ADVERTISEMENT

ಜೋಳ ಬಿತ್ತನೆಯಲ್ಲಿ ನಿರತರಾದ ರೈತರು

ಶಿಕಾರಿಪುರ: ತಾಲ್ಲೂಕಿನಲ್ಲಿ ಚುರುಕುಗೊಂಡ ಮುಂಗಾರು ಮಳೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 10:33 IST
Last Updated 1 ಜೂನ್ 2018, 10:33 IST
ಮುಂಗಾರು ಮಳೆ ಚುರುಕುಗೊಂಡ ಹಿನ್ನಲೆ ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮ ಸಮೀಪವಿರುವ ಕೃಷಿ ಭೂಮಿಯಲ್ಲಿ ಗುರುವಾರ ರೈತನೊಬ್ಬ ಮೆಕ್ಕೆಜೋಳ ಬಿತ್ತನೆ ಮಾಡಲು ಭೂಮಿಯನ್ನು ಸಜ್ಜುಗೊಳಿಸುತ್ತಿದ್ದ ದೃಶ್ಯ.
ಮುಂಗಾರು ಮಳೆ ಚುರುಕುಗೊಂಡ ಹಿನ್ನಲೆ ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮ ಸಮೀಪವಿರುವ ಕೃಷಿ ಭೂಮಿಯಲ್ಲಿ ಗುರುವಾರ ರೈತನೊಬ್ಬ ಮೆಕ್ಕೆಜೋಳ ಬಿತ್ತನೆ ಮಾಡಲು ಭೂಮಿಯನ್ನು ಸಜ್ಜುಗೊಳಿಸುತ್ತಿದ್ದ ದೃಶ್ಯ.   

ಶಿಕಾರಿಪುರ: ಮುಂಗಾರು   ಚುರುಕು ಗೊಂಡ ಕಾರಣ ತಾಲ್ಲೂಕಿನ ಬಹುತೇಕ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾದರು. ಎರಡು ದಿನಗಳಿಂದ ಮೆಕ್ಕೆಜೋಳ ಬಿತ್ತನೆ ಮಾಡಲು ಪೂರಕವಾದ ಮಳೆಯಾಗಿದೆ.

ಗ್ರಾಮೀಣ ಭಾಗ ಹಾಗೂ ಪಟ್ಟಣದ ರೈತರು, ಕೂಲಿಗಾರರು ಹಾಗೂ ಕೃಷಿ ಪರಿಕರಗಳೊಂದಿಗೆ ಎತ್ತಿನ ಬಂಡಿಯಲ್ಲಿ ಸಾಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತರು. ಕೆಲವು ರೈತರು ಮೆಕ್ಕೆಜೋಳ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ 48.50 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಇದ್ದು, ಈ ಭೂಮಿಯಲ್ಲಿ  25 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ಹಾಗೂ 22 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಜತೆ, ಉಳಿದ ಭೂಮಿಯಲ್ಲಿ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಕೆಲವು ವರ್ಷಗಳಿಂದ 2 ಸಾವಿರ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ  ಶುಂಠಿ ಬೆಳೆಯುತ್ತಿದ್ದಾರೆ. ಕಳೆದ ಬಾರಿ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ದೊರೆಯದೇ ರೈತರು ನಷ್ಟ ಅನುಭವಿಸಿದ್ದರೂ ಈ ಬಾರಿ  ನಿರೀಕ್ಷೆಯಲ್ಲಿಯೇ ಬಿತ್ತನೆಗೆ ಮುಂದಾಗಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಮೇ 30ರವರೆಗೆ 144 ಮೀ ಮೀ ವಾಡಿಕೆ ಮಳೆ ಆಗಬೇಕು. ಆದರೆ ಈ ಬಾರಿ 176ಮೀ ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ 23ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಆದರೆ ಉಡುಗಣಿ ಹೋಬಳಿಯಲ್ಲಿ ಮಾತ್ರ ಶೇ 11ರಷ್ಟು ಮಳೆ ಪ್ರಮಾಣ ಕಡಿಮೆ ಆಗಿದೆ.

ಬಿತ್ತನೆ ಬೀಜ, ರಸಗೊಬ್ಬರ ಸೇರಿ ಇತರೆ ಕೃಷಿ ಪರಿಕರಗಳನ್ನು ವಿತರಿಸುವ ಕಾರ್ಯವನ್ನು ಸಮರ್ಪಕವಾಗಿ ಕೃಷಿ ಇಲಾಖೆ ಮಾಡುತ್ತಿದೆ. ರೈತರಿಗೆ ಉತ್ತಮ ಗುಣ ಮಟ್ಟದ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ವಿತರಿಸುವಂತೆ ಇಲಾಖೆಯಿಂದ ಖಾಸಗಿ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ರೈ ಅನಧಿಕೃತ ಮಾರಾಟಗಾರರಿಂದ  ಮೆಕ್ಕೆಜೋಳ ಬಿತ್ತನೆ ಬೀಜ ಖರೀದಿಸಬಾರದು. ಅಧಿಕೃತ ಮಾರಾಟಗಾರರಿಂದ ಉತ್ತಮ ಬಿತ್ತನೆ ಬೀಜ ಕೊಂಡುಕೊಳ್ಳಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎನ್. ಪ್ರಭಾಕರ್ ಪ್ರಜಾವಾಣಿಗೆ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿದು ತಾಲ್ಲೂಕಿನ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಒದಗಿಸುವ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಗಳು ಭರ್ತಿಯಾಗಲಿ ಎಂಬ ನಿರೀಕ್ಷೆ ಕೂಡ ಅಚ್ಚುಕಟ್ಟು ರೈತರದ್ದಾಗಿದೆ.

ಎಚ್‌.ಎಸ್. ರಘು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.