ADVERTISEMENT

ಕೆರೆಹಳ್ಳಿ ಗ್ರಾಮ ಅನ್ನದಾತರ ತವರು...

ಟಿ.ರಾಮಚಂದ್ರ ರಾವ್
Published 1 ನವೆಂಬರ್ 2012, 11:45 IST
Last Updated 1 ನವೆಂಬರ್ 2012, 11:45 IST

ಪ್ರತಿಯೊಂದು ಗ್ರಾಮವೂ ತನ್ನದೇ ಆದ ವಿಶೇಷತೆಯಲ್ಲಿ ಬೆಳಕಿಗೆ ಬರುತ್ತದೆ. ಹಾಗೇಯೆ ರಿಪ್ಪನ್‌ಪೇಟೆಗೆ ಹೊಂದಿಕೊಂಡಿರುವ ಈ ಕೆರೆಹಳ್ಳಿ ಎಂಬ ಪುಟ್ಟ ಗ್ರಾಮ ಹೋಬಳಿ ಕೇಂದ್ರವೂ ಹೌದು.

ಮೊದಲು ಕೃಷಿ ಚಟುವಟಿಕೆಗೆ ಆದ್ಯತೆ ನೀಡುತ್ತಾ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಭತ್ತದ ಕೃಷಿಗೆ ಪೂರಕವಾದ ಬೇಸಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರೈತ ವರ್ಗಕ್ಕೆ ಆಸರೆಯಾಗಿದ್ದ ಗ್ರಾಮವೇ ಈ ಕೆರೆಹಳ್ಳಿ.

ಮೇಲಿನ ಹಾಗೂ ಕೆಳಗಿನ ಕೆರೆಹಳ್ಳಿ ಎಂದು ಎರಡು ಗ್ರಾಮಗಳಿದ್ದು, ಸುಮಾರು 150 ಕುಟುಂಬಗಳಿಂದ 800 ಜನಸಂಖ್ಯೆ ಹೊಂದಿದೆ.

ಇಂದಿನ ಯುವ ಜನಾಂಗ ಕೃಷಿಯೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಸ್ಥಳೀಯ ಯುವಕರು ಶುಂಠಿ ಬೆಳೆಯನ್ನು ಮುಖ್ಯ  ಕಸುಬಾಗಿಸಿಕೊಂಡು ದೂರದ ಶಿಕಾರಿಪುರ, ಶಿರಾಳಕೊಪ್ಪ, ಭೂಮಿಯನ್ನು ಗೇಣಿ ಹಿಡಿದು ಶುಂಠಿ ಬೆಳೆಯುವುದೂ ಅಲ್ಲದೇ, ಶುಂಠಿ ಸಂಸ್ಕರಣೆಯನ್ನೂ ಮಾಡಿ ವ್ಯಾಪಾರ ಮಾಡುವುದರಲ್ಲಿಯೂ ಯಶಸ್ವಿಯಾಗಿರುತ್ತಾರೆ.

ಕೂಲಿ ಕಾರ್ಮಿಕರ ನೆಲೆವೀಡಾಗಿದ್ದ ಈ ಗ್ರಾಮ ಅದೃಷ್ಟದ ವಾಣಿಜ್ಯ ಬೆಳೆಯಾದ ಶುಂಠಿಯನ್ನು ಬೆಳೆಯಲು ಪ್ರಾರಂಭಿಸಿದ ನಂತರ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗಿದ್ದಾರೆ. ಶುಂಠಿಬೆಳೆ ಕೆಲವರಿಗೆ ಬೆಲ್ಲವನ್ನು ಕೊಟ್ಟರೂ, ಇನ್ನೂ ಕೆಲವರಿಗೆ ಬೇವನ್ನೂ ಕೊಟ್ಟಿದೆ. ಒಟ್ಟಿನಲ್ಲಿ ಈ ಬದಲಾವಣೆಗಳು ರೈತರ ಜೀವನ ಕ್ರಮಗಳನ್ನು ಉನ್ನತೀಕರಣಗೊಳಿಸಿದೆ. ಇಲ್ಲಿನ ಜನ ಶುಂಠಿ ಮಾರುಕಟ್ಟೆಯನ್ನು ತಮ್ಮ ಹಿಡಿತದಲ್ಲಿ ಇಂದಿಗೂ ಇಟ್ಟುಕೊಂಡಿದ್ದಾರೆ.

ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯಿಂದ ಕೇವಲ 3 ಕಿ.ಮೀ. ಅಂತರದ ಕೆರೆಹಳ್ಳಿ ಹೋಬಳಿ ಗ್ರಾಮವಾದ ಈ ಊರಿಗೆ ಯಾವುದೇ ಬಸ್ ಸೌಕರ್ಯ ಇಲ್ಲ. ಜನ ಪ್ರತಿನಿಧಿಗಳು ಸಹ ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಮಾಜಿ ಶಾಸಕ ಎಚ್. ಹಾಲಪ್ಪ ಅವರ ಅವಧಿಯಲ್ಲಿ 2 ಕಿ.ಮೀ. ರಸ್ತೆ ಟಾರು ಕಂಡಿದ್ದು ಬಿಟ್ಟರೆ ಯಾವುದೇ ಸರ್ಕಾರಿ ಸೌಲಭ್ಯ ಈ ಗ್ರಾಮಕ್ಕೆ ದೊರೆತಿಲ್ಲ.

ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಗೆ ಒಳಪಟ್ಟಿರುವ ಈ ಗ್ರಾಮವು 5 ಪಂಚಾಯ್ತಿ ಸದಸ್ಯರನ್ನು ಹೊಂದಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ್ಙ 2 ಲಕ್ಷ, 13ನೇ ಹಣಕಾಸಿನ ಯೋಜನೆ ಅಡಿ 84 ಸಾವಿರದ ಬಾಕ್ಸ್ ಚರಂಡಿ ಕಾಮಗಾರಿಯನ್ನು ನಡೆಸಿದ್ದಾರೆ. ಉಳಿದಂತೆ ಗ್ರಾಮದ ಕೇರಿ ರಸ್ತೆಗಳಾಗಲಿ ಯಾವುದೂ ಸಮರ್ಪಕವಾಗಿಲ್ಲ.

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ತತ್ವವನ್ನ ಅಳವಡಿಸಿಕೊಂಡಿರುವ ಈ ಗ್ರಾಮದಲ್ಲಿ ಬುನಾದಿಯಿಂದ ಇರುವ ಒಂದು ಬ್ರಾಹ್ಮಣರ ಮನೆ ಹೊರತು ಪಡಿಸಿದರೆ ಉಳಿದಂತೆ ಎಲ್ಲರೂ ಛತ್ರಪತಿ ಮರಾಠ ಜನಾಂಗದ ಅವರನ್ನು ಈ ಭಾಗದ ಜನರು ಇಂದಿಗೂ ಆರೇರು ಎಂದು ಕರೆಯುವುದು ವಾಡಿಕೆಯಾಗಿದೆ. 

ಇತಿಹಾಸ: 11ನೇ ಶತಮಾನದಲ್ಲಿ ಚಾಲುಕ್ಯ ಚಕ್ರವರ್ತಿ ತ್ರಿಭುವನ ಮಲ್ಲ ಕಾಳಾಮುಖ ಎಂಬ ಕದಂಬ ದೊರೆ ಇಲ್ಲಿ ಆಡಳಿತ ನಡೆಸಿದ ಕುರುಹುಗಳಿವೆ. ಆ ಸಮಯದಲ್ಲಿ ಈ ಗ್ರಾಮವನ್ನು ಶೃಂಗೇರಿ ಪೀಠದ ಗುರುಗಳಿಗೆ ದತ್ತು ನೀಡಿದ ಬಗ್ಗೆ ಇಲ್ಲಿ ಕಾಣಸಿಗುವ ಶಿಲಾಶಾಸನದಲ್ಲಿ ಉಲ್ಲೇಖಗಳಿವೆ.

ಸುಮಾರು 1200 ವರ್ಷಗಳ ಈಶ್ವರ ದೇವಸ್ಥಾನ ಈ ಊರಿನ ಪ್ರಧಾನ ಗ್ರಾಮ ದೇವರು. ಈಗ ರಾಮೇಶ್ವರ ಎಂದು ಕರೆಯಲಾಗುತ್ತಿದೆ. ಪುರಾತನ ಇತಿಹಾಸವಿರುವ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಊರವರು ಸಿದ್ಧತೆ ನಡೆಸಿದ್ದಾರೆ. ಕೆಳಗಿನ ಕೆರೆಹಳ್ಳಿಯಲ್ಲಿ  ಗ್ರಾಮಸ್ಥರ ಕುಲ ದೇವರಾದ ದೇವಿ ಅಂಬಾ ಭವಾನಿ ದೇವಸ್ಥಾನ ಹಾಗೂಚೌಡಮ್ಮ ಭೂತರಾಯ ಗುಡಿಗಳಿವೆ. ಈ ಜನಾಂಗದ ಕುಲದೇವರು ಅಂಬಾಭವಾನಿ ಆದರೂ ಕೇದಾರಲಿಂಗ, ಶಂಭು ಲಿಂಗ, ಇತ್ಯಾದಿ ದೇವರ ಆರಾಧಕರಾಗಿದ್ದಾರೆ.

ಶಿಕ್ಷಣ -ಮೂಲ ಸೌಲಭ್ಯ: ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಹಾಗೂ 1ರಿಂದ 5ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಬರಬೇಕು. 6 ಸರ್ಕಾರಿ ಬಾವಿಗಳಿವೆ. ಜಿಲ್ಲಾ ಪಂಚಾಯ್ತಿ ವತಿಯಿಂದ 4 ಮಿನಿ ಕುಡಿಯುವ ನೀರಿನ ತೊಟ್ಟಿ ಕಟ್ಟಿಸಿದ್ದರೂ ಸಹ ಒಂದೂ ಸಮರ್ಪಕವಾಗಿಲ್ಲ. ಪಶು ಸಂಪತ್ತು ಯಥೇಚ್ಛವಾಗಿ ಇದ್ದರೂ, ಬೆಸಗೆಯಲ್ಲಿ ಇವುಗಳಿಗೆ ಮೇವೂ ಇಲ್ಲ..! ನೀರೂ ಇಲ್ಲ..!!  ಸಕಾಲದಲ್ಲಿ ಮಳೆ ಬಂದರೆ ಮಾತ್ರ ಬೆಳೆ ತೆಗೆಯಬಹುದು ದೇವಸ್ಥಾನದ ಸಮೀಪವಿರುವ ಕೆರೆಯ ನೀರು ಬೆಳೆ ಹಾಗೂ ಜಾನುವಾರುಗಳಿಗೆ ಆಸರೆಯಾಗಿವೆ.

ಶ್ಯಾನುಭೋಗರ ಮನೆ: ಏಕ ಮೇವ ಬ್ರಾಹ್ಮಣ ಕುಟುಂಬದ ಕೆರೆಹಳ್ಳಿ ಶ್ಯಾನುಭೋಗ ನಾಗೇಶ್‌ರಾವ್ ಅವರು 30 ಹಳ್ಳಿಗಳ ಶ್ಯಾನುಭೋಗತನ ಮಾಡುತ್ತಿದ್ದರು. ಅವರ ಮನೆ ಹಿತ್ತಲಿನಲ್ಲಿ ಬ್ರಹ್ಮನ ಕಲ್ಲು, ನಾಗಬನ, ಚೌಡಿ ಬಾವಿಗಳಿದ್ದು, ದೀಪಾವಳಿ ಸಮಯದಲ್ಲಿ ಹಿಂದೆ ಅದ್ದೂರಿ ಪೂಜೆ ನಡೆಯುತ್ತಿತ್ತು. ಈಗ ಸಾಂಕೇತಿಕವಾಗಿ ಪೂಜೆ ನಡೆಯುತ್ತಿದೆ.

ಅವರ ಕೊನೆಯ ಪುತ್ರಿ ಪಾರ್ವತಿ ಈ ಮನೆಯಲ್ಲಿ ವಾಸವಾಗಿದ್ದಾರೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನೂ ಪಡೆಯದಿದ್ದರೂ ಸ್ವಾವಲಂಬಿಯಾಗಿ ಜೀವನ ನಿರ್ವಹಿಸುತ್ತಿರುವುದು ವಿಶೇಷ. ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಿಲ್ಲ. 

 ಗ್ರಾಮದಲ್ಲಿ 25ಕ್ಕೂ ಹೆಚ್ಚು ಯುವಕ ಹಾಗೂ ಯುವತಿಯರ ಸ್ವ ಸಹಾಯ, ಸ್ತ್ರೀ ಶಕ್ತಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.

50ರ ದಶಕದಲ್ಲಿ: ಮೇಲಿನ ಕೆರೆಹಳ್ಳಿಯ ಬೋಕ್ರೆ ಕೇತಾರ್ಜಿರಾವ್, ಸುಬ್ಬೋಜಿರಾವ್, ಕೆಂಜೋಜಿರಾವ್ ಹನುಮೋಜಿರಾವ್, ಪಚ್ಚೆ ರಾಮೋಜಿರಾವ್, ಶಿರ್ಶಿ ರಾಮೋಜಿರಾವ್, ಶಾಂತೋಜಿರಾವ್ ಪುಣ್ಯೋಜಿರಾವ್ ಹಾಗೂ ಕೆಳಗಿನ ಕೆರೆಹಳ್ಳಿಯ ನೂರೋಜಿರಾವ್, ಮಲ್ಲೋಜಿರಾವ್, ಸೂರೋಜಿರಾವ್, ಚಂದ್ರೋಜಿರಾವ್, ನೇರ‌್ಲೆ ಮಂಜೋಜಿರಾವ್, ಬೇಬೋಜಿರಾವ್, ಕೇತಾರ್ಜಿ ರಾವ್ ಮನೆತನಗಳು  ಹುಲಿ ಶಿಕಾರಿಗೆ ಹೆಸರುವಾಸಿಯಾಗಿದ್ದರು.

ರಾಜಕೀಯ: ನೇರ‌್ಲೆರ ಮನೆತನದ ಕೆ.ಎಂ. ಲಿಂಗೋಜಿರಾವ್  ತಾಲ್ಲೂಕ್‌ಬೋರ್ಡ್ ಸದಸ್ಯರಾಗಿ, ಪುಣ್ಯೋಜಿರಾವ್ ಮನೆತನದ ಮಂಜೋಜಿರಾವ್, ರಾಮೋಜಿರಾವ್, ಗ್ರಾಮ ಪಂಚಾಯ್ತಿ ಸದಸ್ಯರಾಗಿ ಉಪಾಧ್ಯಕ್ಷರಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಎ. ಗಣಪತಿರಾವ್ ಹಾಗೂ ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಡಿ.ಕೆ. ನಾರಾಯಣ ರಾವ್ ಮತ್ತು ಸದಸ್ಯರಾಗಿದ್ದ ಆರ್.ಎನ್. ಮಂಜುನಾಥ, ಡಿ. ನರಸಿಂಹ ರಾವ್, ಹಾಲಿ ಸದಸ್ಯ ಎನ್. ಚಂದ್ರೇಶ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯೆ ನಾಗರತ್ನಾ ದೇವರಾಜ್, ಈ ಜನಾಂಗದವರಾಗಿದ್ದು, ರಾಜಕೀಯವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು.

ಬತ್ತದ ಬೆಳೆಯನ್ನೆ ನೆಚ್ಚಿಕೊಂಡು ಆರ್ಥಿಕವಾಗಿ ದುರ್ಬಲರಾಗಿದ್ದ ಜನರು ಇದೀಗ ವಾಣಿಜ್ಯ ಬೆಳೆ ಶುಂಠಿ ಬೆಳೆಯತ್ತ ಮುಖ ಮಾಡಿದ ನಂತರ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಾಢ್ಯರಾಗಿದ್ದಾರೆ. ಇವರ ಜೀವನ ಕ್ರಮಗಳು ಬದಲಾಗಿವೆ ಎನ್ನುತ್ತಾರೆ ಗ್ರಾಮದ ಜೀವವಿಮಾ ಪ್ರತಿನಿಧಿ ಅರುಣ ಕಾಳಾಮುಖಿ.

ಕಾಡುನಾಶವಾಗಿ ಮಳೆ ಕಡಿಮೆಯಾಗಿದೆ. ಸಕಾಲದಲ್ಲಿ ಮಳೆಯಿಲ್ಲದೆ ಬೆಳೆಗಳಲ್ಲಿ ಇಳುವರಿ ಕುಂಠಿತಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಗ್ರಾಮದ ಹಿರಿಯ ರೈತ ತುಳ್ಳೂಜೀರಾವ್ ಮೂಲ ಸಮಸ್ಯೆಗಳ ಮಹಾಪೂರವೇ ಇದ್ದರೂ ಚುನಾವಣೆ ಸಮಯದಲ್ಲಿ ಮತ ಯಾಚನೆಗೆ ಬಂದು ಕೈ ಕಾಲು ಹಿಡಿದು ಗೆದ್ದ ನಂತರ ಜನ ಪ್ರತಿನಿಧಿಗಳು ಇತ್ತಕಡೆ ತಲೆಯೇ ಹಾಕಿಲ್ಲ ...! ಸಮಸ್ಯೆಗಳು ಪರಿಹಾರವೂ ಆಗಿಲ್ಲ ಎನ್ನುತ್ತಾರೆ ಗ್ರಾಮದ ಮಹಿಳೆ ಭವಾನಿಯಮ್ಮ.

ಗ್ರಾಮಕ್ಕೆ ಸೌಲಭ್ಯ ತರುವ ಉತ್ಸಾಹವಿದೆ ಆರ್ಥಿಕ ಸಹಕಾರ ದೊರೆತರೆ ಅಭಿವೃದ್ಧಿ ಆದ್ಯತೆ ನೀಡುತ್ತೇನೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಎನ್. ಚಂದ್ರೇಶ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.