ಹಾರೋಹಳ್ಳಿ (ಕನಕಪುರ): ‘ಪುರುಷರಿಗೆ ಸರಿ ಸಮಾನರಾಗಿ ಮಹಿಳೆಯರು ಆರ್ಥಿಕವಾಗಿ ಪ್ರಗತಿ ಹೊಂದಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎಸ್.ಶಿವರಾಮ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಾರೋಹಳ್ಳಿ ಕೆನರಾ ಬ್ಯಾಂಕ್ ಗ್ರಾಮೀಣ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ, ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ನಡೆದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ಸಾಮರ್ಥ್ಯ ಬಲವರ್ಧನೆ ಹಾಗೂ ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರ ಅಭಿವೃದ್ಧಿಗೆ ಒತ್ತು ಕೊಟ್ಟಿರುವ ಸರ್ಕಾರ ಗ್ರಾಮೀಣ ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವ ಸಹಾಯ ಗುಂಪುಗಳ ಮೂಲಕ ಒಗ್ಗೂಡುವುದು, ಅದರಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವುದು, ಸಂಘದ ಮೂಲಕ ಉಳಿತಾಯ ಮಾಡುವುದು, ಸಮಾಜದ ಏಳ್ಗೆಗೆ ಶ್ರಮಿಸುವುದು, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.
ತರಬೇತಿ ಸಂಸ್ಥೆಯ ನಿರ್ದೇಶಕಿ ಸುಮಾಎನ್.ಗಾಂವಕರ್ ಮಾತನಾಡಿ, ‘ನಮ್ಮ ಸಂಸ್ಥೆಯು ಗ್ರಾಮೀಣ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಉದ್ಯಮಶೀಲತಾ ತರಬೇತಿ, ವಿವಿಧ ಉದ್ಯಮಗಳನ್ನು ಮಾಡಲು ಪ್ರೋತ್ಸಾಹ, ಬ್ಯಾಂಕಿನ ಹಣಕಾಸಿನ ಸಹಕಾರ, ನೀವು ತಯಾರು ಮಾಡುವ ವಸ್ತುಗಳು, ಪದಾರ್ಥಗಳಿಗೆ ಮಾರುಕಟ್ಟೆ ಮೊದಲಾದ ಅನುಕೂಲಗಳು ನಮ್ಮ ಸಂಸ್ಥೆಯಿಂದ ದೊರೆಯುತ್ತವೆ. ಈ ಅವಕಾಶವನ್ನು ನೀವು ಪಡೆದುಕೊಂಡು ನಿಮ್ಮ ಸುತ್ತಮುತ್ತಲಿನ ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ತಾಲ್ಲೂಕು ಸಂಯೋಜಕರಾದ ಕುಮಾರ್, ಆಂಜನಪ್ಪ, ಸಂಸ್ಥೆಯ ಉಪನ್ಯಾಸಕರಾದ ದೇವಿಂದ್ರಪ್ಪ, ಗವಿರಾಜು, ನೇತ್ರಾವತಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.