ಮಾಗಡಿ: ‘ಯೋಗಾಸನ ಮಾಡುವುದರಿಂದ ನಮ್ಮ ದೇಹದ ಅಂಗಾಂಗಗಳು ಹಗುರವಾಗಿ ದೇಹ ಸದೃಢಗೊಳ್ಳುತ್ತದೆ. ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು’ ಎಂದು ಸುಣ್ಣಕಲ್ಲು ಬೀದಿಯ ಯೋಗ ಗುರು ಮುನಿಕೃಷ್ಣ ತಿಳಿಸಿದರು.
ವಿಶ್ವ ಯೋಗ ದಿನಾಚರಣೆಗೂ ಮುನ್ನಾ ದಿನ ಯೋಗ ಪ್ರದರ್ಶನ ನಡೆಸಿ ಅವರು ಮಾತನಾಡಿದರು.
‘ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರಯುತ ವಿದ್ಯೆ ನೀಡಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಯೋಗಾಭ್ಯಾಸ, ಕರಾಟೆ, ಕುಸ್ತಿ ಕಲೆ ಸೇರಿದಂತೆ ಇತರೆ ದೈಹಿಕ ಚಟುವಟಿಕೆಗಳನ್ನು ಕಲಿಸಿಕೊಟ್ಟು ಆರೋಗ್ಯ ಸಂಪನ್ನರಾಗಿಸಬೇಕು. ಅನುಭವಿ ಗುರುಗಳಿಂದ ಯೋಗಾಸನ ಕಲಿತು ನಿತ್ಯ ಯೋಗಾಸನ ಮಾಡುವುದರಿಂದ ದೇಹ, ಮನಸ್ಸನ್ನು ಸದೃಢವಾಗಿಟ್ಟುಕೊಳ್ಳಬಹುದು’ ಎಂದರು.
ಯೋಗದಿಂದ ರೋಗ ನಿಯಂತ್ರಿಸಬಹುದು. ಕೆಲವು ರೋಗಗಳನ್ನು ತಡೆಗಟ್ಟುವ ಶಕ್ತಿ ಯೋಗಕ್ಕಿದೆ. ನನ್ನ ಬಳಿ ಯೋಗಾಸನ ಕಲಿಯುತ್ತಿರುವ ಬಾಲಕ ಎಂ. ಅಭಿಷೇಕ್ಗೆ ಉತ್ತಮ ಯೋಗಪಟುವಾಗುವ ಎಲ್ಲಾ ಲಕ್ಷಣಗಳಿವೆ. ಶಿಸ್ತುಬದ್ಧ ಜೀವನಕ್ಕೆ ಯೋಗಾಭ್ಯಾಸ ರಹದಾರಿ ಇದ್ದಂತೆ. ಯೋಗ ಕಲಿತರೆ ನಿರೋಗಿಗಳಾಗಬಹುದು’ ಎಂದು ಹೇಳಿದರು.
ಯೋಗಾಸನ ಕೇವಲ ಪ್ರದರ್ಶನ ಕಲೆ ಅಲ್ಲ. ಅಂತರಂಗ ಮತ್ತು ಬಹಿರಂಗ ಎರಡನ್ನು ಸಮತೋಲನದಿಂದ ಕಾಯ್ದುಕೊಳ್ಳುವ ಮೂಲಕ ಬದುಕನ್ನು ಹಸನು ಮಾಡಲಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಅನುಭವಿಗಳ ಮಾತಿನಂತೆ ಎಲ್ಲಾ ಮಕ್ಕಳಿಗೂ ಬಾಲ್ಯದಲ್ಲಿಯೇ ಯೋಗಾಸನ ಕಲಿಸುವುದರಿಂದ ಕೊರೊನಾ ಸೋಂಕಿನಂತಹ ಮಾರಣಾಂತಿಕ ರೋಗಗಳಿಂದ ದೂರ ಉಳಿಯಬಹುದು ಎಂದು ಹೇಳಿದರು.
‘ಯೋಗಾಸನ ಕಲಿಯಲು ಆಸಕ್ತಿ ಉಳ್ಳವರು ಸ್ವಯಂಪ್ರೇರಿತರಾಗಿ ಯೋಗ ಗುರು ಮುನಿಕೃಷ್ಣ ಅವರ ಮಾರ್ಗದರ್ಶನ ಪಡೆದು ತರಬೇತಿ ಪಡೆಯಲು ಮುಂದಾಗಬಹುದು’ ಎಂದು ಅಭಿಷೇಕ್ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.