ಚನ್ನಪಟ್ಟಣ: ‘ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಕಿವಿಮಾತು ಹೇಳಿದರು.
ಪಟ್ಟಣದ ಮಹದೇಶ್ವರ ನಗರದ ನ್ಯೂ ಆಕ್ಸ್ಫರ್ಡ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಪ್ರಥಮ ಚಿಕಿತ್ಸಾ ದಿನ ಹಾಗೂ ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಷ್ಟು ಅವಶ್ಯಕವೋ ಅದೇ ರೀತಿಯಲ್ಲಿ ಉತ್ತಮ ಆರೋಗ್ಯವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಆರೋಗ್ಯ ಕಾಪಾಡಿಕೊಳ್ಳಬೇಕು. ಆಹಾರದಿಂದ ಆದಿಯಾಗಿ ಎಲ್ಲ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಮಾತನಾಡಿ, ರಾಷ್ಟ್ರೀಯ ಪ್ರಥಮ ಚಿಕಿತ್ಸಾ ದಿನವನ್ನು ಆಚರಿಸುತ್ತಿರುವ ಶಾಲೆಯ ಕಾಳಜಿ ಪ್ರಶಂಸನಾರ್ಹ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಆತನಿಗೆ ತಕ್ಷಣ ಪ್ರಥಮ ಚಕಿತ್ಸೆ ಅಗತ್ಯವಿರುತ್ತದೆ. ಇದರಿಂದ ಆತನ ಪ್ರಾಣ ಉಳಿಸಬಹುದು. ಇದನ್ನು ಮಕ್ಕಳಿಗೆ ತಿಳಿಸಿಕೊಡುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ ಮಾತನಾಡಿ, ‘ಪ್ರತಿಯೊಬ್ಬ ಮಗುವಿಗೂ ಆರೋಗ್ಯ ಶಿಕ್ಷಣ ಅವಶ್ಯಕ. ಆರೋಗ್ಯ ಇದ್ದರೆ ಮಾತ್ರ ನೀವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಆರೋಗ್ಯದ ಜತೆಗೆ ಇತರರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು’ ಎಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಚಂದ್ರು, ಶಾಲೆಯ ಮುಖ್ಯಶಿಕ್ಷಕ ಶಿವಣ್ಣ ಹಾಗೂ ಶಾಲೆಯ ಶಿಕ್ಷಕ ವರ್ಗ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.