ADVERTISEMENT

ಹೊಸಮನೆ ಬಳಿ ಕುಸಿದ ಕಂದಕ: ಹೆಚ್ಚಿದ ಆತಂಕ

ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತೊಂದರೆ; ಪರಿಹಾರಕ್ಕೆ ಆಗ್ರಹ

ರವಿ ನಾಗರಕೊಡಿಗೆ
Published 2 ಮೇ 2021, 6:23 IST
Last Updated 2 ಮೇ 2021, 6:23 IST
ಹೊಸಮನೆ ಬಳಿ ಹಾದು ಹೋಗುವ ರಾಣೆಬೆನ್ನೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿ 766ರ ಪಕ್ಕದಲ್ಲಿ ಗುಂಡಿ ಬಿದ್ದು ಆತಂಕಕ್ಕೆ ಎಡೆ ಮಾಡಿರುವುದು
ಹೊಸಮನೆ ಬಳಿ ಹಾದು ಹೋಗುವ ರಾಣೆಬೆನ್ನೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿ 766ರ ಪಕ್ಕದಲ್ಲಿ ಗುಂಡಿ ಬಿದ್ದು ಆತಂಕಕ್ಕೆ ಎಡೆ ಮಾಡಿರುವುದು   

ಹೊಸನಗರ: ತಾಲ್ಲೂಕಿನ ಹೊಸಮನೆ ಬಳಿ ಹಾದು ಹೋಗುವ ರಾಣೆಬೆನ್ನೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಳೆದ ವರ್ಷದ ಭಾರಿ ಮಳೆಗೆ ಧರೆ ಕುಸಿದು ಬೃಹತ್ ಕಂದಕ ನಿರ್ಮಾಣವಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.

ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮನೆ ಬಸ್‌ ನಿಲ್ದಾಣ ಬಳಿಯ ತಿರುವಿನಲ್ಲಿ ಮಳೆಗಾಲದ ನೀರು ಹರಿಯಲು ಕಿರು ಚರಂಡಿ ನಿರ್ಮಿಸಲಾಗಿತ್ತು. ಮಳೆ ನೀರು ಹರಿಯುವಾಗ ಸಣ್ಣಪುಟ್ಟ ಗುಂಡಿ ನಿರ್ಮಾಣವಾಗಿ ಸಂಚಾರಕ್ಕೆ ಕಿರಿಕಿರಿಯಾಗುತ್ತಿತ್ತು. ಈ ಬಾರಿ ತುಸು ಹೆಚ್ಚೇ ಧರೆ ಕುಸಿತ ಕಂಡು ಬಂದ ಕಾರಣ ಬೃಹತ್ ಗುಂಡಿ ನಿರ್ಮಾಣವಾಗಿದೆ. ಹೆದ್ದಾರಿಗೆ ತಾಗಿಕೊಂಡಂತೆ ಗುಂಡಿ ಬಿದ್ದಿರುವುದರಿಂದ ಹೆದ್ದಾರಿ ಸಂಚಾರಕ್ಕೆ ಸಂಕಷ್ಟ ಎದುರಾಗಬಹುದು ಎಂಬುದು ಸ್ಥಳೀಯರ ಆತಂಕವಾಗಿದೆ.

ಕಳೆದ ಮಳೆಗಾಲದ ಸಂದರ್ಭದಲ್ಲೇ ಕುಸಿತ ಉಂಟಾಗಿದ್ದರೂ ಈವರೆಗೆ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ. ಪ್ರತಿವರ್ಷ ಮಳೆ ಬಂದ ವೇಳೆ ಕುಸಿತ ಕಾಣುತ್ತಿರುವ ಕಾರಣ ಸಮರ್ಪಕ ಕಾಮಗಾರಿ ಅಗತ್ಯವಾಗಿದೆ. ಸಂಚಾರಕ್ಕೆ ಸಂಕಷ್ಟ ಎದುರಾಗುವ ಮುನ್ನ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ADVERTISEMENT

ದೂರದಲ್ಲಿ ತಡೆಗೋಡೆ: ರಸ್ತೆ ತಿರುವಿನಲ್ಲಿ ಧರೆ ಕುಸಿದು ಕಂದಕ ಬಿದ್ದಿದೆ. ಅಲ್ಲೇ ತಡೆಗೋಡೆ ನಿರ್ಮಾಣ ಮಾಡಬೇಕಾದ ಹೆದ್ದಾರಿ ಪ್ರಾಧಿಕಾರ ಅದರಿಂದ ದೂರದಲ್ಲಿ ತಡೆಗೋಡೆ ನಿರ್ಮಿಸಿದೆ. ತಡೆಗೋಡೆ ಕಾಮಗಾರಿಗೆ ವಿರೋಧವಿಲ್ಲ. ಆದರೆ, ಆತಂಕಕ್ಕೆ ಈಡು ಮಾಡಿರುವ ಗುಂಡಿಯ ಬಗ್ಗೆ ಮಾತ್ರ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂಬುದು ಸಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನ ದಟ್ಟಣೆ: ರಾಣೆಬೆನ್ನೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಾಹನ ದಟ್ಟಣೆ ಹೆಚ್ಚಿದೆ. ಸಾಗರ ಹೊಸನಗರ ಮಾರ್ಗವಾಗಿ ಪ್ರವಾಸಿಗರ ವಾಹನಗಳು ಕೂಡ ಹೆಚ್ಚು ಸಂಚರಿಸುತ್ತವೆ. ಅಲ್ಲದೆ ಮಾರುತಿಪುರ, ಹರತಾಳು, ಪುರಪ್ಪೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಗಳ ಜನ ತಾಲ್ಲೂಕು ಕೇಂದ್ರ ಹೊಸನಗರಕ್ಕೆ ಸಂಪರ್ಕಕ್ಕೆ ಇದೇ ಹೆದ್ದಾರಿ ರಹದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.