ADVERTISEMENT

`ಗ್ರಂಥಾಲಯ ಪುಸ್ತಕಗಳ ಸಂಗ್ರಹ ಅಲ್ಲ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:06 IST
Last Updated 5 ಡಿಸೆಂಬರ್ 2012, 6:06 IST

ಶಿವಮೊಗ್ಗ: ಗ್ರಂಥಾಲಯ ಎಂದರೆ ಕೇವಲ ಒಂದಷ್ಟು ಪುಸ್ತಕಗಳನ್ನು ಕಲೆ ಹಾಕುವುದಲ್ಲ; ಗ್ರಂಥಾಲಯವನ್ನು ವ್ಯವಸ್ಥಿತಗೊಳಿಸಿ, ಪುಸ್ತಕಗಳ ಮೂಲಕ ಜ್ಞಾನ ಒದಗಿಸುವುದಾಗಿದೆ ಎಂದು ವಕೀಲ ಬಸಪ್ಪಗೌಡ ಹೇಳಿದರು.

ನಗರದ ವಕೀಲರ ಭವನದಲ್ಲಿ ಮಂಗಳವಾರ ಶಿವಮೊಗ್ಗ ಬಾರ್ ಅಸೋಸಿಯೇಶನ್ ಹಾಗೂ ಲಾಯರ್ಸ್‌ ಲಾ ಬುಕ್  ಪಬ್ಲಿಕೇಶನ್ ಹಮ್ಮಿಕೊಂಡಿದ್ದ `ವಕೀಲರ ಗ್ರಂಥಾಲಯ' ಉದ್ಘಾಟನೆ ಮತ್ತು ವಕೀಲ ಎಂ.ಆರ್. ಸತ್ಯನಾರಾಯಣ ರಚಿಸಿರುವ `ಎ ಟ್ರೀಟಿಸ್ ಆನ್ ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ 1964' ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಕೀಲರು ಎಲ್ಲ ಜ್ಞಾನವನ್ನು ತಿಳಿದುಕೊಳ್ಳಬೇಕು ಎಂದೇನು ಇಲ್ಲ; ಅದು ಸಾಧುವೂ ಅಲ್ಲ. ಆದರೆ, ಜ್ಞಾನದ ಆಕರ ಯಾವುದು ಮತ್ತು ಎಲ್ಲಿ ಲಭ್ಯವಿದೆ ಎಂದು ತಿಳಿದಿರಬೇಕು. ಈ ನಿಟ್ಟಿನಲ್ಲಿ ಗ್ರಂಥಾಲಯವನ್ನು ವ್ಯವಸ್ಥೆಗೊಳಿಸಬೇಕು ಎಂದರು.

ಇಂದು ವಕೀಲರು ಅಂತರರಾಷ್ಟ್ರೀಯಮಟ್ಟದಲ್ಲಿ ಕಾನೂನು ಸಾಹಿತ್ಯವನ್ನು ಅಧ್ಯಯನ ಮಾಡಬೇಕಿದ್ದು, ಇದನ್ನು ತಲುಪಿಸುವ ವ್ಯವಸ್ಥೆ ಗ್ರಂಥಾಲಯದ ಮೂಲಕ ಆಗಬೇಕು ಎಂದು ಸಲಹೆ ಮಾಡಿದರು.

ಎಂ.ಆರ್. ಸತ್ಯನಾರಾಯಣ ಅವರು ಪುಸ್ತಕದಲ್ಲಿ ಭೂ ಒಡೆತನದ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಸ್ತೃತ ಮಾಹಿತಿ ಒದಗಿಸಿದ್ದು, ಕಾನೂನುಗಳ ಬಗೆಗಿನ ಅವ್ಯಕ್ತ ಸಂಬಂಧವನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದಾರೆ ಎಂದರು.

ಲೇಖಕ ಎಂ.ಆರ್. ಸತ್ಯನಾರಾಯಣ ಮಾತನಾಡಿ, ಕಾನೂನಿನ ಎಲ್ಲ ವಿಚಾರಗಳನ್ನು ಪುಸ್ತಕದಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ತನ್ನ ಅನುಭವಗಳನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದೇನೆ. ಮುಂದೆ ಪುಸ್ತಕಗಳ ಮಂಥನದಿಂದ ಜ್ಞಾನ ವೃದ್ಧಿಯಾಗಲಿ ಎಂದರು.

ಅಸೋಸಿಯೇಶನ್ ಸದಸ್ಯ ಹನುಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಾಯರ್ಸ್‌ ಲಾ ಬುಕ್ ಪಬ್ಲಿಕೇಶನ್ ಮಾಲೀಕ ಜಿ.ವಿ. ಮೂರ್ತಿ, ವಕೀಲರಾದ ಎ. ಗೋಪಿಕೃಷ್ಣ, ಎನ್. ಮಂಜುಳಾದೇವಿ ಉಪಸ್ಥಿತರಿದ್ದರು. ಲೋಕೇಶ್ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.