ಶಿವಮೊಗ್ಗ: ‘ದಶಕಗಳ ಹಿಂದೆ ಆಧಾರ್ ಕಾರ್ಡ್ ಪಡೆದವರು ಹಾಗೂ ಈವರೆಗೂ ದಾಖಲೆಗಳನ್ನು ನವೀಕರಿಸದೇ ಇರುವವರು ಶೀಘ್ರವೇ ತಮ್ಮ ಮಾಹಿತಿಯನ್ನು ನವೀಕರಣ ಮಾಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ತಿಳಿಸಿದರು..
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳ ಆಧಾರ್ ನೋಂದಣಿಯನ್ನು ಪೋಷಕರು ಕಡ್ಡಾಯವಾಗಿ ಮಾಡಿಸಬೇಕು. ಇಲ್ಲಿ ಐದು ವರ್ಷದ ಅವಧಿ ಪೂರ್ಣಗೊಂಡ 92,317 ಮಕ್ಕಳಿದ್ದು, 15 ವರ್ಷ ಮೇಲ್ಪಟ್ಟ 85,209 ಮಕ್ಕಳಿದ್ದಾರೆ. ವಾಸ ಸ್ಥಳದ ವಿವರಗಳನ್ನು ಸಮೀಪದ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಆಧಾರ್ ಸೇವಾ ಕೇಂದ್ರಗಳಲ್ಲಿ ಸಲ್ಲಿಸಿ, ತಿದ್ದುಪಡಿ ಮಾಡಿಕೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 27,533 ಮಕ್ಕಳು ಈವರೆಗೆ ಆಧಾರ್ ನೋಂದಣಿ ಮಾಡಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಲ್ಲಿಯೇ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿ ಆಧಾರ್ ನೋಂದಾಯಿಸಿಕೊಳ್ಳಬಹುದಾಗಿದ್ದು, ಶಾಲಾ ಶಿಕ್ಷಕರಿಗೆ ನೋಂದಣಿ ತರಬೇತಿ ನೀಡಲಾಗಿದೆ ಎಂದರು.
ಯಾವುದೇ ಆಧಾರ್ ಕೇಂದ್ರವು ಅನಧಿಕೃತ, ವಂಚನೆಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದರೆ, ಅಕ್ರಮ ವಲಸಿಗರು ಆಧಾರ್ಗೆ ದಾಖಲಾಗಲು ಪ್ರಯತ್ನಿಸಿದರೆ, ಜಿಲ್ಲಾ ಕಾನೂನು ಜಾರಿ ಪ್ರಾಧಿಕಾರ (ಪೊಲೀಸ್ ಅಧೀಕ್ಷಕರು) ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಆಧಾರ್ ಕಾಯ್ದೆ ಅನ್ವಯ ಜಿಲ್ಲಾ ಸಮಿತಿಯು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.