ADVERTISEMENT

ಸೇವೆಗೆ ಸರ್ಕಾರಿ ನೌಕರಿ ಉತ್ತಮ ಮಾರ್ಗ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 9:40 IST
Last Updated 4 ಜುಲೈ 2012, 9:40 IST

ಕಾರ್ಗಲ್: ಸರ್ಕಾರಿ ನೌಕರಿಯ ಸೇವಾ ಜೀವನದಲ್ಲಿ ಪಡೆಯುವ ಬಡ್ತಿಗಳು ಜವಾಬ್ದಾರಿಗಳನ್ನು ಹೆಚ್ಚಿಸಿ, ಕರ್ತವ್ಯ ನಿಷ್ಠೆ ಮೆರೆಯಲು ಅವಕಾಶ ಕಲ್ಪಿಸುತ್ತದೆ ಎಂದು ಹೊಸನಗರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಗಿ ಬಡ್ತಿ ಪಡೆದು ವರ್ಗಾವಣೆಗೊಂಡಿರುವ ಆಲ್ವಿನ್ ಅಭಿಪ್ರಾಯಪಟ್ಟರು.

ಜೋಗದ ಶರಾವತಿ ಪ್ರಕೃತಿ ಶಿಬಿರ ಕ್ಯಾಂಪ್‌ನಲ್ಲಿ ಸೋಮವಾರ ಕಾರ್ಗಲ್ ಅರಣ್ಯ ವಲಯ ಇಲಾಖೆಯ ಸಿಬ್ಬಂದಿಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜನರ ಸೇವೆ ಮಾಡಲು ಸರ್ಕಾರಿ ನೌಕರಿ ಅತ್ಯುತ್ತಮ ಮಾರ್ಗವಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ಸಹಾಯ ಮಾಡುವ ಗುಣಗಳನ್ನು ನೌಕರರು ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿಷ್ಠೆಯ ಜತೆಗೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಮಾಜ ಸೇವಕಿ ಲಕ್ಷ್ಮೀರಾಜು ಮಾತನಾಡಿ, ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಆಲ್ವಿನ್ ಅರಣ್ಯ ಸಂರಕ್ಷಣೆಯ ಜತೆಗೆ ಜನಸಾಮಾನ್ಯರ ಕುಂದುಕೊರತೆಗಳಿಗೆ ಕಾನೂನು ಚೌಕಟ್ಟಿನ ಅಡಿಯಲ್ಲಿ ಸಹಾಯ ಮಾಡುತ್ತಿದ್ದರು. ಇಂತಹ ಅಧಿಕಾರಿಗಳು ಯುವ ಜನತೆಗೆ ಮಾದರಿ ಆಗಿದ್ದಾರೆ ಎಂದು ತಿಳಿಸಿದರು.

ರಂಗಭೂಮಿ ಕಲಾವಿದ ಸಿದ್ದರಾಜು ಜೋಗ, ಪಂಚಾಯ್ತಿ ಅಧ್ಯಕ್ಷ ಕೆ.ಸಿ. ಹರೀಶ್‌ಗೌಡ, ರಾಜೇಂದ್ರ ಇನ್ನಿತರರು ಆಲ್ವಿನ್ ಅವರ ಸಮಾಜಮುಖಿ ಧೋರಣೆಗಳ ಬಗ್ಗೆ ಮಾತನಾಡಿದರು. ಸಹಾಯಕ ವಲಯ ಅರಣ್ಯಾಧಿಕಾರಿ ಅಶೋಕ್ ಸ್ವಾಗತಿಸಿ, ರಾಮಚಂದ್ರಪ್ಪ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.