ADVERTISEMENT

ಹೈಟೆಕ್ ಖಾಸಗಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ಚಾಲನೆ

ಹೊಸನಗರ: ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 7:02 IST
Last Updated 15 ಡಿಸೆಂಬರ್ 2012, 7:02 IST

ಹೊಸನಗರ: ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ಪಟ್ಟಣ ಪಂಚಾಯ್ತಿಗಳಿಗೆ ಸುಮಾರು ್ಙ 5 ಕೋಟಿ ವಿಶೇಷ ಅನುದಾನವನ್ನು ಬಿಜೆಪಿ ಸರ್ಕಾರ ನೀಡಿದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸುಸಜ್ಜಿತ ಖಾಸಗಿ ಬಸ್‌ನಿಲ್ದಾಣ, ಬಗರ್‌ಹುಕುಂ ಸಾಗುವಳಿ ವಿತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡ ಬಡವರಿಗೆ ಹಕ್ಕುಪತ್ರವನ್ನು ನೀಡುವ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದರು.

ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಡಿಯಲ್ಲಿ ಹೊಸನಗರ ತಾಲ್ಲೂಕಿನ ಸುಮಾರು ್ಙ13 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸಿದ್ದೇನೆ. ಚುನಾವಣೆಗಾಗಿ ವಿರೋಧಿಗಳ ಸುಳ್ಳು ಆರೋಪಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅರುಣ್‌ಕುಮಾರ್, ಉಪಾಧ್ಯಕ್ಷ ಗುಲಾಬಿ ಮರಿಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುಜಾತ ಉಡುಪ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಜಿ.ಪಂ. ಸದಸ್ಯೆ ಶುಭ ಕೃಷ್ಣಮೂರ್ತಿ  ಹಾಜರಿದ್ದರು.ಶ್ರೀಪತಿರಾವ್ ಸ್ವಾಗತಿಸಿದರು. ಮಲ್ಲಿಕಾರ್ಜುನ್ ಪ್ರಾಸ್ತಾವಿಕ ಮಾತನಾಡಿದರು. ಕೆ. ಇಲಿಯಾಸ್ ವಂದಿಸಿದರು.

ಸಾಮೂಹಿಕ ಉದ್ಘಾಟನೆ
ಅಗ್ನಿಶಾಮಕ ದಳದ ಕಟ್ಟಡ, ಅಂಬೇಡ್ಕರ್ ಭವನ, ಮಾರಿಗುಡ್ಡದಲ್ಲಿ ನೀರಿನ ಟ್ಯಾಂಕ್, ಪೌರಸೇವಾ ಭವನ, ಘನ ತ್ಯಾಜ್ಯ ನಿರ್ಮೂಲನಾ ಘಟಕ, ಉದ್ಯಾನ, ರಂಗಮಂದಿರ, ಮುಕ್ತಿವಾಹಿನಿ, ಕಸ ವಿಲೇವಾರಿ ಟಿಪ್ಪರ್ ಹೀಗೆ ಸಾಮೂಹಿಕವಾಗಿ ಕಾಮಗಾರಿ ಉದ್ಘಾಟಿಸಲಾಯಿತು.

ಬಿಎಸ್‌ವೈ ಫ್ಲೆಕ್ಸ್‌ಗೆ ಮಸಿ, ಬಿವೈಆರ್ ಕಿಡಿ
ಉದ್ಘಾಟನಾ ಫ್ಲಕ್ಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಖಕ್ಕೆ ಕಿಡಿಗೇಡಿಗಳು ಮಸಿ ಬಳಿದಿರುವ ಬಗ್ಗೆ ಸಂಸತ್ ಸದಸ್ಯ ಹಾಗೂ ಬಿಎಸ್‌ವೈ ಪುತ್ರ ಬಿ.ವೈ. ರಾಘವೇಂದ್ರ ಖಾರವಾಗಿ ಟೀಕಿಸಿದರು.

ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಅವರ ಜನಹಿತ ಸೇವಾ ಕಾರ್ಯಗಳು ಜನರ ನೆನಪಿನ ಆಳದಲ್ಲಿದೆ. ಈ ಮೂಲಕ ಅವರಿಗೆ ಅವಮಾನ ಮಾಡಿರುವುದು ದೊಡ್ಡವರ ಸಣ್ಣತನ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.