ADVERTISEMENT

ಕಾಡಾನೆ ತಡೆಗಿಲ್ಲ ಪರಿಹಾರ: ಜೀವ–ಬೆಳೆ ಹಾನಿಗೆ ರೈತರು ತತ್ತರ

ಬರಡನಹಳ್ಳಿ ಕೃಷ್ಣಮೂರ್ತಿ
Published 1 ಜನವರಿ 2024, 8:05 IST
Last Updated 1 ಜನವರಿ 2024, 8:05 IST
ಕಾಡಾನೆಗಳು ನಾಡು ಪ್ರವೇಶಿಸದಂತೆ ತಡೆಯಲು ಕನಕಪುರ ತಾಲ್ಲೂಕಿನ ಗಡಿ ಭಾಗದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ರೈಲ್ವೆ ಬ್ಯಾರಿಕೇಡ್
ಕಾಡಾನೆಗಳು ನಾಡು ಪ್ರವೇಶಿಸದಂತೆ ತಡೆಯಲು ಕನಕಪುರ ತಾಲ್ಲೂಕಿನ ಗಡಿ ಭಾಗದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ರೈಲ್ವೆ ಬ್ಯಾರಿಕೇಡ್   

ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ಮತ್ತು ಮನುಷ್ಯರ ನಡುವಿನ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಇರುವ ಸಮಸ್ಯೆಗೆ ಅರಣ್ಯ ಇಲಾಖೆಯು ಶಾಶ್ವತ ಪರಿಹಾರ ಕಂಡುಕೊಳ್ಳದೆ, ತೇಪೆ ಹಾಕುವ ಕೆಲಸ ಮಾಡಿಕೊಂಡೇ ಬಂದಿದೆ. ಅದರ ಪರಿಣಾಮವಾಗಿ, ಒಂದೆಡೆ ಕಾಡಾನೆಗಳ ಸಂತತಿ ಹೆಚ್ಚಾಗಿದ್ಡು, ನಾಡಿಗೆ ನುಗ್ಗಿ ಜೀವಹಾನಿ ಮತ್ತು ಬೆಳೆ ಹಾನಿ ಮಾಡುವುದು ಮಾಮೂಲಿಯಾಗಿದೆ. ಒಂದೆರಡು ದಶಕದ ಹಿಂದೆ ಇರದ ಸಮಸ್ಯೆ ಇದೀಗ, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅರಣ್ಯದಂಚಿನ ಜನರ ಜಮೀನು ನೆಚ್ಚಿಕೊಂಡು ಬದುಕಲಾರದ ಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕಿನ ಸ್ಥಿತಿಗತಿಯ ಅವಲೋಕನ.

ಕಾಡಾನೆ ದಾಳಿಗೆ ವರ್ಷದಲ್ಲಿ 6 ಮಂದಿ ಬಲಿ

ಕನಕಪುರ: ನೇಪಥ್ಯಕ್ಕೆ ಸರಿದ 2023ನೇ ವರ್ಷದಲ್ಲಿ ತಾಲ್ಲೂಕಿನ ವಿವಿಧೆಡೆ ನಡೆದ ಕಾಡಾನೆ ದಾಳಿಯಲ್ಲಿ ಬರೋಬ್ಬರಿ 8 ಮಂದಿ ಜೀವ ಅಮಾಯಕರು ಕಳೆದುಕೊಂಡಿದ್ದಾರೆ. ಪ್ರತಿಯಾಗಿ, ಆನೆ ದಾಳಿಯಿಂದ ರಕ್ಷಣೆ ಪಡೆಯಲು ಮನುಷ್ಯ ರೂಪಿಸಿದ ಸುರಕ್ಷಾ ಕಾರ್ಯತಂತ್ರದಿಂದ ಎರಡು ಕಾಡಾನೆಗಳು ಮೃತಪಟ್ಟಿವೆ.

ಕಾಡಾನೆ ಮತ್ತು ಮಾನವನ ನಡುವಣ ಈ ಸಂಘರ್ಷ ತಾಲ್ಲೂಕಿನಲ್ಲಿ ಮಾಮೂಲಿಯಾಗಿದೆ. ಕಾಡಂಚಿನಲ್ಲಿದ್ದರೂ ಹಿಂದೆ ಜನ ತಮ್ಮ ಪಾಡಿಗೆ ತಾವು ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಕಾಡಿನಲ್ಲಿರುವ ಆನೆಗಳು ಕಾಡಂಚಿಗೆ ಬಂದು ಹೋದರೂ ಗುಲ್ಲಾಗುತ್ತಿರಲಿಲ್ಲ. ಅದೊಂದು ರೀತಿಯಲ್ಲಿ ಸ್ವಾಭಾವಿಕವೇ ಎಂಬಂತಾಗಿತ್ತು.

ಕೆಲ ವರ್ಷಗಳಿಂದ ಶುರುವಾದ ಆಧುನಿಕ ಅಭಿವೃದ್ಧಿಯ ಪರ್ವವು, ಇಬ್ಬರೂ ಪರಸ್ಪರ ಎದುರುಗೊಳ್ಳುವಂತೆ ಮಾಡಿದೆ. ಮನುಷ್ಯ ಕಾಡಿನತ್ತ ಹೋದಷ್ಟೂ, ವನ್ಯಜೀವಿಗಳು ನಾಡಿನತ್ತ ಬರುತ್ತಿವೆ. ಈ ಸಮಸ್ಯೆಗೆ ಪ್ರಕೃತಿದತ್ತವಾಗಿ ಪರಿಹಾರ ರೂಪುಗೊಳ್ಳದಿರುವುದು, ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.

ADVERTISEMENT

ಅರಣ್ಯ ಪ್ರದೇಶದ ಗಡಿ: ಕನಕಪುರ ತಾಲ್ಲೂಕಿನ ಮುಕ್ಕಾಲು ಭಾಗ ಅರಣ್ಯ ಪ್ರದೇಶದ ಗಡಿ ಹೊಂದಿದೆ. ಸಾತನೂರು ಹೋಬಳಿ, ಉಯ್ಯಂಬಳ್ಳಿ ಹೋಬಳಿ ಹಾಗೂ ಕೋಡಿಹಳ್ಳಿ ಹೋಬಳಿ ಭಾಗವು ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿದೆ. ಒಂದು ಕಡೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವ, ಮತ್ತೊಂಡೆಡೆ ಕಾವೇರಿ ವನ್ಯಜೀವಿ ಧಾಮ ಸುತ್ತುವರಿದಿದೆ.

ವನ್ಯಜೀವಿಗಳು ಹೆಚ್ಚಾಗಿರುವ ಅರಣ್ಯ ಪ್ರದೇಶದಿಂದ ಕಾಡಾನೆಗಳು ನಿರಂತರವಾಗಿ ರೈತರ ಜಮೀನುಗಳಿಗೆ ನುಗ್ಗತ್ತಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನು ನಾಶಪಡಿಸುತ್ತಲೇ ಇವೆ. ಕಾಡಾನೆಗಳ ಮುಂದೆ ಅಸಹಾಯಕರಾಗಿರುವ ರೈತರಿಗೆ, ತಮ್ಮ ಬೆಳೆ ಕೈ ಸೇರುತ್ತದೆಂಬ ಭರವಸೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿ, ತಮ್ಮ ಜಮೀನಿನನ್ನು ಪಾಳು ಬಿಟ್ಟು ಬದುಕಿಗೆ ಬೇರೆ ಕೆಲಸ ನೋಡಿಕೊಂಡಿದ್ದಾರೆ.

ಇದರ ನಡುವೆಯೂ ಕೆಲ ರೈತರು ಸೌರವಿದ್ಯುತ್ ಬೇಲಿ ಸೇರಿದಂತೆ ವಿವಿಧ ಕಾರ್ಯತಂತ್ರಗಳನ್ನು ಅನುಸರಿಸಿ ಬೆಳೆ ಬೆಳೆಯುತ್ತಿದ್ದಾರೆ. ಹಗಲು–ರಾತ್ರಿ ಕಾದು ಬೆಳೆ ಕಾಪಾಡಿಕೊಳ್ಳುತ್ತಿದ್ದಾರೆ. ಆದರೂ, ಕಾಡಾನೆಗಳ ದಾಳಿಯ ಆತಂಕ ಅವರನ್ನು ಬಿಟ್ಟಿಲ್ಲ. ಇತ್ತೀಚೆಗೆ ಕಾಡಾನೆ ಜೊತೆಗೆ ಕಾಡುಹಂದಿ, ನವಿಲು, ಕೃಷ್ಣಮೃಗ, ಕಾಡೆಮ್ಮೆಗಳು ಸಹ ಜಮೀನಿನತ್ತ ಮುಖ ಮಾಡಿ ಬೆಳೆ ಹಾನಿ ಮಾಡುತ್ತಿವೆ.

ವಾಪಸ್ ಗ್ಯಾರಂಟಿ ಇಲ್ಲ: ‘ಕೆಲಸ–ಕಾರ್ಯಕ್ಕಾಗಿ ಜಮೀನಿಗೆ ಹೋದವರು ವಾಪಸ್ ಬರುತ್ತಾರೆಂಬ ಗ್ಯಾರಂಟಿ ಇಲ್ಲದೆ ಬದುಕಬೇಕಾದ ಸ್ಥಿತಿ ಕಾಡಂಚಿನ ಜನರದ್ದು. ಬೆಳಿಗ್ಗೆ ಬಿಸಿಲು ಬಿದ್ದ ಬಳಿಕ, ಸಂಜೆ ಸೂರ್ಯಾಸ್ತದೊಳಗೆ ಊರು ಸೇರಿಕೊಳ್ಳಬೇಕು. ಹೊರಗೆ ಹೋದವರು ವಾಪಸ್ ಬರುವ ಗ್ಯಾರಂಟಿ ಇಲ್ಲವಾಗಿದೆ’ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಕನಕಪುರದ ಎಚ್‌.ಕೆ. ರವಿ ‘ಪ್ರಜಾವಾಣಿ’ಯೊಂದಿಗೆ ಕಾಡಂಚಿನ ಜನರ ಬದುಕನ್ನು ಹಂಚಿಕೊಂಡರು.

‘ಜಮೀನಿಗೆ ಹೋದವರು, ದನ ಕಾಯುವವರು, ತೋಟದ ಕಾವಲು ಕಾಯುವವರು, ಕಾಡಿನ ದಾರಿಯಲ್ಲಿ ನಡೆದುಕೊಂಡು ಬರುವವರ ಮೇಲೆ ಯಾವಾಗ ಕಾಡಾನೆ ದಾಳಿ ನಡೆಯುತ್ತದೊ ತಿಳಿಯದು. ಇದುವರೆಗೆ ಆನೆ ದಾಳಿಗೆ ಬಲಿಯಾದವರೆಲ್ಲರೂ ಹೀಗೆ ಒಂದಲ್ಲ ಒಂದು ಕೆಲಸದಲ್ಲಿದ್ದಾಗ ಮೃತಪಟ್ಟವರೇ. ಜೀವಹಾನಿಗೆ ಪರಿಹಾರ ಕೊಡಲು ತೋರುವ ಉತ್ಸುಕತೆಯನ್ನು ಸರ್ಕಾರ ಸಮಸ್ಯೆಗೆ ಪರಿಹಾರ ರೂಪಿಸುವಲ್ಲಿ ತೋರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮದಲ್ಲದ ತಪ್ಪಿಗೆ ಜೈಲು: ಜಮೀನಿಗೆ ಬರುವ ಕಾಡುಪ್ರಾಣಿಗಳನ್ನು ತಡೆಯಲು ರೈತರು ಸೌರವಿದ್ಯುತ್ ಬೇಲಿಯ ಮೊರೆ ಹೋಗಿದ್ದಾರೆ. ಇನ್ನು ಕೆಲವರು ನೇರವಾಗಿ ವಿದ್ಯುತ್ ಸಂಪರ್ಕವನ್ನು ಬೇಲಿಗೆ ಕೊಟ್ಟಿದ್ದಾರೆ. ಈ ಬೇಲಿಗೆ ಸಿಲುಕಿ ಈಗಾಗಲೇ ಎರಡು ಕಾಡಾನೆಗಳು ಜೀವ ತೆತ್ತಿವೆ. ಕಾಡಾನೆಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಮಾಡಿದ ಈ ತಂತ್ರವು, ಅವರನ್ನು ಜೈಲುಪಾಲು ಮಾಡಿದೆ. ಅವರ ಕುಟುಂಬಗಳು ಕಣ್ಣೀರಿನಲ್ಲಿವೆ.

‘ರೈತರು ಉದ್ದೇಶಪೂರ್ವಕವಾಗಿ ಮಾಡದ ಕೆಲ ತಪ್ಪುಗಳಿಂದಾಗಿ ವನ್ಯಜೀವಿಗಳು ಸತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಭುತ್ವ ರೈತರ ಬಗ್ಗೆ ಕರುಣೆ ತೋರಿಸಬೇಕು. ಅದುಬಿಟ್ಟು ಬೇಕಾಬಿಟ್ಟಿ ಪ್ರಕರಣ ಜಡಿದು ಜೈಲಿಗೆ ಹಾಕಿದರೆ ಹೇಗೆ? ವನ್ಯಜೀವಿಗಳ ಹಾವಳಿಯನ್ನು ಅರಣ್ಯ ಇಲಾಖೆಯವರು ತಡೆದಿದ್ದರೆ, ಜೈಲಿಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಇಲ್ಲದಿದ್ದರೆ, ನಮ್ಮ ಜಮೀನುಗಳನ್ನು ಅರಣ್ಯ ಇಲಾಖೆಯವರೇ ಭೋಗ್ಯಕ್ಕೆ ಪಡೆದು ವರ್ಷಕ್ಕೆ ಇಷ್ಟು ಎಂದು ನಮಗೆ ಹಣ ಪಾವತಿಸಲಿ. ಹಾಗಾದರೂ, ಬದುಕಿಕೊಳ್ಳುತ್ತೇವೆ’ ಎಂದು ರೈತ ತಿಮ್ಮೇಗೌಡ ಹೇಳಿದರು.

ಕಾಡಾನೆ ಹಾವಳಿ; ತಪ್ಪದ ಬೆಳೆಹಾನಿ

ವರದಿ – ಎಚ್.ಎಂ. ರಮೇಶ್

ಚನ್ನಪಟ್ಟಣ: ಬೊಂಬೆನಗರಿ ಖ್ಯಾತಿಯ ಚನ್ನಪಟ್ಟಣ ತಾಲ್ಲೂಕಿನ ಹೆಸರು ಇದೀಗ ವನ್ಯಜೀವಿಗಳ ಹಾವಳಿ ವಿಷಯದಲ್ಲೂ ಕೇಳಿ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಕಾಡಾನೆಗಳ ದಾಳಿಯು ಇಲ್ಲಿನ ರೈತರನ್ನು ನಿದ್ದೆಗೆಡಿಸಿದೆ. ತುಂಬಿದ ಕೆರೆ–ಕಟ್ಟೆಗಳು ಹಾಗೂ ನೀರಾವರಿ ಜಮೀನು ಕಾಡಾನೆಗಳಿಗೆ ಒಂದು ರೀತಿಯಲ್ಲಿ ಸ್ವರ್ಗವಾಗಿದೆ.

ಚನ್ನಪಟ್ಟಣ ಹಾಗೂ ಸಾತನೂರು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರುವ ವಿರುಪಾಕ್ಷಿಪುರ ಹೋಬಳಿಯ ತೆಂಗಿನಕಲ್ಲು, ಕಬ್ಬಾಳು, ಬಿ.ವಿ. ಹಳ್ಳಿ, ಅರಳಾಳುಸಂದ್ರ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಅಡ್ಡವಾಗಿದೆ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ಕಾಡಾನೆಗಳ ಸಂಖ್ಯೆ ಶೇ 50ರಿಂದ 60ರಷ್ಟು ಹೆಚ್ಚಾಗಿದೆ. ಯಾವುದೇ ದಿನಪತ್ರಿಕೆಗಳನ್ನು ತಿರುವು ಹಾಕಿದರೆ ಕಾಡಾನೆಗೆ ಸಂಬಂಧಿಸಿದ ಸುದ್ದಿ ಕಾಯಂ ಆಗಿರುತ್ತದೆ.

ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಸಂತತಿ ಹೆಚ್ಚುತ್ತಲೇ ಇದೆ. ಇವು ತೆಂಗಿನಕಲ್ಲು, ಕಬ್ಬಾಳು, ಬಿ.ವಿ.ಹಳ್ಳಿ, ಅರಳಾಳುಸಂದ್ರ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಈ ಭಾಗದ ರೈತರ ಬೆಳೆಗಳ ಮೇಲೆ ಸತತ ದಾಳಿ ನಡೆಸುತ್ತಿವೆ. ಬಿ.ವಿ. ಪಾಳ್ಯ, ಭೂಹಳ್ಳಿ, ಸಿಂಗರಾಜಿಪುರ, ಬೈರಶೆಟ್ಟಿಹಳ್ಳಿ, ಶ್ಯಾನುಭೋಗನಹಳ್ಳಿ, ಕೋಡಂಬಳ್ಳಿ, ಮಾದೇಗೌಡನದೊಡ್ಡಿ, ವಿಠಲೇನಹಳ್ಳಿ, ದೊಡ್ಡನಹಳ್ಳಿ, ತಗಚಗೆರೆ, ತಿಮ್ಮಸಂದ್ರ, ಬ್ರಹ್ಮಣೀಪುರ ಸೇರಿದಂತೆ ಹಲವು ಗ್ರಾಮಗಳ ರೈತರ ಬೆಳೆಗಳನ್ನು ಧ್ವಂಸ ಮಾಡುತ್ತಿವೆ. ಆನೆಗಳ ಹಾವಳಿಗೆ ರೈತರು ತತ್ತರಿಸಿದ್ದಾರೆ.

ನೀರು, ಮೇವಿನ ಸ್ವರ್ಗ: ‘ತಾಲ್ಲೂಕಿನ ಹಲವಾರು ಕೆರೆಗಳು ಕಣ್ವ ಏತ ನೀರಾವರಿ ಯೋಜನೆಯಿಂದ ತುಂಬಿವೆ. ಬೇಸಿಗೆಯಲ್ಲಿ ಕಾಡಿನಲ್ಲಿ ಕುಡಿಯುವ ನೀರು ಸಿಗದ ಕಾರಣ, ಕಾಡಾನೆಗಳು ನೀರು ಅರಸಿಕೊಂಡು ಬರುತ್ತವೆ. ಕೆರೆಯಲ್ಲಿ ನೀರು ಕುಡಿದು ನಂತರ, ಅಲ್ಲಿಯೇ ವಿರಮಿಸಿ ತೆರಳುವಾಗ ಅಕ್ಕಪಕ್ಕದ ಬೆಳೆಗಳನ್ನೂ ನಾಶ ಮಾಡುತ್ತವೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

‘ಕಾಡಾನೆ ದಾಳಿ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ದಾಳಿ ತಡೆಯಲು ಇಲಾಖೆಯವರು ಮುಂದಾಗುವುದಿಲ್ಲ. ಅವರು ಬರುವಷ್ಟರಲ್ಲಿ ಬೆಳೆ ನಾಶವಾಗಿರುತ್ತದೆ. ಕಾಡಾನೆಗಳ ವಿಷಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾಗಿದೆ’ ಎಂದು ಬಿ.ವಿ. ಹಳ್ಳಿ ಗ್ರಾಮದ ರೈತರಾದ ಗಂಗಣ್ಣ ಮತ್ತು ದೊಡ್ಡಣ್ಣ ದೂರಿದರು.

ರೈತ ಆತ್ಮಹತ್ಯೆ: ತಾಲ್ಲೂಕಿನಲ್ಲಿ ಈವರೆಗೆ ಕಾಡಾನೆಗಳು ದಾಳಿಗೆ ಒಬ್ಬ ರೈತ ಮಹಿಳೆ ಸೇರಿದಂತೆ ಇಬ್ಬರು ರೈತರು ಹಾಗೂ ಮಾವಿನತೋಟದ ಕಾವಲುಗಾರ ಬಲಿಯಾಗಿದ್ದಾರೆ. ಜೊತೆಗೆ, ಕಾಡಾನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತ ಶಿವಣ್ಣ (65)ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಜುಲೈ ತಿಂಗಳಿನಲ್ಲಿ ಸುಳ್ಳೇರಿಯ ತೋಟ ಮತ್ತು ಮಂಗಾಡಹಳ್ಳಿ ಬಳಿಯ ಮುಳ್ಳಿಕೆರೆಯಲ್ಲಿ ಐದು ಕಾಡಾನೆಗಳು ಬೀಡುಬಿಟ್ಟಿದ್ದವು. ಅಕ್ಕೂರು ಕೆರೆ, ಕೂಡ್ಲೂರು ಕೆರೆ, ಕೋಡಂಬಹಳ್ಳಿ ಕೆರೆ, ಬಿ.ವಿ. ಪಾಳ್ಯ ಕೆರೆ, ಹೊಂಗನೂರು ಕೆರೆ, ಮೊಗಳ್ಳಿ ಕೆರೆ ಸೇರಿದಂತೆ, ತಾಲ್ಲೂಕಿನ ಗಡಿಭಾಗದ ಕಬ್ಬಾಳು ಗ್ರಾಮದಲ್ಲಿ 12ಕ್ಕೂ ಹೆಚ್ಚು ಕಾಡಾನೆಗಳು ಗುಂಪಾಗಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿವೆ.

ನಗರದ ಸನಿಹ ಪ್ರತ್ಯಕ್ಷ: ಕಾಡಾನೆಗಳು ಕಾಡಂಚಿನ ಗ್ರಾಮಗಳಲ್ಲಷ್ಟೇ ಅಲ್ಲದೆ, ನಗರದ ಕೂಗಳತೆ ದೂರಕ್ಕೂ ಬಂದು ಆತಂಕ ಸೃಷ್ಟಿಸಿದ್ದವು. ಚನ್ನಪಟ್ಟಣದಿಂದ ಅನತಿ ದೂರದಲ್ಲಿರುವ ಲಾಳಾಘಟ್ಟ ಗ್ರಾಮ, ಮಂಗಳವಾರಪೇಟೆ ಬಳಿಯ ಮರಳುಹೊಲ, ಅಪ್ಪಗೆರೆ ಬಳಿಯ ಕಟ್ಟೆಯೊಂದರಲ್ಲಿ ಕಾಣಿಸಿಕೊಂಡಿದ್ದವು. ಈ ಜಾಗದಲ್ಲಿ ಸುತ್ತಮುತ್ತ ಖಾಲಿ ನಿವೇಶನಗಳು, ಪೊದೆಗಳು, ತೋಟಗಳು ಇದ್ದ ಕಾರಣ ಬೇರೆಡೆಗೆ ಹೋಗಲು ಯಾವುದೇ ಮಾರ್ಗವಿಲ್ಲದೆ ಅಲ್ಲೇ ಬೀಡುಬಿಟ್ಟಿದ್ದವು. ಸಂಜೆ ಹೊತ್ತಿಗೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ತೆಂಗಿನಕಲ್ಲು ಅರಣ್ಯ ಪ್ರದೇಶದ ಕಡೆಗೆ ಓಡಿಸುವಲ್ಲಿ ಸಫಲವಾಗಿದ್ದರು.

ನಾಲ್ಕು ಆನೆ ಸೆರೆ: ತೀವ್ರ ಉಪಟಳ ನೀಡುತ್ತಿದ್ದ ನಾಲ್ಕು ಆನೆಗಳನ್ನು ಕಳೆದ ಎರಡು ವರ್ಷಗಳಲ್ಲಿ ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದರು. 2022ರ ಆಗಸ್ಟ್ ತಿಂಗಳಿನಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ತಾಲ್ಲೂಕಿಗೆ ಬಂದಿದ್ದ 5 ಸಾಕಾನೆಗಳ ತಂಡ ಸಲಗ ಹರ್ಷ ನೇತೃತ್ವದಲ್ಲಿ ಬಿ.ವಿ. ಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂದು ಪುಂಡಾನೆ ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿದಿತ್ತು.

2023ರ ಜೂನ್ ತಿಂಗಳಿನಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಕರೆತಂದಿದ್ದ ಅಭಿಮನ್ಯು ನೇತೃತ್ವದ 5 ಸಾಕಾನೆಗಳ ತಂಡವು, ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಒಂದು ಪುಂಡಾನೆ ಹಾಗೂ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿದು ಮರಳಿ ಕಾಡಿಗಟ್ಟಿದ್ದವು.

ಕಾಡಾನೆ ದಾಳಿಯಿಂದ ಸತತ ಬೆಳೆನಷ್ಟ ಅನುಭವಿಸಿ ಬೇಸತ್ತ ಕನಕಪುರ ತಾಲ್ಲೂಕಿನ ಕಾಡಂಚಿನ ರೈತರು ಭೂಮಿಯನ್ನು ಪಾಳು ಬಿಟ್ಟಿರುವುದು
ಚನ್ನಪಟ್ಟಣ ತಾಲ್ಲೂಕಿನ ಗಡಿಗ್ರಾಮ ಕಂಚನಹಳ್ಳಿ ಗ್ರಾಮದ ಕರೆಯೊಂದಲ್ಲಿ ನೀರಾಟದಲ್ಲಿ ತೊಡಗಿದ್ದ ಕಾಡಾನೆಗಳ ಹಿಂಡು
ಚನ್ನಪಟ್ಟಣ ತಾಲ್ಲೂಕಿನ ಅರಳಾಲುಸಂದ್ರ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಧ್ವಂಸವಾದ ಬಾಳೆತೋಟದಲ್ಲಿ ಮಹಿಳೆಯ ರೋದನ
ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಅಭಿಮನ್ಯು ನೇತೃತ್ವದಲ್ಲಿ ಸೆರೆ ಹಿಡಿದಿದ್ದ ಪುಂಡಾನೆ
ಕನಕಪುರ ತಾಲ್ಲೂಕಿನ ಅಳ್ಳಿಕೆರೆದೊಡ್ಡಿಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ಅವರ ಕುಟುಂಬದವರ ರೋದನ
ಕಾಡಿನಲ್ಲಿ ಮೇವು ನೀರಿದ್ದರೂ ಕೆಲ ಆನೆಗಳು ಜಮೀನುಗಳಿಗೆ ಬರುತ್ತಿವೆ. ಕಾಡಾನೆ ದಾಳಿಯಿಂದಾಗುವ ಬೆಳೆನಷ್ಟದ ಪರಿಹಾರವನ್ನು ಹೊಸ ಮಾರ್ಗಸೂಚಿ ಪ್ರಕಾರ ಕೊಡುತ್ತಿದ್ದೇವೆ
– ಎ.ಎಲ್‌.ದಾಳೇಶ್‌ ಆರ್‌ಎಫ್‌ಒ ಪ್ರಾದೇಶಿಕ ವಲಯ ಅರಣ್ಯ ಕನಕಪುರ
ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಬೇಕಾಗುವಷ್ಟು ನೀರು ಮತ್ತು ಮೇವಿನ ವ್ಯವಸ್ಥೆ ಮಾಡಿದರೆ ಅವು ನಾಡಿಗೆ ಬರುವುದು ತಗ್ಗುತ್ತದೆ. ಇದರಲ್ಲಿ ಅರಣ್ಯ ಇಲಾಖೆಯ ವೈಫಲ್ಯವೂ ಇದೆ. ಬೆಳೆನಷ್ಟ ಪರಿಹಾರ ಸಹ ಸರಿಯಾಗಿ ಸಿಗುತ್ತಿಲ್ಲ
– ಎಚ್‌.ಕೆ.ರವಿ ಜಿಲ್ಲಾ ದಿಶಾ ಕಮಿಟಿ ಸದಸ್ಯ ಕನಕಪುರ
‘ರೈಲ್ವೆ ಬ್ಯಾರಿಕೇಡ್ ಎಂಬ ಮುಗಿಯದ ಯೋಜನೆ’
ಕಾಡಾನೆಗಳು ಕಾಡು ಬಿಟ್ಟು ನಾಡು ಸೇರದಂತೆ ತಡೆಯಲು ರೂಪಿಸಿರುವ ಯೋಜನೆಗಳಲ್ಲಿ ರೈಲ್ವೆ ಬ್ಯಾರಿಕೇಡ್ ಪ್ರಮುಖವಾದುದು. ಆದರೆ ಈ ಯೋಜನೆಯೇ ಒಂದು ರೀತಿ ಬಿಳಿಯಾನೆ ಇದ್ದಂತೆ. ಒಂದು ಕಿ.ಮೀ. ಬ್ಯಾರಿಕೇಡ್ ನಿರ್ಮಾಣಕ್ಕೆ ಬರೋಬ್ಬರಿ ₹1.50 ಕೋಟಿ ವೆಚ್ಚವಾಗುತ್ತದೆ. ಆದರೂ ಇದನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ಜೀವಹಾನಿ ಮತ್ತು ಬೆಳೆಹಾನಿ ತಡೆಯುವ ಬದ್ಧತೆ ಸರ್ಕಾರಕ್ಕಿಲ್ಲ. ಕನಕಪುರ ತಾಲ್ಲೂಕಿನಲ್ಲಿ ಬನ್ನೇರುಘಟ್ಟ ವನ್ಯಜೀವಿ ಧಾಮ(ಕೋಡಿಹಳ್ಳಿ ಹಾರೋಹಳ್ಳಿ ಆನೇಕಲ್‌) ಕಾವೇರಿ ವನ್ಯಜೀವಿ ಧಾಮ (ಮುಗ್ಗೂರು ಸಂಗಮ ಹಲಗೂರು) ಸಾಮಾಜಿಕ ಅರಣ್ಯ ಮತ್ತು ಪ್ರಾದೇಶಿಕ ಅರಣ್ಯ ಬೆಸೆದುಕೊಂಡಿದೆ. ಸುಮಾರು 200ಕ್ಕೂ ಹೆಚ್ಚು ಕಿ.ಮೀ.‌ ಅರಣ್ಯ ಪ್ರದೇಶದ ಗಡಿ ಇದೆ. ಈ ಪೈಕಿ 50 ಕಿ.ಮೀ. ಮಾತ್ರ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲಾಗಿದೆ. ಉಳಿದೆಡೆ ನಿರ್ಮಾಣಕ್ಕೆ ಗ್ರಹಣ ಹಿಡಿದಿದೆ. ರೈತರ ಬೇಡಿಕೆಗಳೇನು? – ಕಾಡಾನೆಗಳು ನಾಡಿಗೆ ಬರುತ್ತಿರುವ ಅರಣ್ಯ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕೆಲಸವನ್ನು ಶೀಘ್ರ ಪೂರ್ಣಗೊಳಿಸಬೇಕು.– ಸೌರವಿದ್ಯುತ್ ಬೇಲಿ ಅಳವಡಿಕೆಯನ್ನು ಹೆಚ್ಚಿಸಬೇಕು.– ಕಾಡಾನೆಗಳ ಚಲನವಲನದ ಮೇಲೆ ಕಣ್ಣಿಡಬೇಕು. ಜೀವಹಾನಿ ಮತ್ತು ಬೆಳೆಹಾನಿಗೂ ಮುಂಚೆಯೇ ಅರಣ್ಯ ಇಲಾಖೆ ಕಾಡಾನೆಗಳನ್ನು ತಡೆಯೇಬೇಕು.– ಬೆಳೆಹಾನಿಗೆ ಮಾರುಕಟ್ಟೆ ದರ ಆಧರಿಸಿ ಪರಿಹಾರ ನೀಡಬೇಕು.– ಜೀವಹಾನಿಯಾದಾಗ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪರಿಹಾರ ಮೊತ್ತ ದುಪ್ಪಟ್ಟುಗೊಳಿಸಬೇಕು.
‘ಶೇ 25ರಷ್ಟು ಬ್ಯಾರಿಕೇಡ್ ನಿರ್ಮಾಣ’
‘ಕಾಡಿನಲ್ಲಿ ಆನೆಗಳ ಸಂತತಿಯು ಹೆಚ್ಚುತ್ತಿದ್ದು ಸದ್ಯ 250 ಆನೆಗಳಿವೆ. ಈ ಪೈಕಿ ಶೇ 10ರಷ್ಟು ಮಾತ್ರ ಹೊರಗಡೆ ಬಂದು ಉಪಟಳ ನೀಡುತ್ತಿವೆ. ಇವುಗಳನ್ನು ಮತ್ತೆ ಕಾಡಿಗಟ್ಟಿದರೂ ವಾಪಸ್‌ ಬಂದು ಜಮೀನಿಗೆ ದಾಳಿ ಮಾಡುತ್ತವೆ. ಸಿಕ್ಕಿದ್ದನ್ನು ತಿಂದು ಬೆಳೆ ಹಾನಿಗೊಳಿಸುತ್ತವೆ. ಅರಣ್ಯದುದ್ದಕ್ಕೂ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಮಾತ್ರ ಅವು ನಾಡಿಗೆ ಬಾರದಂತೆ ತಡೆಯಲು ಸಾಧ್ಯ. ತಾಲ್ಲೂಕಿನಲ್ಲಿ ಶೇ 25ರಷ್ಟು ಮಾತ್ರ ಬ್ಯಾರಿಕೇಡ್‌ ನಿರ್ಮಾಣವಾಗಿದ್ದು ಉಳಿದಿದ್ದು ಪೂರ್ಣಗೊಳ್ಳಬೇಕಿದೆ’. – ಡಿ. ದೇವರಾಜು ಆರ್‌ಎಫ್‌ಒ ಸಂಗಮ ವನ್ಯಜೀವಿ ವಲಯ ಅರಣ್ಯ ಕನಕಪುರ ‘ಗುಳೆ ಹೋಗುವ ಸ್ಥಿತಿ ನಿರ್ಮಾಣ’ ‘ಕಾಡಾನೆ ಹಂದಿ ಹಾಗೂ ಕಾಡೆಮ್ಮೆಗಳ ಹಾವಳಿಯಿಂದ ರೈತರು ಕೃಷಿ ಮಾಡುವುದೇ ಕಷ್ಟವಾಗಿದೆ. ಆನೆಗಳು ರೇಷ್ಮೆಸೊಪ್ಪು ಬಿಟ್ಟು ಬೇರೆಲ್ಲಾ ಬೆಳೆ ತಿನ್ನುತ್ತವೆ. ಜಿಂಕೆ ಮತ್ತು ಕಾಡೆಮ್ಮೆಗಳು ರೇಷ್ಮೆ ಸೊಪ್ಪು ಮತ್ತು ಸೀಮೆ ಹುಲ್ಲನ್ನು ತಿನ್ನುತ್ತವೆ. ಇದರಿಂದ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆನಷ್ಟಕ್ಕೆ ಪರಿಹಾರ ಕೊಡುತ್ತೇವೆ ಎನ್ನುವುದೇ ಪರಿಹಾರವಲ್ಲ. ಅದರ ಬದಲು ಶಾಶ್ವತವಾಗಿ ಕಾಡಾನೆ ಸೇರಿದಂತೆ ವನ್ಯಜೀವಿಗಳು ಊರಿನತ್ತ ಬಾರದಂತೆ ತಡೆಯಬೇಕಿದೆ. ವನ್ಯಜೀವಿಗಳ ಹಾವಳಿಯಿಂದ ಜನ ತಮ್ಮ ಜಮೀನು ಮತ್ತು ಮನೆ ಬಿಟ್ಟು ಗುಳೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ’. – ತಿಮ್ಮೇಗೌಡ ರೈತ ಜವನಮ್ಮನದೊಡ್ಡಿ ಕನಕಪುರ ತಾಲ್ಲೂಕು ‘ಮೂಲಜಾಗದಲ್ಲೇ ತಡೆಯಬೇಕು’ ‘ನಾಡಿಗೆ ಬರುವ ಕಾಡಾನೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಕನಿಷ್ಠ 50 ಆನೆಗಳನ್ನು ಕಾವೇರಿ ಅರಣ್ಯ ಪ್ರದೇಶ ಹಾಗೂ ಬನ್ನೇರಘಟ್ಟ ಅರಣ್ಯ ಪ್ರದೇಶಕ್ಕೆ ವಾಪಸ್ ಓಡಿಸಲಾಗುತ್ತಿದೆ. ಆ ಪೈಕಿ ಕೆಲವು ವಾಪಸ್ ಬರುತ್ತಲೇ ಇವೆ. ರೈಲ್ವೆ ಬ್ಯಾರಿಕೇಡ್ ಹಾಗೂ ಸೌರವಿದ್ಯುತ್ ಬೆಳಿ ಬೇಲಿ ಹಾಕಿದ್ದರೂ ಅವುಗಳನ್ನು ದಾಟಿಕೊಂಡು ಊರಿನತ್ತ ಮುಖ ಮಾಡುತ್ತಿವೆ. ಹಾಗಾಗಿ ಕಾಡಾನೆಗಳು ನಾಡಿಗೆ ಹೋಗದಂತೆ ಮೂಲ ಜಾಗದಲ್ಲಿಯೇ ತಡೆಯಬೇಕಿದೆ. ಅದುವೇ ಈ ಸಮಸ್ಯೆಗೆ ಶಾಶ್ವತ ಪರಿಹಾರ’ ಎನ್ನುತ್ತಾರೆ ಸಾತನೂರು ಅರಣ್ಯ ವಲಯದ ಆರ್‌ಎಫ್‌ಒ ಆಶಾ ರೆಡ್ಡಿ ಮತ್ತು ಡಿಆರ್‌ಎಫ್‌ಒ ಮುತ್ತು ನಾಯಕ್. ‘ಶಾಶ್ವತವಾಗಿ ಕಾಡಿಗಟ್ಟಬೇಕು’ ‘ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ 55ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಅರಣ್ಯ ಇಲಾಖೆಯು ನಾಲ್ಕೈದು ಆನೆಗಳನ್ನು ಮಾತ್ರ ಇತ್ತೀಚೆಗೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಆದರೆ ಉಳಿದವುಗಳಿಂದ ಪ್ರಾಣಹಾನಿಯ ಆತಂಕ ಇದ್ದೇ ಇದೆ. ಇನ್ನು ಬೆಳೆಹಾನಿಗೆ ಲೆಕ್ಕವೇ ಇಲ್ಲ. ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಎಲ್ಲಾ ಆನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸವಾಗಬೇಕು. ಆಗ ಮಾತ್ರ ರೈತರ ಬೆಳೆ ಹಾಗೂ ಪ್ರಾಣವನ್ನು ರಕ್ಷಿಸಲು ಸಾಧ್ಯ’. – ಸಿ. ಪುಟ್ಟಸ್ವಾಮಿ ಹಿರಿಯ ರೈತ ಮುಖಂಡ ಅರಳಾಳುಸಂದ್ರ
ಆನೆ ದಾಳಿ ಪ್ರಕರಣಗಳು
ಚನ್ನಪಟ್ಟಣ – 2021 ಜುಲೈ 27: ದೊಡ್ಡನಹಳ್ಳಿ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸತೀಶ (27) ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿದ್ದ ಕಾಡಾನೆ ಅವರನ್ನು ತುಳಿದು ಕೊಂದು ಹಾಕಿತ್ತು. – 2022 ಆ. 8: ಚನ್ನಿಗನ ಹೊಸಹಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಚನ್ನಮ್ಮ (55) ಅವರನ್ನು ಕಾಡಾನೆ ತುಳಿದು ಸಾಯಿಸಿತ್ತು. – 2023 ಜೂನ್ 3: ಕಾಡಾನೆ ದಾಳಿಗೆ ವಿರುಪಸಂದ್ರ ಗ್ರಾಮದಲ್ಲಿ ಮಾವಿನತೋಟದ ಕಾವಲುಗಾರ ವೀರಭದ್ರಯ್ಯ (52) ಬಲಿ ಕನಕಪುರ 2022 ನ. 7: ಸುಂಡಘಟ್ಟ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದಾಗ ಕಾಡಾನೆ ದಾಳಿಯಿಂದ ಅರಣ್ಯ ರಕ್ಷಕ ಸುಂಡುಗಟ್ಟ ಗ್ರಾಮದ ಹೊಳಸಾಲಯ್ಯ ಸಾವು. 2023 ಮೇ 30: ಹೊಸಕಬ್ಬಾಳು ಗ್ರಾಮದಲ್ಲಿ ರಾತ್ರಿ ಮಾವಿನ ತೋಟದ ಕಾವಲು ಕಾಯುತ್ತಿದ್ದ ಅದೇ ಗ್ರಾಮದ ರೈತ ಕಾಳಯ್ಯ ಅವರನ್ನು ತುಳಿದು ಸಾಯಿಸಿದ್ದ ಕಾಡಾನೆ. 2023 ಜೂನ್ 19: ಅಚ್ಚಲು ಗ್ರಾಮದಲ್ಲಿ ಬೆಳಗ್ಗೆ ಜಮೀನಿಗೆ ಹೊರಟಿದ್ದ ಅಕ್ಕ-ತಂಗಿಯ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು ಅಕ್ಕ ಜಯಮ್ಮ(50) ಮೃತಪಟ್ಟಿದ್ದಾರೆ. ತಂಗಿ ವೆಂಕಟ ಲಕ್ಷ್ಮಮ್ಮ ಗಂಭೀರವಾಗಿ ಗಾಯಗೊಂಡಿದ್ದರು. 2023 ಸೆ. 6: ಕೊಳಗೊಂಡನಹಳ್ಳಿ ಸಮೀಪದ ಕಾಡಿನಲ್ಲಿ ನಡೆದುಕೊಂಡು ಬರುತ್ತಿದ್ದ ಗಟ್ಟಿಗುಂದ ಗ್ರಾಮದ ಕೂಲಿ ಕಾರ್ಮಿಕ  ಚಿಕ್ಕರಾಮಯ್ಯ (60) ಆನೆ ದಾಳಿಯಿಂದ ಮೃತಪಟ್ಟಿದ್ದರು. 2023 ನ. 4: ಹೊನಗಳ್ಳಿ ಅರಣ್ಯ ಪ್ರದೇಶದ ಬಳಿ ಕುರಿ ಮೇಯಿಸುತ್ತಿದ್ದ ಹೊನಗಳ್ಳಿ ಗ್ರಾಮದ ಮರಿಗೌಡ (79) ರೈತ ಕಾಡಾನೆ ದಾಳಿಗೆ ಸಾವು. 2023 ಡಿ. 17: ಅಳ್ಳಿಕೆರೆದೊಡ್ಡಿಯಲ್ಲಿ ನಸುಕಿನಲ್ಲಿ ತಮ್ಮ ಮನೆಯಿಂದ ಅನತಿ ದೂರದಲ್ಲಿರುವ ರೇಷ್ಮೆ ಮನೆಗೆ ಹೋಗಿದ್ದ ರೈತ ತಿಮ್ಮಪ್ಪ(60) ಕಾಡಾನೆಗೆ ಬಲಿಯಾಗಿದ್ದರು. 2023 ಡಿ. 27: ಬನ್ನಿಮುಕ್ಕೊಡ್ಲು ಗ್ರಾಮದಲ್ಲಿ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ರಾಮಕೃಷ್ಣ (52) ಎಂಬುವರ ಮೇಲೆ ದಾಳಿ ನಡೆಸಿ ಕೊಂದ ಕಾಡಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.