ADVERTISEMENT

ಪಡಿತರ ಚೀಟಿಗೆ ನಾಗರಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 10:25 IST
Last Updated 6 ಜುಲೈ 2012, 10:25 IST

ಭದ್ರಾವತಿ: ಪಡಿತರ ಚೀಟಿ ವಿತರಣೆ ಅವ್ಯವಸ್ಥೆ ಸರಿ ಮಾಡುವಂತೆ ಆಗ್ರಹಿಸಿ ನೂರಾರು ನಾಗರಿಕರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.

ಬೆಳಿಗ್ಗೆ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ ನಾಗರಿಕರು ಪಡಿತರ ವಿತರಣೆಯಲ್ಲಿನ ಲೋಪದೋಷ ಹಾಗೂ ಗೊಂದಲಗಳ ಸರಿಪಡಿಸುವಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.

ಈ ಹಂತದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಯೋಗೇಶ್ವರ್, ಸಾರ್ವಜನಿಕರ ಅಹವಾಲು ಆಲಿಸಿ, ಒಂದಿಷ್ಟು ಸಮಜಾಯಿಷಿ ನೀಡುವ ಯತ್ನಕ್ಕೆ ಮುಂದಾದರು. ಇದಲ್ಲದೇ ತಾತ್ಕಾಲಿಕ ವಿತರಣೆಗಾರರಿಗೂ ಕಾಯಂ ಚೀಟಿ ವಿತರಿಸುವ ಕ್ರಮ ಜರುಗಿಸಲಾಗಿದೆ ಎಂದು ಉತ್ತರಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಚೀಟಿ ವಿತರಣೆ ಕುರಿತಂತೆ ಸಾಕಷ್ಟು ಗೊಂದಲವಿದೆ. ಅದನ್ನು ನಿವಾರಣೆ ಮಾಡುವ ಜತೆಗೆ, ಎಲ್ಲಾ ನಾಗರಿಕರಿಗೂ ಸೌಲಭ್ಯ ನೀಡುವ ಕಡೆ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಡಿತರ ಚೀಟಿ ಕುರಿತಾದ ಹಲವು ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತಾಯಿಸುವ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.