ADVERTISEMENT

`ಅನಿಷ್ಟ ಪದ್ಧತಿ ಜತೆ ಸಮಾಜ ರಾಜಿ'

ಪ್ರೊ .ಬಿ. ಕೃಷ್ಣಪ್ಪನವರ 75ನೇ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 10:20 IST
Last Updated 15 ಜುಲೈ 2013, 10:20 IST


ಭದ್ರಾವತಿ: `ಪ್ರಸಕ್ತ ದಿನಗಳಲ್ಲಿ ಸಮಾಜ ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತುವ ಬದಲು ರಾಜಿ ಮಾಡಿಕೊಂಡಿದೆ' ಎಂದು ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಚಂದ್ರಶೇಖರಯ್ಯ ವಿಷಾದಿಸಿದರು.

ಇಲ್ಲಿನ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ದಲಿತ ನೌಕರರ ಒಕ್ಕೂಟ ಏರ್ಪಡಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 75ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಸಮಾಜವಾದಿ ನೆಲೆಗಟ್ಟಿನಲ್ಲಿ ಬೆಳೆದ ಕೃಷ್ಣಪ್ಪ ಅವರು ಜಾತಿವಾದ ವಿರುದ್ಧ ಹೋರಾಟ ಮಾಡುತ್ತಾ ಬಂದವರು. ರಾಜ್ಯದಲ್ಲಿ ಬದಲಾದ ಸನ್ನಿವೇಶಗಳ ಸಂದರ್ಭದಲ್ಲಿ ದಲಿತ ಸಂಘಟನೆ ಕಡೆಗೆ ಒತ್ತು ನೀಡಿ ಅದರ ಬೆಳವಣಿಗೆಗೆ ಕಾರಣರಾದರು ಎಂದರು.

ಜನಪರ ಸಾಹಿತ್ಯ ಇಲ್ಲದ ಸಂದರ್ಭದಲ್ಲಿ ಅವರು ದಲಿತ ಸಂಘಟನೆ ಕಟ್ಟಿ ಸಮಾಜದಲ್ಲಿನ ಮೌಢ್ಯಗಳ ವಿರುದ್ಧ ಹೋರಾಡಿದರು ಎಂದರು.
ಸಮಾಜದ ಅಭಿವೃದ್ಧಿಯಲ್ಲಿ ವೈಜ್ಞಾನಿಕ ಮನೋಭಾವ ಇರಬೇಕು. ಕೇವಲ ಮೌಢ್ಯತೆ ಆಧಾರದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಅರಿವು ನೀಡಿದ ಅವರು ಇಂದು ನಮ್ಮಂದಿಗಿಲ್ಲ. ಆದರೆ, ಅವರ ವಿಚಾರಗಳು ನಮ್ಮ ಮುಂದಿವೆ ಅದನ್ನು ಅರಿತು ಸಂಘಟನೆ ಬೆಳೆಸಿ ಎಂದು ಸಲಹೆ ನೀಡಿದರು.

ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ ಕೃಷ್ಣಪ್ಪನವರ ಹೋರಾಟದ ಬದುಕು ಎಲ್ಲರಿಗೂ ಮಾರ್ಗದರ್ಶನೀಯ. ಅವರ ನೆನಪಿನ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರಕ್ಕೆ  ್ಙ 50,000 ದೇಣಿಗೆ ನೀಡುವುದಾಗಿ ಘೋಷಿಸಿದರು.

ಇದೇ ಸಂದರ್ಭದಲ್ಲಿ ನೌಕರರ ಒಕ್ಕೂಟ ನೀಡಿದ ಹಲವು ಬೇಡಿಕೆಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಕೃಷ್ಣಪ್ಪ ಕಂಚಿನ ಪುತ್ಥಳಿಯನ್ನು ನಗರದ ಕೃಷ್ಣಪ್ಪ ವೃತ್ತದಲ್ಲಿ ಸ್ಥಾಪಿಸಲು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಕೆ.ಬಿ.ಜುಂಜಾನಾಯ್ಕ ವಹಿಸಿದ್ದರು. ಕೃಷ್ಣಪ್ಪ ಪ್ರಶಸ್ತಿ ಪ್ರಧಾನವನ್ನು ರಾಜ್ಯ ದಸಂಸ ಸಂಚಾಲಕ ಸತ್ಯ ವಿತರಿಸಿದರು. ಪ್ರತಿಭಾನ್ವಿತರ ಪುರಸ್ಕಾರವನ್ನು ಚಿನ್ನಯ್ಯ ನೆರವೇರಿಸಿದರು.

ತಹಶೀಲ್ದಾರ್ ಸಿದ್ದಮಲ್ಲಪ್ಪ, ಕುವೆಂಪು ವಿವಿ ಕುಲಸಚಿವ ಪ್ರೊ.ಭೋಜ್ಯಾನಾಯ್ಕ, ನಗರಸಭಾ ಸದಸ್ಯ ಮಣಿ, ತಾ.ಪಂ ಅಧಿಕಾರಿ ಎಂ. ಮಲ್ಲೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರ ಟಿ.ಎನ್.ಸೋಮಶೇಖರಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ, ಚೌಡಪ್ಪ, ಶಿವಪ್ಪ, ಎಂ.ಎಸ್.ಬಸವರಾಜ್ ಉಪಸ್ಥಿತರಿದ್ದರು. ಹಂಸ, ಲೋಲಾಕ್ಷಿ ಪ್ರಾರ್ಥಿಸಿದರು, ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸಿ. ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುಟ್ಟರಾಜು ಸ್ವಾಗತಿಸಿದರು, ಎ.ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.