರದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಆಸರೆಯಾಗಲು ಇಲಾಖೆಯ ವಿಮೆ ಪರಿಹಾರದ ಭದ್ರತೆ ನೀಡಿದೆ.
ಯಾವ್ಯಾವ ಬೆಳೆ?: ‘ಮಳೆಯಾಶ್ರಿತ ಬೆಳೆ ವ್ಯಾಪ್ತಿಯಲ್ಲಿ ರಾಗಿ, ಮುಸುಕಿನ ಜೋಳ, ತೊಗರಿ, ಹುರುಳಿ, ಅಲಸಂದೆ, ಎಳ್ಳು, ನೆಲಗಡಲೆ ಹಾಗೂ ನೀರಾವರಿ ವ್ಯಾಪ್ತಿಯಲ್ಲೂ ಬರುವ ರಾಗಿ, ಭತ್ತ, ಮುಸುಕಿನ ಜೋಳ ಬೆಳೆಗಳು ವಿಮೆಗೆ ಒಳಪಟ್ಟಿವೆ. ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಬ್ಬರೂ ವಿಮೆ ಮಾಡಿಸಬಹುದು. ಸಾಲ ಪಡೆದ ರೈತರಿಗೆ ವಿಮೆ ಸೌಲಭ್ಯ ಬೇಡವಾದರೆ ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕೆ 7 ದಿನ ಮುಂಚೆ ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಮೆ ಪರಿಹಾರಕ್ಕೆ ಮಳೆ ಅಭಾವದಿಂದ ಶೇ 75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲವಾಗುವುದು, ತೇವಾಂಶ ಕೊರತೆ, ತೀವ್ರ ಬರಗಾಲ, ಮುಳುಗಡೆ ಮುಂತಾದ ಸಮಸ್ಯೆಯಿಂದ ಬಿತ್ತನೆಯಾದ ನಂತರ ಕಟಾವಿಗೆ 15 ದಿನಗಳಿಗಿಂತ ಮೊದಲು ಬೆಳೆ ಹಾನಿಯಾಗುವುದು, ಕಟಾವು ಮಾಡಿದ ನಂತರ ಎರಡು ವಾರದೊಳಗೆ ಜಮೀನಿನಲ್ಲಿ ಒಣಗಲು ಬಿಟ್ಟಂತಹ ಬೆಳೆಯು ಚಂಡಮಾರುತ, ಅಕಾಲಿಕ ಮಳೆಯಿಂದಾಗಿ ನಾಶವಾದರೆ ಅದಕ್ಕೆ ವಿಮೆ ಪರಿಹಾರ ಸಿಗಲಿದೆ’ ಎಂದು ಹೇಳಿದರು.
‘ರೈತರು ತಮಗೆ ಸಮೀಪವಿರುವ ಬ್ಯಾಂಕ್, ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮೆ ಪರಿಹಾರಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಈ ಬಾರಿ ಜಿಲ್ಲೆಗೆ ಮೆ. ಓರಿಯಂಟಲ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ವಿಮಾ ಕಂಪನಿಯಾಗಿ ನಿಗದಿಪಡಿಸಲಿದೆ. ರೈತರು ಬೆಳೆನಷ್ಟ ಭರಿಸಿಕೊಳ್ಳಲು ತಪ್ಪದೆ ನೋಂದಣಿ ಮಾಡಿಕೊಂಡು ಪ್ರಯೋಜನ ಪಡೆಯಬೇಕು’ ಎಂದರು.
ನಮ್ಮ ಬೆಳೆ ನಮ್ಮಹಕ್ಕು ಘೋಷವಾಕ್ಯದೊಂದಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಆರಂಭಿಸಲಾಗಿದೆ. ರೈತರು ಯೋಜನೆಯ ಪ್ರಯೋಜನ ಪಡೆಯಬೇಕು.– ಎನ್. ಅಂಬಿಕಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.