
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಂಪರೆಯ ಎಲ್ಲ ಜಾಯಮಾನದ ಕೃತಿಗಳನ್ನು ಪರಿಚಯಿಸುವುದು ಓ.ಎಲ್. ನಾಗಭೂಷಣ ಸ್ವಾಮಿ ಅವರ ‘ವಿಮರ್ಶೆಯ ಪರಿಭಾಷೆ’ ಕೃತಿಯ ವಿಶೇಷತೆ ಎಂದು ವಿಮರ್ಶಕ ಪ್ರೊ.ಸಿರಾಜ್ ಅಹಮದ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ, ಸ್ನೇಹ ಬಳಗ ಭಾನುವಾರ ಏರ್ಪಡಿಸಿದ್ದ ‘ವಿಮರ್ಶೆಯ ಪರಿಭಾಷೆ’ ಕೃತಿಯ ಲೇಖಕರೊಂದಿಗಿನ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಿಮರ್ಶೆಯ ಪರಿಭಾಷೆಯಲ್ಲಿನ ಬರಹಗಳು ಮೇಲ್ನೋಟಕ್ಕೆ ಅನುವಾದದ ಕೆಲಸ ಅನಿಸಿದರೂ ಕನ್ನಡದ ಪ್ರಮುಖ ಕೃತಿಗಳ ತುಲನಾತ್ಮಕ, ನಿರ್ದೇಶನಾತ್ಮಕ ವಿವರಗಳ ಆಕರಗಳೊಂದಿಗೆ ಅದು ಬೆಳೆದಿದೆ. ಕನ್ನಡದಲ್ಲೂ ಒಂದು ಸ್ವತಂತ್ರ ಸಂವೇದನೆ ಸಾಧ್ಯ ಎಂಬುದನ್ನು ನಿರೂಪಿಸಿದ ಕೃತಿ ಇದು’ ಎಂದು ವಿಶ್ಲೇಷಿಸಿದರು.
‘ತಾತ್ವಿಕತೆಯ ಜೊತೆಗೆ ಅನುಭಾವ ಸಾಹಿತ್ಯವನ್ನು ಭಿನ್ನ ನೆಲೆಯಲ್ಲಿ ಚರ್ಚಿಸುತ್ತ ಏಕ ಕಾಲದಲ್ಲಿ ವಿವರಣೆ, ಸಂಗ್ರಹ ರೂಪದ ಮಾಹಿತಿ, ವ್ಯಾಖ್ಯಾನ, ವಿಮರ್ಶೆ ಇವುಗಳ ಮೂಲಕ ಓದುಗರ ಸಂವೇದನೆ ಓ.ಎಲ್.ಎನ್ ವಿಸ್ತರಿಸುವ ಕೆಲಸ ಮಾಡಿದ್ದಾರೆ. ಸಾಹಿತ್ಯ ಬರವಣಿಗೆ ಹೋಗಬೇಕಾದ ದಾರಿಯ ಜೊತೆಗೆ ತಲುಪಿಸಬೇಕಾದ ಗುರಿಯನ್ನೂ ಸ್ಪಷ್ಟಪಡಿಸುವುದನ್ನು ಈ ಕೃತಿಯಲ್ಲಿ ಗುರುತಿಸಬಹುದಾಗಿದೆ’ ಎಂದರು.
ಲೇಖಕ ರಾಜೇಂದ್ರ ಚೆನ್ನಿ ಮಾತನಾಡಿ, ‘ತಳಸ್ಪರ್ಶಿ ಅಧ್ಯಯನದ ಮೂಲಕ ಕನ್ನಡದ ಮನಸ್ಸು, ತಿಳಿವಳಿಕೆ, ವಿದ್ವತ್ತನ್ನು ಬೆಸೆದಿರುವ ಕೃತಿ ವಿಮರ್ಶೆಯ ಪರಿಭಾಷೆ. ಜಾಗತಿಕವಾದ ವಿದ್ವತ್ತನ್ನು ಕೃತಿ ತನ್ನೊಳಗೆ ಅರಗಿಸಿಕೊಂಡಿದೆ. ಕೃತಿಯಲ್ಲಿನ ಉದ್ದರಣೆಗಳ ಜೊತೆಗೆ ಮತ್ತೂ ಏನನ್ನು ಓದಬಹುದು ಎಂಬ ಅಪರೂಪದ ಮಾಹಿತಿಗಳನ್ನು ಲೇಖಕರು ಒದಗಿಸಿದ್ದಾರೆ’ ಎಂದು ಹೇಳಿದರು.
‘ಸಾಹಿತ್ಯದ ಗ್ರಹಿಕೆಗಳ ವಿವಿಧ ಮಾರ್ಗಗಳನ್ನು ತಮ್ಮ ಕೃತಿಯಲ್ಲಿ ಶೋಧಿಸಿರುವ ಓ.ಎಲ್.ಎನ್. ಈ ಮೂಲಕ ಹೊಸತಲೆಮಾರನ್ನು ಅರ್ಥಪೂರ್ಣ ಓದಿಗೆ ತಯಾರು ಮಾಡುವ ಉತ್ಸಾಹವನ್ನು ಪ್ರಕಟಪಡಿಸುವ ಜೊತೆಗೆ ಸೈದ್ಧಾಂತಿಕ ತಿಳಿವಳಿಕೆ ನೀಡುವುದು ಕೃತಿಯ ಮಹತ್ವ ಹೆಚ್ಚಿಸಿದೆ’ ಎಂದರು.
ಪ್ರಕಾಶಕ ಎಂ.ಬಿ.ನಟರಾಜ್ ಮಾತನಾಡಿ, ‘ವಿಮರ್ಶೆಯ ಪರಿಭಾಷೆ ಕೃತಿಯ ರಚನೆಯ ಹಿಂದೆ ಲೇಖಕರ 10 ವರ್ಷಗಳ ಶ್ರಮವಿದೆ. ಇಂಗ್ಲಿಷ್ ಸಾಹಿತ್ಯವಲ್ಲದೆ ಗ್ರೀಕ್ ಸಾಹಿತ್ಯದ ಪಾರಿಭಾಷಿಕ ಪದಗಳನ್ನೂ ಒಳಗೊಂಡಿರುವ ಈ ಕೃತಿ ಪೂರ್ಣಚಂದ್ರ ತೇಜಸ್ವಿಯಂತಹ ಲೇಖಕರಿಗೆ ಪ್ರೇರಣೆ ನೀಡಿದೆ’ ಎಂದು ತಿಳಿಸಿದರು.
ವಿಜಯಶ್ರೀ ಪ್ರಾರ್ಥಿಸಿದರು. ಸವಿತಾ ನಾಗಭೂಷಣ ಸ್ವಾಗತಿಸಿದರು. ರಾಜು ವಂದಿಸಿದರು. ರೇಖಾಂಬ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.