ADVERTISEMENT

ಕುದುರೆಕಳು ತೂಗುಸೇತುವೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 8:35 IST
Last Updated 2 ಅಕ್ಟೋಬರ್ 2012, 8:35 IST

ಐದು ದಶಕಗಳ ಶರಾವತಿ ಸಂತ್ರಸ್ತರ ಕನಸು ನನಸು: ಬಿ.ವೈ. ರಾಘವೇಂದ್ರ ಹೇಳಿಕೆ
ಹೊಸನಗರ
: ಐದು ದಶಕಗಳ ಶರಾವತಿ ಹಿನ್ನೀರಿನ ಸಂತ್ರಸ್ತರ ಕನಸಾದ ತೂಗು ಸೇತುವೆ ಈಗ ನನಸಾಗಿದೆ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ನುಡಿದರು.

ಭಾನುವಾರ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶರಾವತಿ ಹಿನ್ನೀರಿನ ಹೆಬ್ಬಿಗೆ ಸಂಪರ್ಕದ ಕುದುರೆ ಕಳು ಹೊಳಗೆ ್ಙ 124 ಲಕ್ಷ ವೆಚ್ಚದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾದ ತೂಗುಸೇತುವೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತಮ್ಮ ಆಡಳಿತಾವಧಿಯಲ್ಲಿ ತುಮರಿ ಸೇತುವೆ ಸೇರಿದಂತೆ ಶರಾವತಿ ಹಿನ್ನೀರಿನ ಬವಣೆ ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ತಮ್ಮ ಮನವಿ ಮೇರೆಗೆ ಕುದುರೆ ಕಳು ಹಾಗೂ ಬೇಳೂರು ತೂಗುಸೇತುವೆಯನ್ನು ಮಂಜೂರು ಮಾಡಿದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಹಾಗೂ 100ನೇ ತೂಗು ಸೇತುವೆ ನಿರ್ಮಿಸಿದ ಆಯಶಿಲ್ಪ ಸಂಸ್ಥೆಯ ಗಿರೀಶ್ ಭಾರಧ್ವಾಜ್ ಅವರನ್ನು ಅಭಿನಂದಿಸಿದರು.

ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಜಿ.ಪಂ. ಉಪಾಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ, ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಶಾಂತಾ ಶೇಖರಪ್ಪ, ಸದಸ್ಯೆ ಮಲ್ಲಿಕಾ ಸುರೇಂದ್ರ, ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷ ಕೆ.ಜಿ. ಧರ್ಮಪ್ಪ, ಸದಸ್ಯರಾದ ಸುಬ್ರಹ್ಮಣ್ಯ ಆಚಾರ್, ಶರಾವತಿ ವಾಸುದೇವ ಹಾಜರಿದ್ದರು.
ಗ್ರಾ.ಪಂ. ಸದಸ್ಯ ಶಿವರಾಮಶೆಟ್ಟಿ ಸ್ವಾಗತಿಸಿದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

ಕುಡಿಯುವ ನೀರಿನ ಯೋಜನೆಗೆ ಚಾಲನೆ: ಇದೇ ಸಂದರ್ಭದಲ್ಲಿ ಸುಮಾರು ್ಙ 25 ಲಕ್ಷ ವೆಚ್ಚದ ನಾಗೋಡಿ ಗ್ರಾಮದ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಸಂಸತ್ ಸದಸ್ಯರು ಉದ್ಘಾಟಿಸಿದರು.

ಮೆಸ್ಕಾಂ ಕಚೇರಿಗೆ ಮುತ್ತಿಗೆ

ನಾಲ್ಕು ವಿದ್ಯುತ್ ಯೋಜನೆ ಇರುವ ಹೊಸನಗರ ತಾಲ್ಲೂಕಿಗೆ ಎಕ್ಸ್‌ಪ್ರೆಸ್ ವಿದ್ಯುತ್‌ಲೈನ್ ನಿರ್ಮಿಸುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಹಾಲಗದ್ದೆ ಉಮೇಶ್ ನೇತೃತ್ವದಲ್ಲಿ ಸೋಮವಾರ ಮೆಸ್ಕಾಂ ಕಚೇರಿ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.


ಶರಾವತಿ, ವಾರಾಹಿ, ಚಕ್ರಾ ಹಾಗೂ ಸಾವೆಹಕ್ಕಲು ವಿದ್ಯುತ್ ಯೋಜನೆ ಸಂತ್ರಸ್ತರಿಂದ ಕೂಡಿದ್ದು ರಾಜ್ಯಕ್ಕೆ ಶೇ 30ರಷ್ಟು ವಿದ್ಯುತ್ ನೀಡುತ್ತಿರುವ ಹೊಸನಗರ ತಾಲ್ಲೂಕಿಗೆ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದರು.

ಸಾಗರದಿಂದ ಹೊಸನಗರ ಹಾದು ಹೋಗಿರುವ ವಿದ್ಯುತ್ ಮಾರ್ಗವು 60 ವರ್ಷ ಹಳೆಯದಾಗಿದೆ. ಗಾಳಿ, ಮಳೆಗೆ ಮರ ಬಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುವ ಸಂದರ್ಭ ಹೆಚ್ಚಾಗಿದೆ ಎಂದು ದೂರಿದರು.
ಅತ್ಯಂತ ಹಳೆಯದಾದ ಈ ವಿದ್ಯುತ್ ಮಾರ್ಗದಲ್ಲಿ ಪ್ರಸ್ತುತ ಇರುವ ಕಂಬಗಳನ್ನು ತೆರವು ಮಾಡಿ ಎಕ್ಸ್‌ಪ್ರೆಸ್ ಟವರ್‌ಗಳನ್ನು ಅಳವಡಿಸಿ ತಾಲ್ಲೂಕಿಗೆ ಸಮರ್ಪಕ ಹಾಗೂ ನಿರಂತರ ವಿದ್ಯುತ್ ನೀಡುವಂತೆ ಅವರು ಒತ್ತಾಯಿಸಿದರು.

ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ, ಯುವ ಕಾಂಗ್ರೆಸ್ ಕಾರ್ಯದರ್ಶಿ ಗುಬ್ಬಿಗಾ ಸುನಿಲ್, ಮುಖಂಡರಾದ ಮಂಡಾನಿ ಗುರುಮೂರ್ತಿ, ಯಡೂರು ರತ್ನಾಕರಗೌಡ, ಎಂ.ಪಿ. ಸುರೇಶ್, ಡಿ.ಎಂ. ರತ್ನಾಕರಶೆಟ್ಟಿ, ಎಚ್.ಆರ್. ಪ್ರಭಾಕರ್, ಜಯನಗರ ಮಣಿ ಹಾಜರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT