ಶಿಕಾರಿಪುರ: ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ಹಾಗೂ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ಒದಗಿಸುವ ತಾಲ್ಲೂಕಿನ ಅಂಜನಾಪುರ ಜಲಾಶಯ ಬಹುತೇಕ ಬರಿದಾಗಿದೆ.
ಜಲಾಶಯದ ನೀರು ಸಂಗ್ರಹ ಮಟ್ಟ 1.8 ಟಿಎಂಸಿ ಅಡಿ ಇದ್ದು, ಈಗ 0.03ಟಿಎಂಸಿ ಅಡಿ ಡೆಡ್ಸ್ಟೋರೇಜ್ ನೀರು ಮಾತ್ರ ಉಳಿದಿದೆ. ಈ ನೀರನ್ನು ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣದ ನಾಗರಿಕರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ವಾರಕ್ಕೆರಡು ಬಾರಿಯಂತೆ ಸುಮಾರು 45 ದಿನ ಜಲಾಶಯದಲ್ಲಿರುವ ಡೆಡ್ಸ್ಟೊರೇಜ್ ನೀರನ್ನು ಪಟ್ಟಣಗಳ ನಾಗರಿಕರಿಗೆ ಸರಬರಾಜು ಮಾಡಬಹುದಾಗಿದೆ ಎಂಬುದು ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜ್ಕುಮಾರ್ ಲೆಕ್ಕಾಚಾರವಾಗಿದೆ.
ಕೃಷಿ ಚಟುವಟಿಕೆ ನಡೆಸಲು ಕೊಳವೆಬಾವಿ ಕೊರೆಸುವುದು ಅನಿವಾರ್ಯವಾಗಿದೆ. ಇದರಿಂದ ದಿನೇದಿನೆ ಅಂತರ್ಜಲಮಟ್ಟ ಕೂಡ ಸಂಪೂರ್ಣವಾಗಿ ಕುಸಿಯುತ್ತಿದೆ.
ಕೆಲವು ವರ್ಷಗಳ ಹಿಂದೆ ಕೊಳವೆಬಾವಿಗಳಲ್ಲಿ ಕೇವಲ 120–200 ಅಡಿ ಆಳ ಕೊರೆದರೆ ನೀರು ದೊರೆಯುತ್ತಿತ್ತು. ಈಗ 800–1,000 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಅಡಿಕೆ, ತೆಂಗು ಬೆಳೆಗೆ ಬೇರೆ ಸ್ಥಳಗಳಿಂದ ಟ್ಯಾಂಕರ್ ಮೂಲಕ ನೀರು ತೆಗೆದುಕೊಂಡು ಬರುತ್ತಿದ್ದಾರೆ.
ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರು ಕುಡಿಯುವ ನೀರಿಗಾಗಿಯೂ ಕೊಳವೆಬಾವಿ ಅವಲಂಬಿಸಿದ್ದಾರೆ. ಅಧಿಕಾರಿಗಳು ಕೂಡ ಗ್ರಾಮದ ಜನರ ಅಪೇಕ್ಷೆಯಂತೆ ಕೊಳವೆಬಾವಿಗಳನ್ನು ಕೊರೆಸಿದ್ದಾರೆ.
ಪ್ರಸ್ತುತ ತಾಲ್ಲೂಕಿನಲ್ಲಿ ಬರ ಆವರಿಸಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ವರ್ಷವಾದರೂ ಉತ್ತಮ ಮಳೆಯಾಗಿ, ಸಂಕಷ್ಟ ದೂರವಾಗಲಿ ಎಂಬ ನಿರೀಕ್ಷೆಯಲ್ಲಿ ರೈತ ಸಮುದಾಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.