ಶಿವಮೊಗ್ಗ: ಮಕ್ಕಳಲ್ಲಿ ಕಂಡುಬರುವ ಹೃದಯ ರಂಧ್ರ ಸಮಸ್ಯೆಗೆ ನಗರದ ಹರಕೆರೆಯ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆ ಆಧುನಿಕ ತಂತ್ರಜ್ಞಾನದೊಂದಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದೆ.
ಆಯನೂರು ಗ್ರಾಮದ ತನುಶ್ರೀ (7) ಮತ್ತು ಹೊಳಲೂರಿನ ಸುಮಯಾ ಭಾನು (4) ಎಂಬ ಇಬ್ಬರು ಮಕ್ಕಳಿಗೆ ಹೃದಯ ರಂಧ್ರ ಸಮಸ್ಯೆಗೆ ಬಟನ್ ಡಿವೈಸ್ ವಿಧಾನದಲ್ಲಿ ಗಾಯರಹಿತ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಹೃದಯ ರೋಗದ ಮುಖ್ಯಸ್ಥ ಡಾ.ರಘುಪ್ರಸಾದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಕ್ಕಳಲ್ಲಿ ಕಂಡುಬರುವ ಹೃದಯದ ರಂಧ್ರ ಸಮಸ್ಯೆ ಅನುವಂಶೀಯವಾಗಿ ಬರುವ ಸಾಧ್ಯತೆಗಳು ಹೆಚ್ಚು. ಕಾಯಿಲೆ ಇರುವ ಮಗು ಬೆಳೆದಂತೆ ಸಮಸ್ಯೆಯೂ ಉಲ್ಬಣವಾಗುತ್ತದೆ. ಇದನ್ನು ಗುಣಪಡಿಸುವುದು ಸಹ ಕಷ್ಟವಾಗುತ್ತದೆ. ಈ ಮೊದಲು ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಬೇಕಿತ್ತು. ಇದರಿಂದ ರೋಗಿ ಹೆಚ್ಚಿನ ನೋವು ಅನುಭವಿಸಬೇಕಿತ್ತು. ಅಲ್ಲದೆ, ದೇಹದ ಮೇಲೆ ಕಲೆ ಉಳಿದುಕೊಳ್ಳುತ್ತಿತ್ತು.
ಹೆಣ್ಣುಮಕ್ಕಳು ಈ ಕಾಯಿಲೆಗೆ ಚಿಕಿತ್ಸೆ ಪಡೆದರೆ ಮುಂದೆ ಅವರ ಮದುವೆಗೆ ಸಮಸ್ಯೆ ಆಗುತ್ತಿತ್ತು. ಹೊಸ ತಂತ್ರಜ್ಞಾನದಿಂದ ಸರಳ ಹಾಗೂ ಸುಲಭವಾಗಿ ಚಿಕಿತ್ಸೆ ನೀಡಬಹುದು ಎಂದು ಮಾಹಿತಿ ನೀಡಿದರು.
ಈ ಚಿಕಿತ್ಸೆ ಪಡೆಯಲು ಈ ಮೊದಲು ಬೆಂಗಳೂರು, ಮುಂಬೈ ಅಂತಹ ನಗರಗಳಿಗೆ ಹೋಗಬೇಕಿತ್ತು. ಈಗ ಶಿವಮೊಗ್ಗದಲ್ಲೇ ಚಿಕಿತ್ಸೆ ಲಭ್ಯವಿದೆ. ಆಧುನಿಕ ಚಿಕಿತ್ಸೆಯಿಂದ ರೋಗಿ ಮೂರು-ನಾಲ್ಕು ದಿನಗಳಲ್ಲೇ ಗುಣಮುಖವಾಗಿ ಮನೆಗೆ ಹಿಂತಿರುಗಬಹುದು ಎಂದರು.
ಪ್ರತಿ 1ಸಾವಿರ ನವಜಾತ ಶಿಶುಗಳಲ್ಲಿ 8 ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ಪ್ರತಿ ವಾರದಲ್ಲಿ ಸರಾಸರಿ 5ಮಕ್ಕಳು ಈ ಕಾಯಿಲೆಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಈ ಚಿಕಿತ್ಸೆಗೆ ರೂ 1.2 ಲಕ್ಷದಿಂದ 1.5 ಲಕ್ಷ ಖರ್ಚು ತಗಲುತ್ತದೆ. ಆರ್ಥಿಕವಾಗಿ ತುಂಬಾ ಹಿಂದುಳಿದವರಿಗೆ ರಿಯಾಯ್ತಿ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ನಿರ್ದೇಶಕ ಡಾ.ಶ್ರೀನಿವಾಸ್ ಎಂ.ಕರೆ ಮತ್ತು ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.