ADVERTISEMENT

ಸಾಮಾಜಿಕ ಬದಲಾವಣೆಗಾಗಿ ಅಂಬಿಗರ ಚೌಡಯ್ಯ ಶ್ರಮಿಸಿದ್ದರು: ಶಾಸಕ ಬಿ.ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 7:08 IST
Last Updated 22 ಜನವರಿ 2018, 7:08 IST

ಶಿಕಾರಿಪುರ: ಸಾಮಾಜಿಕ ಬದಲಾವಣೆ ತರಲು ಶರಣ ಅಂಬಿಗರ ಚೌಡಯ್ಯ ಶ್ರಮಿಸಿದ್ದರು ಎಂದು ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಗಂಗಾ ಮತಸ್ಥರ ಸಮಾಜ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಯಕ ಮೌಲ್ಯವನ್ನು ಸಮಾಜಕ್ಕೆ ಸಾರುವ ಕಾರ್ಯವನ್ನು ಅಂಬಿಗರ ಚೌಡಯ್ಯ ಮಾಡಿದ್ದರು. ಇಂತಹ ಶರಣರ ತತ್ವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಜೀವನ ನಡೆಸಿದಾಗ ಮಾತ್ರ ಆಚರಣೆ ಸಾರ್ಥಕವಾಗುತ್ತದೆ. ಸಮಾಜದ ಅಭಿವೃದ್ಧಿಗಾಗಿ ಕೊಡುಗೆ ನೀಡಿದ ಇಂತಹ ಶಿವ ಶರಣರನ್ನು ಜಾತಿಗೆ ಸೀಮಿತಗೊಳಿಸಬಾರದು ಎಂದು ಕಿವಿಮಾತು ಹೇಳಿದರು.

ಅಂಬಿಗರ ಚೌಡಯ್ಯ ಜೀವನ ಕುರಿತು ಶಿಕ್ಷಕ ಕುಸ್ಕೂರು ರಾಜು ಮಾತನಾಡಿ, ‘ಅಂಬಿಗರ ಚೌಡಯ್ಯ ಕಾಯಕದ ಮಹತ್ವವನ್ನು ಸಮಾಜಕ್ಕೆ ಸಾರಿದ್ದರು. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದರು. ಮಠ ದೇವಸ್ಥಾನಗಳ ಅಸ್ತಿತ್ವವನ್ನು ಧಿಕ್ಕರಿಸುವ ಮೂಲಕ ವೇದ ಪುರಾಣಗಳು ಶ್ರೇಷ್ಠವಲ್ಲ ಎಂದು ಟೀಕಿಸಿದ್ದರು’ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್‌.ಪಿ. ನರಸಿಂಗನಾಯ್ಯ, ರೇಣುಕಾ ಹನುಮಂತಪ್ಪ, ತಹಶೀಲ್ದಾರ್ ಬಿ. ಶಿವಕುಮಾರ್‌, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶಿಲ್ಪಾ ಮೌನೇಶ್‌, ಇಒ ಆನಂದ್‌ಕುಮಾರ್, ಪ್ರೊಬೇಷನರಿ ತಹಶೀಲ್ದಾರ್‌ ರಶ್ಮಿ, ಪುರಸಭೆ ಸದಸ್ಯ ಕೆ.ಜಿ. ವಸಂತಗೌಡ್ರು, ಸಮಾಜ ಮುಖಂಡರಾದ ಶಿವಪ್ಪ, ಲೋಕೇಶ್‌, ಸತ್ಯನಾರಾಯಣ್‌, ಶಿರಾಳಕೊಪ್ಪ ಎಂ. ನವೀನ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.