ಸಾಗರ: ಕನ್ನಡ ಕಾವ್ಯಕ್ಕೆ ಹೊಸ ಆಯಾಮ ಒದಗಿಸಿದ ಶ್ರೇಯಸ್ಸು ಸುಗಮ ಸಂಗೀತಕ್ಕೆ ಸಲ್ಲುತ್ತದೆ ಎಂದು ಹಿನ್ನೆಲೆ ಗಾಯಕಿ ಬಿ.ಕೆ. ಸುಮಿತ್ರಾ ಹೇಳಿದರು.
ಗಾಂಧಿನಗರ ಯುವಜನ ಸಂಘ ಶನಿವಾರ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರದ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಾವ್ಯದ ಅರ್ಥ ಸುಗಮ ಸಂಗೀತದಿಂದ ಮತ್ತಷ್ಟು ವಿಸ್ತಾರಗೊಂಡಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಭಾವತಿ ಅವರಿಗೆ `ಕಲಾ ಕುಸುಮ' ನಾಗರಾಜ್ ಅವರಿಗೆ `ಕಲಾ ಸ್ಫೂರ್ತಿ' ವಸುಧಾ ಶರ್ಮ ಅವರಿಗೆ `ಕಲಾ ಕೀರ್ತನಾ' ಸೀತಾ ಬಾಪಟ್ ಅವರಿಗೆ `ಕಲಾ ಚೈತನ್ಯ' ಶಾಂತ ಕುಮಾರಸ್ವಾಮಿ ಅವರಿಗೆ `ಕಲಾಶ್ರೀ' ರೇಖಾ ಪ್ರಹ್ಲಾದ್ರಾವ್ ಬಾಪಟ್ ಅವರಿಗೆ `ಸಾಂಘಿಕ ಶಕ್ತಿ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಗಾಂಧಿನಗರ ಯುವಜನ ಸಂಘದ ಅಧ್ಯಕ್ಷ ಎಂ.ಎನ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ, ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಎಸ್.ಆರ್. ತಿಮ್ಮಪ್ಪ ಹಾಜರಿದ್ದರು. ಚಿನ್ಮಯಿ ಪ್ರಾರ್ಥಿಸಿದರು. ಎಚ್.ಆರ್. ಶ್ರೀಧರ್ ಸ್ವಾಗತಿಸಿದರು. ಎಸ್.ಎಸ್. ರಮೇಶ್ ಪ್ರಾಸ್ತಾವಿಕ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.