ADVERTISEMENT

‘ಸುಪ್ರೀಂಕೋರ್ಟ್ ಗೆ ನೀಡಿದ ವರದಿ ಹಿಂಪಡೆಯಿರಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 6:45 IST
Last Updated 18 ಡಿಸೆಂಬರ್ 2013, 6:45 IST

ಶಿವಮೊಗ್ಗ: ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸುಪ್ರೀಂಕೋರ್ಟ್ ನಲ್ಲಿ ವಕೀಲರನ್ನು ನೇಮಿಸಬೇಕು ಹಾಗೂ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿರುವುದನ್ನು ಹಿಂಪಡೆಯಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ)ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಸರ್ಕಾರ ವನ್ನು ಒತ್ತಾಯಿಸಿದರು.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರೈತರ ಹಿತ ಕಾಪಾಡಲು ವಕೀಲರನ್ನು ನೇಮಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಕೀಲರನ್ನು ಹಿಂದಕ್ಕೆ ಕರೆಸಿಕೊಂಡಿರುವುದು ಸರಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಕೆ ನಿಷೇಧ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನ್ಯಾಯಾಲಯ ಸೂಚಿಸಿದರೆ, ನಿಷೇಧ ಮಾಡುವುದು ಅನಿವಾರ್ಯ ವಾಗುತ್ತದೆ. ಆದ್ದರಿಂದ, ನಿಷೇಧ ಮಾಡುವ ಹಂತಕ್ಕೆ ತಲುಪುವ ಮುನ್ನ ಸರ್ಕಾರ ಅಡಿಕೆ ಹಾನಿಕಾರಕವಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಅಕ್ಕಿ ಗಿರಣಿಗಳ ಮೇಲೆ ಹೆಚ್ಚು ಲೇವಿ ವಿಧಿಸುವುದರ ವಿರುದ್ಧ ಗಿರಣಿ ಮಾಲಿಕರು ನಡೆಸುತ್ತಿರುವ ಹೋರಾಟಕ್ಕೆ ರೈತ ಸಂಘದ ಬೆಂಬಲವಿದೆ ಎಂದರು.

21ಕ್ಕೆ ಶ್ರದ್ಧಾಂಜಲಿ ಸಭೆ
ಡಿ.21ರಂದು ಬೆಳಿಗ್ಗೆ 11ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ರೈತ ಸಂಘದ ಸ್ಥಾಪಕ ದಿ.ಡಿ.ಎನ್.ಸುಂದರೇಶ್ ನೆನಪಿನ ಸಭೆ ಹಾಗೂ ಬೆಳಗಾವಿ ಸುವರ್ಣ ಸೌಧದ ಎದುರು ನಿಧನ ಹೊಂದಿದ ವಿಠ್ಠಲ ಭೀಮಪ್ಪ ಅರಭಾವಿರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರೈತ ಮುಖಂಡ ಕಡಿದಾಳು ಶಾಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷರಾದ ಅನುಸೂಯಮ್ಮ, ಖಾಜಾ ಹುಸೇನ್ ನಿಯಾಜಿ, ಕುರುವ ಗಣೇಶ್, ಜಡಿಯಪ್ಪ ದೇಸಾಯಿ, ಎಂ.ಮಹೇಶ್, ಖಜಾಂಚಿ ಡಾ.ಬಿ.ಎಂ.ಚಿಕ್ಕಸ್ವಾಮಿ, ಸಂಚಾಲಕ ಸುಧಾಂಶು ಮತ್ತಿತರರು ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಕಡಿದಾಳು ಶಾಮಣ್ಣ, ಎಸ್.ಶಿವಮೂರ್ತಿ, ಡಾ.ಬಿ.ಎಂ. ಚಿಕ್ಕಸ್ವಾಮಿ, ವೈ.ಜಿ.ಮಲ್ಲಿ ಕಾರ್ಜುನ, ಹಿಟ್ಟೂರು ರಾಜು, ವಸಂತ್ ಕುಮಾರ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.