ಶಿವಮೊಗ್ಗ: ಫ್ರೆಂಡ್ಸ್ ಸೆಂಟರ್ನ ನೇತ್ರ ಹಾಗೂ ರಕ್ತ ಭಂಡಾರದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ತಮ್ಮ ಶಾಸಕ ನಿಧಿಯಿಂದ ರೂ 10 ಲಕ್ಷ ಅನುದಾನ ನೀಡುವುದಾಗಿ ಶಾಸಕ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ನಗರದ ಗೋಪಾಳಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿ ಭಾನುವಾರ ಫ್ರೆಂಡ್ಸ್ ಸೆಂಟರ್ನ ನೂತನ ನೇತ್ರ ಹಾಗೂ ರಕ್ತ ಭಂಡಾರ ಕಟ್ಟಡ ಉದ್ಘಾಟನೆ ಹಾಗೂ ಹೆಚ್ಚುವರಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಇಡೀ ಸಮಾಜ ಒಂದಾಗಬೇಕೆಂಬ ಕನಸು ಕಂಡಿದ್ದರು. ಈ ಕನಸು ನನಸಾಗಬೇಕಾದರೆ ಸಂಘ- ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಜಾತಿ ಭೇದ ಮರೆತು ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದರು.
ಇದಕ್ಕೂ ಮೊದಲು ನೂತನ ನೇತ್ರ ಹಾಗೂ ರಕ್ತ ಭಂಡಾರ ಕಟ್ಟಡವನ್ನು ಫ್ರೆಂಡ್ಸ್ ಸೆಂಟರ್ನ ಸ್ಥಾಪಕ ಅಧ್ಯಕ್ಷ ಎಚ್.ಎನ್. ಉಮಾಶಂಕರ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಫ್ರೆಂಡ್ಸ್ ಸೆಂಟರ್ ನೇತ್ರ ಭಂಡಾರದ ಕಾರ್ಯದರ್ಶಿ ವಿಜಯಕುಮಾರ್, ಅಧ್ಯಕ್ಷ ವಿ. ನಾಗರಾಜ್, ಐಎನ್ಜಿ ವೈಶ್ಯಬ್ಯಾಂಕ್ ನೌಕರರ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕೆ.ಜಿ. ರಾಮಕಷ್ಣರೆಡ್ಡಿ, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಂ.ಎನ್. ವೆಂಕಟೇಶ್, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.