ADVERTISEMENT

ತೀರ್ಥಹಳ್ಳಿ |'ತೆರಿಗೆ ಹಣದಲ್ಲಿ ಬಯಲು ರಂಗಮಂದಿರ ಅನಾವಶ್ಯಕ'

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 5:56 IST
Last Updated 13 ಫೆಬ್ರುವರಿ 2026, 5:56 IST
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ರತ್ನಾಕರ ಎನ್‌ ಶೆಟ್ಟಿ ಆಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ರತ್ನಾಕರ ಎನ್‌ ಶೆಟ್ಟಿ ಆಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.   

ತೀರ್ಥಹಳ್ಳಿ : ಸಂಸ್ಕೃತಿ ಮಂದಿರದ ಆವರಣದಲ್ಲಿನ ಉದ್ದೇಶಿತ ಬಯಲು ರಂಗಮಂದಿರ ಅನಾವಶ್ಯಕ. ಉದ್ಯಮ ನಿಧಿಯಿಂದ ₹80 ಲಕ್ಷ ಖರ್ಚು ಮಾಡುವ ಬದಲು ಫುಡ್‌ ಕೋರ್ಟ್‌ ತೆರಯಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಆರ್.ರಾಘವೇಂದ್ರ ಶೆಟ್ಟಿ,ಯಪ್ರಕಾಶ್‌ ಶೆಟ್ಟಿ ಒತ್ತಾಯಿಸಿದರು.

ಗುರುವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಹಿಂದಿನ ಅಧ್ಯಕ್ಷರು ಸರ್ಕಾರದ ಅನುದಾನದಡಿ ರಂಗಮಂದಿರ ಸ್ಥಾಪಿಸುತ್ತೇನೆ ಎಂದಿದ್ದರು. ಅದಕ್ಕೆ ಸಭೆ ಅನುಮತಿ ನೀಡಿತ್ತು. ಆದರೀಗ ಉದ್ಯಮ ನಿಧಿಯಲ್ಲಿ ಬಳಸುತ್ತಿರುವುದು ಸರಿಯಲ್ಲ ಎಂದು ದೂರಿದರು.

ಉದ್ಯಾನವನ, ಬಸ್ಟಾಂಡ್‌ ಮುಂತಾದ ಸ್ಥಳಗಳಿಂದ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಊರಿನ ಕಲ್ಪನೆಗಾಗಿ ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಕೌನ್ಸಿಲ್‌ ಅನುಮೋದನೆ ಪಡೆದ ಮೇಲೆ ಕಾಮಗಾರಿ ಮಂಜೂರಾಗಿದೆ. ಈಗ ವಿರೋಧ ಮಾಡುವುದು ಸರಿಯಲ್ಲ ಎಂದು ಹಿಂದಿನ ಅಧ್ಯಕ್ಷ, ಹಾಲಿ ಸದಸ್ಯ ಟಿ.ರಹಮತ್‌ ಉಲ್ಲಾ ಅಸಾದಿ ಆಕ್ಷೇಪಿಸಿದರು.

ADVERTISEMENT

ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ₹60, ₹70 ಲಕ್ಷ ದುರುಪಯೋಗ ಆಗಿರುವ ಬಗ್ಗೆ ಚರ್ಚೆಗಳು ನಡೆದಿದೆ. ತನಿಖೆಗೆ ಅವರನ್ನು ಒಳಗೊಂಡ 6 ಸದಸ್ಯರ ಸಮಿತಿ ರಚಿಸಿರುವುದು ಸರಿಯಲ್ಲ. ಅವರನ್ನು ಹೊರಗಿಟ್ಟು ತನಿಖೆ ನಡೆಸಬೇಕು. 17 ತಿಂಗಳು ಅಧ್ಯಕ್ಷ ಹುದ್ದೆಯಲ್ಲಿದ್ದು ಜೋಪಡಿ ಕುಟುಂಬಕ್ಕೆ ಹಕ್ಕುಪತ್ರ ಕೊಡಲಿಲ್ಲ. ಈಗ ಪತ್ರಿಕೆಗಳಲ್ಲಿ ಹಕ್ಕುಪತ್ರ ಕೊಡಲು ಒತ್ತಾಯಿಸುತ್ತಿದ್ದಾರೆ. ಆಗ ಕೊಡಲು ಏನಾಗಿತ್ತು ಎಂದು ಅಸಾದಿ ವಿರುದ್ಧ ಸದಸ್ಯರಾದ ಬಿ.ಗಣಪತಿ, ಜಯಪ್ರಕಾಶ್‌ ಶೆಟ್ಟಿ ಪ್ರಶ್ನಿಸಿದರು.

2010 ರಲ್ಲಿ ಆರಂಭವಾದ ಬಿಪಿಓ ಸೆಂಟರ್‌ ಬಾಡಿಗೆ ಕಡಿಮೆ ಪಡೆಯುತ್ತಿದ್ದೇವೆ. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಗ್ರಾಮೀಣರ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಅವಕಾಶ ಕಲ್ಪಿಸಿದ್ದೆ. ಆದರೆ ಯುವಕರಿಗೆ ಕೆಲಸ ಕೊಡುವ ಸಂಸ್ಥೆಯಾಗದೆ ಲಾಭ ಪಡೆಯುವ ಸಂಸ್ಥೆಯಾಗಿದೆ. ಬಾಡಿಗೆ ಪಡೆಯುವುದಕ್ಕೆ ಹಿಂಜರಿಯಬಾರದು ಎಂದು ಸಂದೇಶ ಜವಳಿ ಒತ್ತಾಯಿಸಿದರು.

ಮುಕ್ತಿ ಟ್ರಸ್ಟ್‌ ಗುತ್ತಿಗೆ ಅವಧಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದೆ. ಹಿಂದೆ ಮೃತಪಟ್ಟ ಸಂದರ್ಭದಲ್ಲಿ ಅಂತಿಮ ಸಂಸ್ಕಾರಕ್ಕೆ ಟ್ರಸ್ಟ್‌ ಆರಂಭಿಸಲಾಗಿತ್ತು. ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಎಲ್ಲಾ ಕಡೆಗಳಲ್ಲಿಯೂ ಹಣದ ಅಪೇಕ್ಷೆ ಸಲ್ಲ. ನವೀಕರಣ ಮಾಡುವಾಗ ಯೋಚನೆ ಮಾಡಬೇಕಿದೆ ಎಂದು ಜಯಪ್ರಕಾಶ್‌ ಶೆಟ್ಟಿ, ಅಸಾದಿ ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಂದೇಶ ಜವಳಿ ಮುಕ್ತಿ ಟ್ರಸ್ಟ್‌ 24/7 ಕೆಲಸ ಮಾಡುತ್ತಿದೆ. ಅಧಿಕಾರಿಗಳನ್ನು ನಂಬಿ ಈ ಪ್ರಮಾಣದ ಕೆಲಸ ಪಡೆಯಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಸಭೆ ಕರೆಯಲು ಸಿದ್ಧ ಎಂದರು.

ಉಪಾಧ್ಯಕ್ಷೆ ಗೀತಾ ರಮೇಶ್‌, ಮುಖ್ಯಾಧಿಕಾರಿ ಡಿ.ನಾಗರಾಜ ಇದ್ದರು.

ಕಾಂಗ್ರೆಸ್‌ ಸದಸ್ಯರದ್ದೆ ವಿರೋಧ

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಸದಸ್ಯರೇ ಪರಸ್ಪರ ಕಾಲೆಳೆದುಕೊಂಡರು. ಬಿಜೆಪಿ ಸದಸ್ಯರು ಕಾಂಗ್ರೆಸ್‌ ಸದಸ್ಯರ ನಾಟಕವನ್ನು ಮೌನವಾಗಿ ಆಲಿಸುವ ಮೂಲಕ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.