ಶಿರಾಳಕೊಪ್ಪ: ಬಿರುಗಾಳಿಯ ನರ್ತನಕ್ಕೆ ಶಿರಾಳಕೊಪ್ಪ ಭಾಗದ ಜನರು ಕಂಗಾಲಾಗಿದ್ದರೆ. ಬುಧವಾರ ಸುರಿದ ಮಳೆಗಿಂತ ಗಾಳಿಯ ಅಬ್ಬರವೇ ಹೆಚ್ಚಾಗಿತ್ತು.
ಶಿರಾಳಕೊಪ್ಪ, ತೊಗರ್ಸಿ ಭಾಗದ ಬಹುತೇಕ ಗ್ರಾಮಗಳಲ್ಲಿ ಮನೆಯ ಹಂಚುಗಳು, ತಗಡುಗಳು, ದನದ ಕೊಟ್ಟಿಗೆಗಳು ಹಾರಿಹೋಗಿವೆ. ತಡಗಣಿ ಗೇಟ್ ಒಂದರಲ್ಲಿಯೇ ಸುಮಾರು 15ಕ್ಕೂ ಹೆಚ್ಚು ಮನೆಗಳು ಹಾಗೂ ಅಂಗಡಿಗಳ ತಗಡುಗಳು ಹಾರಿ ಹೋಗಿವೆ.
ಮಳೂರು ಭಾಗದ ಕೆಲವು ಕಡೆಗಳಲ್ಲಿ ಜೋಳದ ಬೆಳೆ ನೆಲಕ್ಕೆ ಬಿದ್ದಿದ್ದು ಹಾನಿ ಸಂಭವಿಸಿದೆ. ಬಿರುಗಾಳಿಯ ರಭಸಕ್ಕೆ ಎಲ್ಲೆಂದರಲ್ಲಿ ಮರಗಳು, ಸುಮಾರು 12 ವಿದ್ಯುತ್ ಕಂಬಗಳು ಉರುಳಿದ್ದು, ಸಿಡಿಲಿನ ಹೊಡೆತಕ್ಕೆ ಬಳ್ಳಿಗಾವಿ, ಕೋಡಿಕೊಪ್ಪದ 2 ವಿದ್ಯುತ್ ಪರಿವರ್ತಕ ಸುಟ್ಟಿವೆ. ಹಾಗಾಗಿ, ಗುರುವಾರ ಶಿರಾಳಕೊಪ್ಪ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಶಿರಾಳಕೊಪ್ಪ ಬಂಕ್ ಒಂದರಲ್ಲಿ ನೀರು ತುಂಬಿಕೊಂಡು, ವಾಹನಗಳು ಮುಂದಕ್ಕೆ ಸಾಗದೆ ನಾಗರಿಕರು ಪರದಾಡಿದರು. ತೊಗರ್ಸಿ, ಕಣಸೋಗಿ ಭಾಗದ ಕಾಡುಗಳಲ್ಲಿ ಸುಮಾರು 80ಕ್ಕೂ ಹೆಚ್ಚು ತೇಗ, ಅಕೇಶಿ, ಮಾವು ಸೇರಿದಂತೆ ವಿವಿಧ ಬಗೆಯ ಮರಗಳು ಧರೆಗೆ ಉರುಳಿವೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದರು.
ವಿವಿಧೆಡೆ ಹಾನಿ
ಸೊರಬ: ತಾಲೂಕಿನಲ್ಲಿ ಬುಧವಾರ ಸುರಿದ ಭಾರೀ ಗಾಳಿ, ಮಳೆಗೆ ವಿವಿಧ ಗ್ರಾಮಗಳು ತತ್ತರಿಸಿದ್ದು, ಜನಜೀವನ ಸುಧಾರಿಸಲು ಕೆಲವು ದಿನಗಳೇ ಬೇಕಾಗಬಹುದು.
ಮಳೆಯಿಂದಾಗಿ ಜಂಬೇಹಳ್ಳಿ ಗ್ರಾಮದ ಜೆ.ವಿ. ಕುಮಾರಗೌಡ ಅವರ ಕೊಟ್ಟಿಗೆಯ ಮೇಲೆ ಹಲಸಿನ ಮರಬಿದ್ದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಮೂರು ವರ್ಷದ ಕೋಣವೊಂದು ಸಾವನ್ನಪ್ಪಿದೆ.
ಉಳವಿ ಹೋಬಳಿಯ ಕಾನಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಹನುಮಂತಪ್ಪ ಅವರ ಮನೆಯ ಮೇಲೆ ನಂದಿಮರ ಬಿದ್ದು, ಮನೆ ಜಖಂಗೊಂಡಿದೆ. ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಮಳೆಯಿಂದಾದ ಹಾನಿಯ ಬಗ್ಗೆ ಇನ್ನೂ ವರದಿಗಳು ಬರುತ್ತಿದ್ದು, ಜಡೆ ಹೋಬಳಿಯ ಜಡೆಯಲ್ಲಿ 2 ಮನೆ, ಬಂಕಸಾಣದಲ್ಲಿ 2 ಎಕರೆ ಅಡಿಕೆ, 6 ಎಕರೆ ಬಾಳೆತೋಟ, ಶಕುನವಳ್ಳಿಯಲ್ಲಿ ಎರಡು ಎಕರೆ ಅಡಿಕೆ, ಬಾಳೆತೋಟ, ಹೊಸಬಾಳೆ, ನಿಸರಾಣಿಯಲ್ಲಿ ತಲಾ ಒಂದು ಮನೆ, ಓಟೂರಿನಲ್ಲಿ 2 ಎಕರೆ, ಹಳೇಸೊರಬದಲ್ಲಿ 6 ಎಕರೆ ಬಾಳೆ, ಕಾತುವಳ್ಳಿ, ಕೋಡಿಕೊಪ್ಪ- ಬೆನ್ನೂರಿನಲ್ಲಿ ತಲಾ ಎರಡು ಮನೆ, ಬೆನ್ನೂರಿನಲ್ಲಿ ಒಂದು ದೊಡ್ಡಿಮನೆ ಹಾನಿಗೊಳಗಾದ ಬಗ್ಗೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.